ಬೆಂಗಳೂರಿನ ಇನ್ನೊಂದು ಪ್ರಮುಖ ರಸ್ತೆಗೆ ವರನಟ ರಾಜಣ್ಣನ ಹೆಸರು
ಬೆಂಗಳೂರು, ಏ 11: ನಗರದ ಇನ್ನೊಂದು ಪ್ರಮುಖ ರಸ್ತೆಗೆ ವರನಟ ಡಾ. ರಾಜಕುಮಾರ್ ಹೆಸರು ನಾಮಕರಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.
ಈಗಾಗಲೇ ರಾಜಾಜಿನಗರ ಸುಜಾತಾ ಟಾಕೀಸ್ ವೃತ್ತದಿಂದ ಯಶವಂತಪುರದ ಓರಿಯನ್ ಮಾಲ್ ವರೆಗಿನ ಸುಮಾರು ಎರಡುವರೆ ಕಿಲೋಮೀಟರ್ ರಸ್ತೆಗೆ ಡಾ. ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

ಈಗ ಮೈಸೂರು ರಸ್ತೆಯ ನಾಯಂಡಹಳ್ಳಿ ವೃತ್ತದಿಂದ ಪೀಣ್ಯ - ತುಮಕೂರು ರಸ್ತೆಯವರೆಗಿನ ಭಾರೀ ವಾಹನ ದಟ್ಟಣೆಯ ವರ್ತುಲ ರಸ್ತೆಗೆ " ಡಾ. ರಾಜಕುಮಾರ್ ಪುಣ್ಯಭೂಮಿ ರಸ್ತೆ" ಎಂದು ನಾಮಕರಣ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಇದೇ ರಸ್ತೆಯಲ್ಲಿ ರಾಜ್ ಸಮಾಧಿ ಇರುವುದು ಕೂಡಾ. (ರಾಜ್ ನಂತರ ಯಾರು: ಕೋರ್ಟ್)
ಭಾನುವಾರ (ಏ 12) ಬೆಳಿಗ್ಗೆ 10.30ಕ್ಕೆ ನಾಯಿಂಡಹಳ್ಳಿ ವಾರ್ಡ್ 131 ಕಚೇರಿಯಲ್ಲಿ ನಾಮಕರಣ ಸಮಾರಂಭ ನಡೆಯಲಿದೆ ಎಂದು ಬಿಬಿಎಂಪಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ಸಚಿವ ಮತ್ತು ಸಂಸದ ಅನಂತಕುಮಾರ್, ಮೇಯರ್ ಶಾಂತಕುಮಾರಿ, ಉಪಮೇಯರ್ ರಂಗಣ್ಣ, ರಾಜ್ಯ ಸಚಿವರಾದ ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ರೋಷನ್ ಬೇಗ್, ರಾಮಲಿಂಗ ರೆಡ್ಡಿ, ಶಾಸಕರಾದ ಪ್ರಿಯಕೃಷ್ಣ, ಮುನಿರತ್ನ, ಗೋಪಾಲಯ್ಯ, ಸ್ಥಳೀಯ ಕಾರ್ಪೋರೇಟರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾಜು ಕುಟುಂಬದ ಪಾರ್ವತಮ್ಮ, ಶಿವಣ್ಣ, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications