ಪಿಎಸ್ಐ ಹಗರಣದ ಗಮನ ಬೇರೆಡೆ ಸೆಳೆಯಲು ಜಮೀರ್ ಮನೆ ಮೇಲೆ ಎಸಿಬಿ ದಾಳಿ
ಬೆಂಗಳೂರು, ಜುಲೈ 05: ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಮನೆ ಮತ್ತು ಕಚೇರಿ ಮೇಲೆ ನಡೆದ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಖಂಡಿಸಿದೆ. ಇಡಿ ಮತ್ತು ಎಸಿಬಿಗೂ ಒಂದಕ್ಕೊಂದು ಸಂಬಂಧ ಇಲ್ಲ. ಪಿಎಸ್ಐ ಹಗರಣದ ಗಮನವನ್ನು ಬೇರೆ ಕಡೆಗೆ ತಿರುಗಿಸಲು ದಾಳಿ ಎಸಿಬಿ ಮಾಡಿದ್ದಾರೆ. ಎಸಿಬಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ನಡುವೆ ನಮ್ಮ ಜಮೀರ್ ನಮ್ಮ ಹೆಮ್ಮೆ ಪೋಸ್ಟರ್ ಫುಲ್ ವೈರಲ್ ಆಗ್ತಿದೆ.
ಎಸಿಬಿ ಯನ್ನು ಹುಟ್ಟುಹಾಕಿದ್ದು ನಾವೇ, ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲೂ ಎಸಿಬಿ ಇದೆ, ರಾಜಸ್ಥಾನ, ಗುಜರಾತ್ ನಲ್ಲಿ ಇಲ್ಲವಾ? ಅದರೆ ಅದನ್ನು ದುರ್ಬಳಕೆ ಮಾಡಿಕೊಂಡರೆ ಸರ್ಕಾರದ ತಪ್ಪಾಗುತ್ತದೆ. ಅದಕ್ಕೆ ಯಾರು ಆ ವ್ಯವಸ್ಥೆಯನ್ನು ಹುಟ್ಟುಹಾಕಿದ್ದಾರೆ ಅವರು ಹೊಣೆಯಾಗಲ್ಲ. ಭ್ರಷ್ಟಾಚಾರ ನಿರ್ಮೂಲನೆ ಆಗಲಿ ಎಂದೇ ಇಂಥಾ ಸಂಸ್ಥೆಗಳನ್ನು ಹುಟ್ಟುಹಾಕೋದ್ದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಜುನಾಥ್ ಅವರ ಪ್ರಕರಣದಲ್ಲಿ ಡಿಸಿ ಜೈಲಿಗೆ ಹೋಗಿದ್ದಾರಲ್ಲ, ಆ ಪ್ರಕರಣದಲ್ಲಿ ನ್ಯಾಯಾಧೀಶರನ್ನೇ ಹೆದರಿಸುವ ಪ್ರಯತ್ನ ನಡೆದಿದೆ. ಇಲ್ಲಿ ನ್ಯಾಯಾಧೀಶರಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರ ಭ್ರಷ್ಟರಿಂದ ಹಣ ಪಡೆದು ಅವರ ರಕ್ಷಣೆಗೆ ನಿಂತಿರುವುದೇ ಈ ಸ್ಥಿತಿಗೆ ಕಾರಣ. ಒಂದು ವೇಳೆ ನ್ಯಾಯಾಧೀಶರು ಹೆದರಿದ್ರೆ ಪ್ರಕರಣದಲ್ಲಿ ನ್ಯಾಯ ಸಿಗುತ್ತಿರಲಿಲ್ಲ.
ಪಿಎಸ್ಐ ಹಗರಣದ ಗಮನ ಬೇರೆಡೆ ಸೆಳೆಯಲು ಎಸಿಬಿ ದಾಳಿ
ಇ.ಡಿ ಮತ್ತು ಎ.ಸಿ.ಬಿ ಗೂ ಒಂದಕ್ಕೊಂದು ಸಂಬಂಧ ಇಲ್ಲ. ಪಿ.ಎಸ್.ಐ ಹಗರಣದ ಗಮನವನ್ನು ಬೇರೆ ಕಡೆಗೆ ತಿರುಗಿಸಲು ದಾಳಿ ಮಾಡಿದ್ದಾರೆ ಎಂದು ನನಗೆ ಅನಿಸುತ್ತಿದೆ. ಎ.ಸಿ.ಬಿ ನೇರವಾಗಿ ಮುಖ್ಯಮಂತ್ರಿಗಳ ಅಡಿಯಲ್ಲಿ ಬರುತ್ತದೆ. ಇದರಿಂದಾಗಿ ಜಮೀರ್ ಅಹಮದ್ ಖಾನ್ ಮನೆಯ ಮೇಲೆ ದಾಳಿಯನ್ನು ನಡೆಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದರ ಜೊತೆಗೆ ಜಡ್ಜ್ ಹೇಳಿದ್ದ ಎಸಿಬಿ (ಆ್ಯಂಟಿ ಕರಪ್ಷನ್ ಬ್ಯೂರೋ) ಅನ್ನು ಕಲೆಕ್ಷನ್ ಬ್ಯೂರೋ ಎಂಬ ಮಾತನ್ನು ಉಲ್ಲೇಖಿಸಿದ್ದಾರೆ.
ಜಮೀರ್ ಗಾಗಿ ನಮ್ಮ ಜಮೀರ್ ನಮ್ಮ ಹೆಮ್ಮೆ
ಜಮೀರ್ ಅಹಮದ್ ಖಾನ್ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕನೆನಿಸಿಕೊಂಡಿದ್ದಾರೆ. ಸತತ ನಾಲ್ಕನೇ ಸಲ ಎಂಎಲ್ಎಯಾಗಿ ಮಾಜಿ ಸಚಿವರು ಆಗಿದ್ದಾರೆ. ಇದರಿಂದ ದೊಡ್ಡ ಅಭಿಮಾನಿ ವರ್ಗವೂ ಇದೆ. ಮುಸ್ಲಿಂ ನಾಯಕನಾಗಿರುವ ಜಮೀರ್ ಪರವಾಗಿ ಹಲವರು ಪ್ರತಿಭಟನೆಯನ್ನು ಮಾಡಿದ್ದಾರೆ. ಇದೀಗ ಫೇಸ್ ಬುಕ್, ಟ್ವಿಟ್ಟರ್ ಮತ್ತು ಇತರೆ ಸಾಮಾಜಿಕ ಜಾಲ ತಾಣಗಲ್ಲೂ ನಮ್ಮ ಜಮೀರ್ ನಮ್ಮ ಹೆಮ್ಮೆ ಎಂದು ಪೋಸ್ಟ್ ಹಾಕಲಾಗುತ್ತಿದೆ.