Namma Metro: ಪ್ರಯಾಣಿಕರೇ ಗಮನಿಸಿ.. ಮಾರ್ಚ್ 9ಕ್ಕೆ ಈ ಭಾಗದಲ್ಲಿ ಮೆಟ್ರೋ ಸಂಚಾರ ಇರಲ್ಲ..!
ಬೆಂಗಳೂರು ಮೆಟ್ರೋ ಪ್ರಯಾಣಿಕರು ಗಮನಿಸಬೇಕಾದ ಪ್ರಮುಖ ಅಂಶವೊಂದು ಇಲ್ಲಿದೆ. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರದಲ್ಲಿ ಕೆಲವೊಂದು ವ್ಯತ್ಯಾಸವಾಗುತ್ತಿದ್ದು. ಈ ಬಗ್ಗೆ ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದೆ. ಮಾರ್ಚ್ 9ರಂದು ಮೆಟ್ರೋ ಸೇವೆಯಲ್ಲಿ ವ್ಯತ್ಯಾಸವಾಗಲಿದೆ. ಕೆಲವು ನಿರ್ದಿಷ್ಟ ಭಾಗದಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಹೇಳಿದೆ. ನೀವು ವೀಕೆಂಡ್ ಪ್ಲ್ಯಾನ್ನಲ್ಲಿ ಇದ್ದರೆ ತಪ್ಪದೆ ಈ ವಿಷಯವನ್ನು ಗಮನಿಸಿ.
ಹೌದು ಬೆಂಗಳೂರಿನಲ್ಲಿ ವೀಕೆಂಡ್ ಪ್ಲ್ಯಾನ್ನಲ್ಲಿ ಇರುವವರಿಗೆ ಮೆಟ್ರೋ ಸಣ್ಣ ಶಾಕ್ ಕೊಟ್ಟಿದೆ. ಭಾನುವಾರದಂದು ಬೆಂಗಳೂರಿನ ಕೆಲವು ಮಾರ್ಗಗಳಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ. ಅದರ ವಿವರ ಇಲ್ಲಿದೆ.

ನಮ್ಮ ಮೆಟ್ರೋ ನಿಗಮವು ಮಾರ್ಚ್ 9 (ಭಾನುವಾರ) ರಂದು ನೇರಳೆ ಮಾರ್ಗದಲ್ಲಿ ಮಾಗಡಿ ರಸ್ತೆ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಯನ್ನು ನಡೆಸುತ್ತಿದೆ. ಇದರಿಂದ ಮಾರ್ಚ್ 9ಕ್ಕೆ ಬೆಳಿಗ್ಗೆ 07 ರಿಂದ 10 ಗಂಟೆಯವರೆಗೆ, (ಮೂರು ಗಂಟೆಗಳ ಕಾಲ) ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ಭಾಗಶಃ ರದ್ದುಪಡಿಸಲಾಗುತ್ತದೆ ಎಂದು ಬಿ.ಎಂ ಆರ್ ಸಿಎಲ್ ಹೇಳಿದೆ. ಅಲ್ಲದೆ ಬೆಂಗಳೂರಿನ ಕೇಂದ್ರ ಮೆಟ್ರೋ ನಿಲ್ದಾಣದಲ್ಲಿಯೇ ಸಂಚಾರದಲ್ಲಿ ವ್ಯತ್ಯಾಸಗಳು ಆಗಲಿವೆ ಎಂದು ಹೇಳಲಾಗಿದೆ. ಅದರ ವಿವರ ಮುಂದೆ ನೋಡೋಣ.
ಈ ಅವಧಿಯಲ್ಲಿ ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸರ್.ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು ಹಾಗೂ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳು ಮುಚ್ಚಲಾಗಿರುತ್ತದೆ ಎಂದು ಹೇಳಲಾಗಿದೆ.
ಬೆಳಿಗ್ಗೆ 10ಗಂಟೆಯವರೆಗೆ ಈ ರದ್ದತಿಯ ಕಾರಣದಿಂದಾಗಿ, ಕ್ಯೂಆರ್ ಟಿಕೆಟ್ಗಳ ಖರೀದಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನೇರಳೆ ಮಾರ್ಗ ದಲ್ಲಿನ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಲ್ಲಿ ರೈಲು ಲಭ್ಯವಿರುವುದಿಲ್ಲದೆ ಇರುವುದರಿಂದ ನೇರಳೆ ಮಾರ್ಗದಿಂದ ಹಸಿರು ಮಾರ್ಗಕ್ಕೆ ಮತ್ತು ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಪ್ರಯಾಣಿಸಲು ಸಾರ್ವಜನಿಕರು ಕ್ಯೂಆರ್ ಟಿಕೆಟ್ ಹಾಗೂ ಟೋಕನ್ಗಳನ್ನು ಖರೀದಿಸದಂತೆ ಸೂಚನೆ ನೀಡಲಾಗಿದೆ.
ನೇರಳೆ ಮಾರ್ಗದ ಇತರ ವಿಭಾಗಗಳಲ್ಲಿ ಅಂದರೆ, ಚಲ್ಲಘಟ್ಟ ಮತ್ತು ಮಾಗಡಿ ರಸ್ತೆ ನಡುವೆ, ಹಾಗೂ ಎಂಜಿ ರಸ್ತೆ ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ನಡುವೆ, ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತವೆ ಮತ್ತು ಮೇಲಿನ ಅವಧಿಯಲ್ಲಿ ವೇಳಾಪಟ್ಟಿಯ ಪ್ರಕಾರ ಲಭ್ಯವಿರಲಿದೆ.
ಹಸಿರು ಮಾರ್ಗದಲ್ಲಿ, ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ರೈಲುಗಳ ಸೇವೆಗಳು ನಿಗದಿತ ಸಮಯ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ. ನಮ್ಮ ಮೆಟ್ರೋ ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಬೇಕು ಅದಕ್ಕೆ ತಕ್ಕಂತೆ ಪ್ಲ್ಯಾನ್ ಮಾಡಿಕೊಳ್ಳಬೇಕು. ಪ್ರಯಾಣಿಕರಿಗೆ ಇದರಿಂದ ಆಗುವ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಬಿಎಂಆರ್ಸಿಎಲ್ ಹೇಳಿದೆ.












Click it and Unblock the Notifications