ಹೈಸ್ಪೀಡ್ ರೈಲು: ಚೀನಾ ಜೊತೆ ಸಿಎಂ ಸಿದ್ದು ಮಾತುಕತೆ
ಬೆಂಗಳೂರು, ಜೂ.4: ಕೇಂದ್ರ ಬಜೆಟ್ ನಲ್ಲಿ ಪ್ರಕಟಿಸಿರುವ ಚೆನ್ನೈ ಮತ್ತು ಮೈಸೂರು ನಡುವಿನ ಹೈಸ್ಪೀಡ್ ರೈಲು ಯೋಜನೆ ಜೊತೆಗೆ ಬೆಂಗಳೂರು-ಮೈಸೂರು ನಡುವೆ 6 ಪಥ ಎಕ್ಸ್ ಪ್ರೆಸ್ ಕಾರಿಡಾರ್ ನಿರ್ಮಾಣ ಯೋಜನೆ ಜಾರಿಗೊಳಿಸಲು ಚೀನಾ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೀನಾದ ಎಸ್ಡಿಎಸ್ಎಚ್ ಕಂಪೆನಿಯ ಜತೆ ಮಹತ್ವದ ಚರ್ಚೆ ನಡೆಸಿದರು. ಇದರ ಜತೆಗೆ ಬೆಂಗಳೂರು-ಮೈಸೂರು ನಡುವೆ 6 ಪಥದ ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆಯ ನಿರ್ಮಾಣದ ಕುರಿತು ಚರ್ಚಿಸಲಾಗಿದೆ. ಎಸ್ಡಿಎಸ್ಎಚ್ ಕಂಪೆನಿ ಪ್ರತಿನಿಧಿಗಳು ಚೀನಾದಲ್ಲಿ ತಾವು ಕೈಗೊಂಡಿರುವ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. [ಬೆಂಗಳೂರು-ಮೈಸೂರು ಬುಲೆಟ್ ರೈಲು ಭಾಗ್ಯ ಅಸಾಧ್ಯ]

ನರೇಂದ್ರಮೋದಿ ಸರ್ಕಾರದ ಮಹತ್ವದ ಕನಸಿನ ಯೋಜನೆಯಾದ ಹೈಸ್ಪೀಡ್ ರೈಲು ಚೆನ್ನೈನಿಂದ ಮೈಸೂರುವರೆಗೂ ಹಾದು ಬರುವುದರಿಂದ ಬೆಂಗಳೂರು ಮತ್ತು ಮೈಸೂರು ನಡುವಿನ ಹಳಿಗಳ ನಿರ್ಮಾಣ ಸಾಧಕ-ಬಾಧಕಗಳ ಕುರಿತು ಪರಿಶೀಲನೆ ನಡೆದಿವೆ.
ಈ ನಡುವೆ ಚೀನಾ ಕಂಪೆನಿಯ ಸಹಯೋಗದಲ್ಲಿ ಬೆಂಗಳೂರು-ಮೈಸೂರು ನಡುವೆ 6 ಪಥದ ಆಕ್ಸಿಸ್ ಕಂಟ್ರೋಲ್ ಸರ್ವೀಸ್ ರಸ್ತೆಯನ್ನೊಳಗೊಂಡ ಎಕ್ಸ್ಪ್ರೆಸ್ ಕಾರಿಡಾರ್ ನಿರ್ಮಾಣಕ್ಕೂ ಯೋಜನಾ ವರದಿ ಸಿದ್ಧಗೊಳಿಸುವ ತಯಾರಿ ನಡೆದಿದೆ. ಸುಮಾರು 6 ಸಾವಿರ ಕೋಟಿ ರೂ. ಯೋಜನಾ ವೆಚ್ಚದ ಈ ಯೋಜನೆ ಇದಾಗಿದೆ. [ದೆಹಲಿಯಿಂದ ಚೆನ್ನೈಗೆ 6 ಗಂಟೆಯಲ್ಲೇ ತಲುಪಿ!]
ಈ ರಸ್ತೆ ನಿರ್ಮಾಣಗೊಂಡರೆ ಎರಡು ಮಹಾನಗರಗಳ ನಡುವೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಹಾಗೆಯೇ ಹೈಸ್ಪೀಡ್ ರೈಲು ಜಾರಿಯಾದರೆ ರಾಜ್ಯದ ಕನಸು ನನಸಾಗಲಿದೆ. ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನಸಂಪರ್ಕ ಸಚಿವ ರೋಷನ್ಬೇಗ್, ಬಿಎಂಐಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ಸಿಂಗ್ ಕರೋಲಾ ಮತ್ತಿತರ ಹಿರಿಯ ಅಧಿಕಾರಿಗಳು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನಿಂದ ಕೆಂಗೇರಿ ಮತ್ತು ಬಿಡದಿ ಬಳಿ ತೀವ್ರವಾದ ತಿರುವುಗಳು ಇರುವುದರಿಂದ ಹೈಸ್ಪೀಡ್ ರೈಲು ಮಾರ್ಗ ಸೂಕ್ತವಲ್ಲ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಿ ಹೈಸ್ಪೀಡ್ ರೈಲಿನ ಹಾದಿಯನ್ನು ಸುಗಮಗೊಳಿಸಲು ಚಿಂತನೆ ನಡೆದಿವೆ.












Click it and Unblock the Notifications