ವಿಧಾನಸೌಧ ಮುಂಭಾಗದ ಮೆಟ್ರೋ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರು
ಬೆಂಗಳೂರು, ಏಪ್ರಿಲ್ 14 : 'ವಿಧಾನಸೌಧದ ಮುಂಭಾಗದಲ್ಲಿರುವ ನಮ್ಮ ಮೆಟ್ರೋ ರೈಲು ನಿಲ್ದಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣ' ಎಂದು ನಾಮಕರಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, '2016ಅನ್ನು ಅಂಬೇಡ್ಕರ್ ಅವರ ವರ್ಷ ಎಂದು ಆಚರಿಸಲು ಸರ್ಕಾರ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ' ಎಂದು ಹೇಳಿದರು. [ಅಷ್ಟೊಂದು ಅವಮಾನವಾಗದಿದ್ದರೆ ಅಂಬೇಡ್ಕರ್ ಹುಟ್ಟುತ್ತಿದ್ದರೆ?]

'ವಿಧಾನ ಸೌಧದ ಮುಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ನಮ್ಮ ಮೆಟ್ರೋ ರೈಲು ನಿಲ್ದಾಣದಕ್ಕೆ 'ಅಂಬೇಡ್ಕರ್ ಮೆಟ್ರೋ ಸ್ಟೇಷನ್' ಎಂದು ಹೆಸರಿಸಲಾಗುವುದು. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಕ್ಕೆ 'ಅಂಬೇಡ್ಕರ್ ರೈಲ್ವೆ ನಿಲ್ದಾಣ' ಎಂದು ಹೆಸರಿಡಲು ಕೇಂದ್ರಕ್ಕೆ ಮನವಿ ಮಾಡಲಾಗುವುದು' ಎಂದು ತಿಳಿಸಿದರು. [ವಿಶ್ವದೆಲ್ಲೆಡೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸಾಧನೆ ಮೆಲುಕು]
'ಅಂಬೇಡ್ಕರ್ ಅವರು ದಲಿತ ನಾಯಕರಲ್ಲ. ಇಡೀ ದೇಶದ ನಾಯಕರು. ಮನುಕುಲದ ನಾಯಕರು. ಹೀಗಾಗಿ, ಇಡೀ ವಿಶ್ವವೇ ಅವರನ್ನು ಸ್ಮರಿಸುತ್ತದೆ. ದೇಶದಲ್ಲಿ ಅಂಬೇಡ್ಕರ್ ಅವರು ಅನ್ಯಾಯದ ವಿರುದ್ಧ ಚಳವಳಿ ನಡೆಸದಿದ್ದರೆ, ಈ ದೇಶದಲ್ಲಿ ಚಳವಳಿಗಳೇ ಹುಟ್ಟುತ್ತಿರಲಿಲ್ಲ' ಎಂದರು. [ಉತ್ಥಾನ ಪತ್ರಿಕೆ: ಅಂಬೇಡ್ಕರ್ 125' ವಿಶೇಷ ಸಂಚಿಕೆ ಕೊಳ್ಳಿರಿ]
'ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ದಿ. ಬಸವಲಿಂಗಪ್ಪ ಹೆಸರಿನಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಅಧ್ಯಯನ ಪೀಠ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತಿದೆ. ಜೊತೆಗೆ, ಬೆಂಗಳೂರಿನಲ್ಲಿ ಅಂಬೇಡ್ಕರ್ ಹೆಸರಿನಲ್ಲಿ 'ಅಂಬೇಡ್ಕರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್' ಅನ್ನು ಪ್ರಾರಂಭಿಸಲು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ' ಎಂದು ಸಿದ್ದರಾಮಯ್ಯ ತಿಳಿಸಿದರು. [ಬೈಯಪ್ಪನಹಳ್ಳಿಯಿಂದ-ನಾಯಂಡಹಳ್ಳಿಗೆ 35 ನಿಮಿಷದ ಪ್ರಯಾಣ]
ಪ್ರಶಸ್ತಿ ಪ್ರದಾನ : ಪರಿಶಿಷ್ಟ ಜಾತಿ ಮತ್ತು ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ನೀಡುವ ಡಾ. ಅಂಬೇಡ್ಕರ್ ಪ್ರಶಸ್ತಿಯನ್ನು ಡಾ. ಎಸ್. ಚಿನ್ನಸ್ವಾಮಿ ಮಾಂಬಳ್ಳಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದರು. [ಎಸ್.ಚಿನ್ನಸ್ವಾಮಿ ಪರಿಚಯ]
ಪುಸ್ತಕ ಬಿಡುಗಡೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಹೊರತಂದಿರುವ ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.
ಪ್ರತಿಮೆಗೆ ಮಾಲಾರ್ಪಣೆ : ಕಾರ್ಯಕ್ರಮಕ್ಕೂ ಮುನ್ನ ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂಥೆ ಸಚಿವರು, ಶಾಸಕರು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.












Click it and Unblock the Notifications