Namma Metro: ಒಂದು ತಿಂಗಳ ಕಾಲ ಈ 2 ಮಾರ್ಗಗಳಲ್ಲಿ ಮೆಟ್ರೋ ರೈಲು ಓಡಾಡಲ್ಲ- ಯಾವ ಸಮಯ, ಯಾವ ಮಾರ್ಗ ತಿಳಿಯಿರಿ
ಬೆಂಗಳೂರು, ಜುಲೈ 08: ಸಿಗ್ನಲಿಂಗ್ ಹಾಗೂ ಇತರ ಕಾಮಗಾರಿಗಳು ನಡೆಯುತ್ತಿರುವುದರಿಂದ ನಮ್ಮ ಮೆಟ್ರೋದ ( Bengaluru Metro ) ಎರಡು ಮಾರ್ಗಗಳಲ್ಲಿ ಬೆಳಿಗ್ಗೆ ಸಮಯ ರೈಲುಗಳ ಸಂಚಾರವನ್ನು ಮೊಟಕುಗೊಳಿಸಲಾಗಿದೆ. ಇದು ಒಂದು ತಿಂಗಳ ಕಾಲ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ವಿ ರಸ್ತೆ- ಬೈಪ್ಪನಹಳ್ಳಿ ಮತ್ತು ಕೆಆರ್ ಪುರಂ- ವೈಟ್ಫೀಲ್ಡ್ನ ಎರಡು ಮಾರ್ಗಗಳಲ್ಲಿ ರೈಲುಗಳ ಸಂಚಾರವನ್ನು ತಡೆಯಲಾಗಿದೆ. ಬೆಳಿಗ್ಗೆ 5 ರಿಂದ 7 ರ ವರೆಗೆ ರೈಲು ಸೇವೆಗಳನ್ನು ಮೊಟಕುಗೊಳಿಸಲಾಗಿದೆ. ಈ ಕ್ರಮವು ಜುಲೈ 10 ರಿಂದ ಜಾರಿಗೆ ಬರಲಿದೆ. ಆಗಸ್ಟ್ 9, 2023 ರ ವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವೆ ಸಿಗ್ನಲಿಂಗ್ ಮತ್ತು ಇತರ ಕೆಲಸಗಳಿಗೆ ಅನುಕೂಲವಾಗಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಬೈಯಪ್ಪನಹಳ್ಳಿ- ಕೆಆರ್ ಪುರಂ ಕಾರಿಡಾರ್ ಪರ್ಪಲ್ ಲೈನ್ನಲ್ಲಿ ಬರುತ್ತದೆ. ಅದರ ವಾಣಿಜ್ಯ ಕಾರ್ಯಾಚರಣೆಗೆ ಇನ್ನೂ ಆರಂಭವಾಗಿಲ್ಲ. ನಮ್ಮ ಮೆಟ್ರೋದ 2 ನೇ ಹಂತದ ಅಡಿಯಲ್ಲಿ, ಬೈಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗೆ ನೇರಳೆ ಮಾರ್ಗವನ್ನು ಬಿಎಂಆರ್ಸಿಎಲ್ ವಿಸ್ತರಿಸಿತು.
ಕೆಆರ್ ಪುರಂನಿಂದ ವೈಟ್ಫೀಲ್ಡ್ವರೆಗಿನ 13.75 ಕಿಮೀ ಮಾರ್ಗವನ್ನು ವಾಣಿಜ್ಯ ಕಾರ್ಯಾಚರಣೆಗಾಗಿ ತೆರೆಯಲಾಗಿದೆ. ಬೆನ್ನಿಗಾನಹಳ್ಳಿ ರೈಲ್ವೆ ಹಳಿಯಲ್ಲಿ ತೆರೆದ ವೆಬ್ ಗರ್ಡರ್ ನಿರ್ಮಾಣ ವಿಳಂಬದಿಂದಾಗಿ ಬೈಯಪ್ಪನಹಳ್ಳಿಯಿಂದ ಕೆಆರ್ ಪುರಂವರೆಗಿನ 2 ಕಿಮೀ ಮಾರ್ಗವನ್ನು ತೆರೆಯಲು ಇನ್ನೂ ಸಾಧ್ಯವಾಗಿಲ್ಲ.

ಪರಿಷ್ಕೃತ ಗಡುವಿನ ಪ್ರಕಾರ, ಆಗಸ್ಟ್ ವೇಳೆಗೆ ಕೆಂಗೇರಿಯಿಂದ ವೈಟ್ಫೀಲ್ಡ್ವರೆಗೆ ಸಂಪೂರ್ಣ ನೇರಳೆ ಮಾರ್ಗವನ್ನು ತೆರೆಯಲು ಬಿಎಂಆರ್ಸಿಎಲ್ ಯೋಜಿಸುತ್ತಿದೆ.
'ವಿಸ್ತೃತ ಪರ್ಪಲ್ ಲೈನ್ನಲ್ಲಿ ಸಿಗ್ನಲಿಂಗ್ ಮತ್ತು ಇತರ ಕೆಲಸಗಳನ್ನು ಪೂರ್ಣಗೊಳಿಸಲು ಬೆಳಗಿನ ಸಮಯದಲ್ಲಿ ರೈಲು ಸೇವೆಗಳನ್ನು ಮೊಟಕುಗೊಳಿಸುವುದು ಅವಶ್ಯಕವಾಗಿದೆ. ಮೆಟ್ರೋ ಓಡಾಟವು ಮಧ್ಯರಾತ್ರಿ ಬೈಯಪ್ಪನಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ಆ ಕಾರಣ 12 ಗಂಟೆಯ ನಂತರ ಮಾತ್ರ ಕೆಲಸ ಮಾಡಬಹುದು. ಕಾಮಗಾರಿ ಪೂರ್ಣಗೊಂಡ ನಂತರ, ವಿಸ್ತೃತ ಪರ್ಪಲ್ ಲೈನ್ನಲ್ಲಿ ರೈಲುಗಳ ಪ್ರಾಯೋಗಿಕ ಓಡಾಟವನ್ನು ಕೈಗೊಳ್ಳಲಾಗುತ್ತದೆ' ಎಂದು ಬಿಎಂಆರ್ಸಿಎಲ್ ಮುಖ್ಯ ಪಿಆರ್ಒ ಯಶವಂತ ಚವಾಣ್ ಹೇಳಿದ್ದಾರೆ.
ಕೆಂಗೇರಿ ಮತ್ತು ಎಸ್ವಿ ರಸ್ತೆ ನಡುವೆ ಬೆಳಿಗ್ಗೆ 5 ರಿಂದ 7 ಗಂಟೆಯವರೆಗೆ ನಿಗದಿತ ರೈಲು ಸೇವೆಗಳು ಲಭ್ಯವಿರುತ್ತವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಬೆಳಗ್ಗೆ 7 ಗಂಟೆಯ ನಂತರ ಬೈಯಪ್ಪನಹಳ್ಳಿಯಿಂದ ಕೆಂಗೇರಿ ಮತ್ತು ಕೆಆರ್ ಪುರಂನಿಂದ ವೈಟ್ಫೀಲ್ಡ್ಗೆ ಎಂದಿನಂತೆ ರಾತ್ರಿ 11 ಗಂಟೆಯವರೆಗೆ ರೈಲುಗಳು ಕಾರ್ಯನಿರ್ವಹಿಸಲಿವೆ.
ಕೆಆರ್ ಪುರಂ-ವೈಟ್ಫೀಲ್ಡ್ ಮೆಟ್ರೋ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದಾಗಿನಿಂದ ದಿನಕ್ಕೆ ಸರಾಸರಿ 30,000 ಪ್ರಯಾಣಿಕರು ಈ ಮಾರ್ಗವನ್ನು ಬಳಸುತ್ತಿದ್ದಾರೆ. ಆದಾಗ್ಯೂ, ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿ ನಡುವಿನ ಸಂಪರ್ಕ ತಪ್ಪಿದ ಕಾರಣ, ಬೈಯಪ್ಪನಹಳ್ಳಿಯಲ್ಲಿ ಇಳಿದ ನಂತರ ಕೆಆರ್ ಪುರಂ ನಿಲ್ದಾಣವನ್ನು ತಲುಪಲು ಪ್ರಯಾಣಿಕರಿಗೆ ಫೀಡರ್ ಬಸ್ ಸೇವೆಗಳು ಅಥವಾ ಇತರ ಸಾರಿಗೆ ವಿಧಾನಗಳನ್ನು ಬಳಸುವುದು ಅನಿವಾರ್ಯವಾಗಿದೆ.












Click it and Unblock the Notifications