ಆಗಸ್ಟ್ನಿಂದ ಬೆಂಗಳೂರಿನ 243 ವಾರ್ಡ್ನಲ್ಲಿ 'ನಮ್ಮ ಕ್ಲಿನಿಕ್' ಆರಂಭ
ಬೆಂಗಳೂರು, ಜುಲೈ 17: "ಬೆಂಗಳೂರಿನ ನಾಗರಿಕರ ಆರೋಗ್ಯ ರಕ್ಷಣೆಗಾಗಿ ರೂಪಿಸಿರುವ ಮಹತ್ವದ ಯೋಜನೆ 'ನಮ್ಮ ಕ್ಲಿನಿಕ್' ಸೇವೆಯನ್ನು ಆಗಸ್ಟ್ ತಿಂಗಳಿನಿಂದ ಬೆಂಗಳೂರಿನ 243 ವಾರ್ಡ್ಗಳಲ್ಲಿ ಪ್ರಾರಂಭಿಸಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಸವಧಾಮ ಉದ್ಯಾನವನ ಉದ್ಘಾಟನೆ, ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ, ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಉದ್ಯಾನವನ ಉದ್ಘಾಟನೆ, ಭೋವಿ ಪಾಳ್ಯದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳ ಹಕ್ಕುಪತ್ರ ವಿತರಣೆ" ಹಾಗೂ ಮುಖ್ಯಮಂತ್ರಿಗಳ ನವ-ನಗರೋತ್ಥಾನ ಯೋಜನೆಯಡಿ ಮಹಾಲಕ್ಷ್ಮೀ ಲೇಔಟ್ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊರವರ್ತುಲ ರಸ್ತೆಯಿಂದ ಪಶ್ಚಿಮ ಕಾರ್ಡ್ ರಸ್ತೆಗೆ ಮೇಲುಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನಾ ಕಾರ್ಯ ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಉದ್ಯಮದ ಎಲ್ಲಾ ರಂಗಗಳಲ್ಲಿ ಕನ್ನಡಿಗರು ಅಗ್ರಸ್ಥಾನದಲ್ಲಿರಬೇಕು: ಬಸವರಾಜ ಬೊಮ್ಮಾಯಿ
ಬಡವರಿಗೆ ತಮ್ಮ ವಾರ್ಡ್ನಲ್ಲಿಯೇ ಉತ್ತಮ ಆರೋಗ್ಯ ಸೌಲಭ್ಯ ನೀಡುವ ದೃಷ್ಟಿಯಿಂದ 'ನಮ್ಮ ಕ್ಲಿನಿಕ್' ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಆರೋಗ್ಯ, ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಲಾಗಿದೆ. ಅಮೃತ ಯೋಜನೆಯಲ್ಲಿ 75 ಕೆರೆಗಳ ಅಭಿವೃದ್ಧಿ, 20 ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಉಚಿತ ಮುನ್ನೆಚ್ಚರಿಕಾ ಡೋಸ್ ಕೋವಿಡ್ ಲಸಿಕೆ ಪಡೆಯಲು ಬೊಮ್ಮಾಯಿ ಕರೆ
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೆಲಸ
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪಣ ತೊಡಲಾಗಿದೆ. ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ 11 ಕಿ. ಮೀ. ರಸ್ತೆ ಕಾಮಗಾರಿಯಿಂದ ಹಲವಾರು ಜಂಕ್ಷನ್ಗಳಲ್ಲಿ ವಾಹನ ದಟ್ಟಣೆ ಶೇಕಡ 40 ರಷ್ಟು ಕಡಿಮೆಯಾಗುತ್ತದೆ. ಇದಕ್ಕಾಗಿ 55 ಕೋಟಿ ರುಪಾಯಿ ನೀಡಲಾಗಿದ್ದು, ಆದಷ್ಟು ಬೇಗ ಈ ರಸ್ತೆ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಸವಧಾಮ ಉದ್ಯಾನವನ, ಬಸವಣ್ಣ, ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರಸ್ವಾಮೀಜಿ ಮೂರ್ತಿ ಅನಾವರಣ ಮತ್ತು ನಟ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ವಾರ್ಡ್ ನಾಮಕರಣ ಮಾಡಿದ್ದೇನೆ, ಇಂದು ನನಗೆ ಪುಣ್ಯದ ದಿನ ಎಂದು ಬಣ್ಣಿಸಿದರು.
ಬೆಂಗಳೂರು ನಗರ ಅಭಿವೃದ್ಧಿಗೆ 6000 ಕೋಟಿ
ಬೆಂಗಳೂರು ನಗರ ಬೃಹತ್ತಾಗಿ ಬೆಳೆಯುತ್ತಿದೆ. 1.3 ಕೋಟಿ ಜನಸಂಖ್ಯೆ ಇದ್ದು, ಅಷ್ಟೇ ಸಂಖ್ಯೆಯ ವಾಹನಗಳಿವೆ. ದೊಡ್ಡ ಪ್ರಮಾಣದಲ್ಲಿ ಐಟಿ ಬಿಟಿ, ಉದ್ಯೋಗ ಕ್ಷೇತ್ರ ಅಭಿವೃದ್ಧಿ ಕಂಡಿದೆ. ಬೆಂಗಳೂರು ಅಂತರರಾಷ್ಟ್ರೀಯ ನಗರವಾಗಿ ಬೆಳೆಯುತ್ತಿದೆ. ನಗರದಲ್ಲಿ ಜನರಿಗೆ ಸೌಲಭ್ಯಗಳನ್ನು ನೀಡುವುದು ಬಹಳ ಮುಖ್ಯ ಎಂದರು.
ಉತ್ತಮ ಮೂಲಭೂತಸೌಕರ್ಯಗಳು ಪ್ರತಿಯೊಬ್ಬ ನಾಗರಿಕರಿಗೆ ದೊರೆಯಬೇಕು. ನಾನು ಮುಖ್ಯಮಂತ್ರಿಯಾದ ತಕ್ಷಣ, ಬೆಂಗಳೂರಿನ ಅಭಿವೃದ್ಧಿಗಾಗಿ 'ಅಮೃತ ನಗರೋತ್ಥಾನ ಯೋಜನೆ'ಯಡಿ 6000 ಕೋಟಿ ರುಪಾಯಿಗಳನ್ನು ಒದಗಿಸಿದ್ದೇನೆ ಎಂದರು. ಮಳೆಯಿಂದಾಗುವ ಪ್ರವಾಹ ಸ್ಥಿತಿ ನಿಭಾಯಿಸಲು 400 ಕಿಲೋ ಮೀಟರ್ ರಾಜಕಾಲುವೆಗಳ ಅಭಿವೃದ್ಧಿಗಾಗಿ 1600 ಕೋಟಿ ರುಪಾಯಿ ಒದಗಿಸಿದೆ.
ಅವಧಿಗೆ ಮುನ್ನವೇ ಕಾಮಗಾರಿ ಮುಗಿಸುತ್ತೇವೆ
ಬೆಂಗಳೂರಿನ ಮೂಲಭೂತಸೌಕರ್ಯಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಂಡಿದ್ದೇನೆ. ಮೆಟ್ರೋ ವಿಸ್ತರಣೆ ಕಾರ್ಯವನ್ನು 2025ರ ಬದಲಾಗಿ 2024ರಲ್ಲೇ ಪೂರ್ಣಗೊಳಿಸಲಾಗುವುದು. ಬೆಂಗಳೂರು ನಗರದ ಹೊರ ವಲಯವನ್ನು ಸಂಪರ್ಕಿಸುವ 3ನೇ ಫೇಸ್ ಮೆಟ್ರೋ ಕಾರ್ಯವನ್ನು ಮುಂದಿನ ವರ್ಷ ಪ್ರಾರಂಭಿಸಲಾಗುವುದು ಎಂದರು.
15000 ಕೋಟಿ ರುಪಾಯಿ ವೆಚ್ಚದಲ್ಲಿ ಸಬ್ಅರ್ಬನ್ ರೈಲ್ವೆ ಯೋಜನೆಗೆ ಚಾಲನೆ ನೀಡಲಾಗಿದೆ. ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಚಿವ ಕೆ.ಗೋಪಾಲಯ್ಯ ಕಾರ್ಯಕ್ಕೆ ಸಿಎಂ ಶ್ಲಾಘನೆ
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಕ್ರಿಯಾಶೀಲ ಸಚಿವರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿಯೂ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ಮಾನವೀಯ ನಾಯಕರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲ ಕಲ್ಪಿಸಲು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬೆಂಗಳೂರಿನ ಬಿಬಿಎಂಪಿಯಲ್ಲಿ ಪ್ರತಿ ವಾರ್ಡ್ನಲ್ಲಿ ಜನ ಪ್ರತಿನಿಧಿಗಳಿರಬೇಕು. ಆಗ ಕೆಲಸಗಳಾಗುತ್ತವೆ. ಬಿಬಿಎಂಪಿ ಚುನಾವಣೆಗೆ ಸಿದ್ಧತೆಗಳನ್ನು ಮಾಡಲಾಗುತ್ತದೆ. ಅಭಿವೃದ್ಧಿ ಪ್ರಕ್ರಿಯೆ ನಿರಂತರವಾಗಿ ನಡೆಯಲು ಜನಪ್ರತಿನಿಧಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.