ವಿಧಾನಸೌಧ ಮುಂದೆ ನಾಗೇಂದ್ರಪ್ಪ ಸಾಯಲು ಯತ್ನ: ಬಾಂಗ್ಲಾ ವಲಸಿಗರ ಜಾಲ ಬಯಲಿಗೆಳೆದ ವ್ಯಕ್ತಿಗೆ ಇದೆಂಥ ದುಸ್ತಿತಿ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬೃಹತ್ ಜಾಲ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಅಕ್ರಮ ಬಾಂಗ್ಲಾ ವಲಸಿಗರ ಜಾಲ ಪತ್ತೆ ಮಾಡಿದ್ದ ವ್ಯಕ್ತಿ ಡಾ. ನಾಗೇಂದ್ರಪ್ಪ ಅವರು ಹಾಡ ಹಗಲೇ ಬೆಂಗಳೂರಿನ ವಿಧಾನಸೌಧ ಮುಂಭಾಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದೆ.
ಅಕ್ರಮ ಬಾಂಗ್ಲಾ ವಲಸಿಗರ ಜಾಲ ಪತ್ತೆ ಮಾಡಿದ್ದ ವ್ಯಕ್ತಿ ಆತ್ಮಹತ್ಯೆ ಯತ್ನ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ವಿರುದ್ಧ ಕಿಡಿ ಕಾರಿದರು. ಸಾಮಾಜಿಕ ಜಾಲತಾಣ ಎಕ್ಸ್ ನಾಗೇಂದ್ರಪ್ಪ ಅವರ ಆತ್ಮಹತ್ಯೆ ಕುರಿತ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಅಕ್ರಮ ಬಾಂಗ್ಲಾದೇಶಿಗಳ ಮೇಲೆ ಯಾಕಿಷ್ಟು ವ್ಯಾಮೋಹ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಕ್ರಮ ವಲಸಿಗರಿಗೆ ಸರ್ಕಾರ ಬೆಂಬಲ
ರಾಜ್ಯದಲ್ಲಿ ವ್ಯಾಪಕವಾಗಿರುವ ಅಕ್ರಮ ಬಾಂಗ್ಲಾ ವಲಸಿಗರ ಜಾಲವನ್ನು ಬಯಲಿಗೆಳೆದಿದ್ದಕ್ಕಾಗಿ ಡಾ. ನಾಗೇಂದ್ರಪ್ಪ ಅವರಿಗೆ ಪೊಲೀಸರಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಹೀಗಾಗಿಯೇ ನಾಗೇಂದ್ರಪ್ಪ ವಿಧಾನಸೌಧದ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯು ಕಾಂಗ್ರೆಸ್ ಸರ್ಕಾರ ಅಕ್ರಮ ವಲಸಿಗರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ದೂರಿದರು.
ಒಂದೆಡೆ ದೇಶದ ಭದ್ರತೆಗೆ ಸವಾಲಾಗಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮತ್ತೊಂದೆಡೆ, ಜವಾಬ್ದಾರಿಯುತ ನಾಗರಿಕರು ಈ ಅಕ್ರಮಗಳನ್ನು ಎತ್ತಿ ತೋರಿಸಿದರೆ ಅವರನ್ನು ಟಾರ್ಗೆಟ್ ಮಾಡಲಾಗುತ್ತದೆ. ಅಂಥವರಿಗೆ ಕಿರುಕುಳ ಕೊಟ್ಟು ಜೈಲಿಗೆ ಅಟ್ಟಲಾಗುತ್ತಿದೆ. ರಾಷ್ಟ್ರ ರಕ್ಷಣಾ ವೇದಿಕೆ ಮುಖಂಡ ಪುನೀತ್ ಕೆರೆಹಳ್ಳಿಯಂತಹ ಕಾರ್ಯಕರ್ತರ ಬಂಧನವೇ ಇದಕ್ಕೆ ಇನ್ನೊಂದು ಸಾಕ್ಷಿ ಎಂದು ಹೇಳಿದರು.
ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವ ಧಮ್ಮಿಲ್ಲವೇ?
ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ, ನಿಮ್ಮ ಇಲಾಖೆಯ ಕರ್ತವ್ಯವನ್ನೇ ಜನ ಸಾಮಾನ್ಯರು ಮಾಡುತ್ತಿರುವಾಗ ಅವರಿಗೆ ರಕ್ಷಣೆ ನೀಡುವ ಬದಲು ಪೊಲೀಸರ ಮೂಲಕ ಕಿರುಕುಳ ಕೊಡಿಸುತ್ತಿರುವುದು ಇದ್ಯಾವ ನ್ಯಾಯ?. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ದೇಶ ಮತ್ತು ರಾಜ್ಯದ ಸುರಕ್ಷತೆಗಿಂತ ವೋಟ್ ಬ್ಯಾಂಕ್ ರಾಜಕಾರಣವೇ ಮುಖ್ಯವಾಯಿತೇ?. ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಇರಾದೆ, ದಮ್ಮು-ತಾಕತ್ತು ನಿಮ್ಮ ಸರ್ಕಾರಕ್ಕಿಲ್ಲವೇ? ಎಂದು ಸವಾಲು ಹಾಕಿದರು.
ಜನರಿಗೆ ಕಿರುಕುಳ ನೀಡುವುದನ್ನು ಬಿಟ್ಟು, ಕೂಡಲೇ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪತ್ತೆ ನಗರದಿಂದ ಹಚ್ಚಿ ಹೊರಗಟ್ಟಿ. ಬಾಂಗ್ಲಾ ವಲಸಿಗರ ರಕ್ಷಣೆಗೆ ನಿಂತಿರುವ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಕನ್ನಡಿಗರ ವಿರೋಧಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಎರಡು ಲಕ್ಷಕ್ಕೂ ಅಧಿಕ ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಪತ್ತೆಗೆ ಟಾಸ್ಕ್ ಫೋರ್ಸ್ ರಚಿಸುವಂತೆ ಆರ್.ಅಶೋಕ್ ಆಗ್ರಹಿಸಿದ್ದರು.












Click it and Unblock the Notifications