ಬಿಎಂಟಿಸಿ ಅಧ್ಯಕ್ಷರಾದ ನಂದೀಶ್ ರೆಡ್ಡಿ; ಕೆ. ಆರ್. ಪುರ ಬಂಡಾಯ?
ಬೆಂಗಳೂರು, ನವೆಂಬರ್ 07 : ಮಾಜಿ ಶಾಸಕ, ಬಿಜೆಪಿ ನಾಯಕ ಎನ್. ನಂದೀಶ್ ರೆಡ್ಡಿ ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನಂದೀಶ್ ರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಯಡಿಯೂರಪ್ಪ ಕೆ. ಆರ್. ಪುರ ಕ್ಷೇತ್ರದ ಬಂಡಾಯ ತಗ್ಗಿಸಲು ಮೊದಲ ಹೆಜ್ಜೆ ಇಟ್ಟಿದ್ದರು.
ಗುರುವಾರ ಬಿಎಂಟಿಸಿ ಅಧ್ಯಕ್ಷರಾಗಿ ನಂದೀಶ್ ರೆಡ್ಡಿ ಅಧಿಕಾರ ಸ್ವೀಕರಿಸಿದರು. ಸಚಿವ ಆರ್.ಅಶೋಕ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಿಎಂಟಿಸಿ ಎಂಡಿ ಸಿ. ಶಿಖಾ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆ. ಆರ್. ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ ಅನರ್ಹಗೊಂಡಿದ್ದಾರೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲು ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಆದರೆ, ಬಿಜೆಪಿ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ.
ಕಾಂಗ್ರೆಸ್ ಕೆ. ಆರ್. ಪುರ ಕ್ಷೇತ್ರಕ್ಕೆ ಎಂ.ನಾರಾಯಣ ಸ್ವಾಮಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಜೆಪಿ ಟಿಕೆಟ್ ಪಡೆಯುವ ರೇಸ್ನಲ್ಲಿ ಮಾಜಿ ಶಾಸಕ ಎನ್. ನಂದೀಶ್ ರೆಡ್ಡಿ ಅವರು ಇದ್ದರು. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರ ಅಸಮಾಧಾನ ಶಮನಗೊಳಿಸಲು ಪ್ರಯತ್ನ ನಡೆಸಲಾಗಿದೆ.

ಬಿಎಂಟಿಸಿ ಅಧ್ಯಕ್ಷರಾಗಿ ನೇಮಕ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾಜಿ ಶಾಸಕ, ಬಿಜೆಪಿ ನಾಯಕ ಎನ್. ನಂದೀಶ್ ರೆಡ್ಡಿಯನ್ನು ಬಿಎಂಟಿಸಿ ಅಧ್ಯಕ್ಷರಾಗಿ ನೇಮಕ ಮಾಡಿದ್ದರು. ಗುರುವಾರ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕೆ.ಆರ್. ಪುರಂ ಕ್ಷೇತ್ರದ ಬಂಡಾಯ ತಣ್ಣಗಾಯಿತೇ? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

ಟಿಕೆಟ್ ಆಕಾಂಕ್ಷಿಯಾಗಿದ್ದರು?
ಡಿಸೆಂಬರ್ 5ರಂದು ಕೆ. ಆರ್. ಪುರ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಬಿಜೆಪಿ ಟಿಕೆಟ್ಗಾಗಿ ನಂದೀಶ್ ರೆಡ್ಡಿ ಆಕಾಂಕ್ಷಿಯಾಗಿದ್ದರು. ಅನರ್ಹ ಶಾಸಕ ಬೈರತಿ ಬಸವರಾಜಗೆ ಟಿಕೆಟ್ ನೀಡಬೇಕು ಎಂಬುದು ಬಿಜೆಪಿಯ ಕೆಲವು ನಾಯಕರ ಚಿಂತನೆಯಾಗಿತ್ತು.

ನಂದೀಶ್ ರೆಡ್ಡಿ ಹೇಳಿದ್ದೇನು?
ಕೆಲವು ದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ನಂದೀಶ್ ರೆಡ್ಡಿ, "ಮುಂಬರುವ ಉಪ ಚುನಾವಣೆಯಲ್ಲಿ ಕೆ. ಆರ್.ಪುರ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ. ಪಕ್ಷಕ್ಕಾಗಿ ನಾನು ದುಡಿದಿದ್ದೇನೆ. ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡಿದರೆ ಸಹಿಸುವುದಿಲ್ಲ" ಎಂದು ಹೇಳಿದ್ದರು.

2018ರ ಚುನಾವಣೆ ಫಲಿತಾಂಶ
2018ರ ವಿಧಾನಸಭೆ ಚುನಾವಣೆಯಲ್ಲಿ ನಂದೀಶ್ ರೆಡ್ಡಿ 102,675 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್ನ ಬೈರತಿ ಬಸವರಾಜ 135,404 ಮತಗಳನ್ನು ಪಡೆದು ಜಯಗಳಿಸಿದ್ದರು. ಈಗ ಬೈರತಿ ಬಸವರಾಜ ಶಾಸಕ ಸ್ಥಾನದಿಂದ ಅನರ್ಹರಾಗಿದ್ದು, ಉಪ ಚುನಾವಣೆ ಎದುರಾಗಿದೆ.












Click it and Unblock the Notifications