ಸುಪ್ರೀಂ ತೀರ್ಪಿನ ಬೆನ್ನಲ್ಲೇ 'ಪ್ಲಾನ್ ಬಿ' ಸಿದ್ಧವಾಗಿಟ್ಟುಕೊಂಡ ಮಾಜಿ ಶಾಸಕ ಮುನಿರತ್ನ!
ಬೆಂಗಳೂರು, ಅ. 13: ಬಿಜೆಪಿ ಟಿಕೆಟ್ ಗೊಂದಲಗಳ ಹಿನ್ನೆಲೆಯಲ್ಲಿ ಮೊದಲೇ ಸಿದ್ಧವಾಗಿಟ್ಟುಕೊಂಡಿರುವ 'ಪ್ಲಾನ್ ಬಿ' ಮೊರೆ ಹೋಗಲು ಮಾಜಿ ಶಾಸಕ ಮುನಿರತ್ನ ಸಿದ್ಧವಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹತೆಯೊಂದಿಗೆ ಈಗ ಅತಂತ್ರರೂ ಆಗಿರುವ ಮನಿರತ್ನ ಈಗಾಗಲೇ ಮತ್ತೊಂದು ಸಿದ್ಧತೆ ಮಾಡಿಕೊಂಡಿದ್ದಾರೆ. ಆರ್ಆರ್ ನಗರ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಕೂಡ ಇದೀಗ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಈಗಲೂ ಬಿಜೆಪಿ ಟಿಕೆಟ್ ಘೋಷಣೆ ವಿಳಂಬವಾದರೆ ತಮ್ಮ ಬಿ ಪ್ಲಾನ್ ಪ್ರಕಾರ ನಡೆದುಕೊಳ್ಳಲು ಮುನಿರತ್ನ ಅವರು ತಯಾರಾಗಿದ್ದಾರೆ.
ಆರ್.ಅರ್. ನಗರ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದೇ ಅಕ್ಟೋಬರ್ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಬಿಜೆಪಿಯಿಂದ ಟಿಕೆಟ್ ಕೊಡುವ ಭರವಸೆಯನ್ನು ಸಿಎಂ ಯಡಿಯೂರಪ್ಪ ಅವರು ಮುನಿರತ್ನ ಅವರಿಗೆ ಕೊಟ್ಟಿದ್ದಾರೆ. ಆದರೆ ಅಧಿಕೃತವಾಗಿ ಹೈಕಮಾಂಡ್ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಹೀಗಾಗಿ ತಮ್ಮ ಭವಿಷ್ಯದ ದೃಷ್ಟಿಯಿಂದ ಸವಾಲಿನ ರಾಜಕೀಯ ನಿರ್ಧಾರ ಕೈಗೊಳ್ಳಲು ಮುನಿರತ್ನ ಅವರು ಸಿದ್ಧವಾಗಿದ್ದಾರೆ ಎಂಬ ಮಾಹಿತಿ ಬಂದಿದೆ.
ಮುಂದುವರಿದ ಸಸ್ಪೆನ್ಸ್: ಆರ್.ಆರ್.ನಗರದಲ್ಲಿ ಮುನಿರತ್ನಗೆ ಬಿಜೆಪಿ ಟಿಕೆಟ್ ನಿರಾಕರಣೆ?
ಮತ್ತೊಂದೆಡೆ ಕಳೆದ ಚುನಾವಣೆಯಲ್ಲಿ ಮುನಿರತ್ನ ಅವರ ವಿರುದ್ಧ ಸ್ಪರ್ಧಿಸಿದ್ದ ತುಳಸಿ ಮುನಿರಾಜು ಅವರು ಚುನಾವಣಾ ಪ್ರಚಾರ ಆರಂಭಿಸಿರುವುದು ಮುನಿರತ್ನ ಅವರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಬೇರೆಯದ್ದೆ ಯೋಚನೆಯನ್ನು ಮುನಿರತ್ನ ಅವರು ಮಾಡಿದ್ದಾರೆ ಎನ್ನಲಾಗಿದೆ.
ಪುರಂದರೇಶ್ವರಿ ಭೇಟಿ ಮಾಡಿದ ಮುನಿರತ್ನ
ನಿನ್ನೆ ದಿಢೀರ್ ಎಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮಾಜಿ ಶಾಸಕ ಮುನಿರತ್ನ ತೆರಳಿದ್ದರು. ತಿಮ್ಮಪ್ಪನ ದರ್ಶನದೊಂದಿಗೆ ಮಹತ್ವದ ರಾಜಕೀಯ ಭೇಟಿಯೊಂದನ್ನು ಅವರು ಮಾಡಿದ್ದಾರೆ ಎಂಬ ಮಾಹಿತಿಯಿದೆ.
ಹಿಂದೆ ಕರ್ನಾಟಕ ಬಿಜೆಪಿ ಸಹ ಉಸ್ತುವಾರಿಯಾಗಿದ್ದ ಪುರಂದರೇಶ್ವರಿ ಅವರನ್ನು ಮುನಿರತ್ನ ಅವರು ಹೈದರಾಬಾದ್ನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿಯಿದೆ. ಪುರಂದರೇಶ್ವರಿ ಅವರು ಹೈಕಮಾಂಡ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಜೊತೆಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೂಡ ಆಂಧ್ರಪ್ರದೇಶದವರು ಎಂಬುದು ಗಮನಿಸಬೇಕಾದ ಅಂಶ. ಪುರಂದರೇಶ್ವರಿ ಅವರ ಮೂಲಕ ಮುನಿರತ್ನ ಅವರು ಕೊನೆಯ ಪ್ರಯತ್ನವನ್ನು ಮಾಡಿದ್ದಾರೆ.
ಸುಪ್ರೀಂ ತೀರ್ಪು ಬೆನ್ನಲ್ಲೆ ಕಟೀಲ್ ಭೇಟಿ
ಇನ್ನು ಆರ್ ಆರ್ ನಗರ ಉಪ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸುತ್ತಿದ್ದಂತೆಯೆ ಮಾಜಿ ಶಾಸಕ ಮುನಿರತ್ನ ಅವರು ಇಂದು ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಗೆ ತೆರಳಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಆದರೆ ಟಿಕೆಟ್ ವಿಚಾರವಾಗಿ ಯಾವುದೇ ಸ್ಪಷ್ಟ ಭರವಸೆ ರಾಜ್ಯ ಬಿಜೆಪಿಯಿಂದ ಮುನಿರತ್ನ ಅವರಿಗೆ ಇವತ್ತೂ ಸಿಕ್ಕಿಲ್ಲ ಎನ್ನಲಾಗಿದೆ. ನಾವು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ ಎಂದು ಕಟೀಲ್ ಅವರು ಮುನಿರತ್ನ ಅವರಿಗೆ ತಿಳಿಸಿದ್ದಾರೆ. ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಪ್ರಕಟಿಸಲಿದೆ ಎಂದಿದ್ದಾರೆ ಎನ್ನಲಾಗಿದೆ. ಇದರಿಂದ ಮುನಿರತ್ನ ಅವರು ಅಸಮಾಧಾನಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ನನಗೆ ಕ್ಷೇತ್ರದ ಪರಿಚಯವಿದೆ
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದ ಬಳಿಕ ಹೇಳಿಕೆ ಕೊಟ್ಟಿರುವ ಮುನಿರತ್ನ ಅವರು ಮಾಧ್ಯಮಗಳಿಗೆ ಕೊಟ್ಟಿರುವ ಹೇಳಿಕೆ ಪರೋಕ್ಷವಾಗಿ ಪ್ಲಾನ್ ಬಿ ಮೊರೆ ಹೋಗಲು ಸಿದ್ಧವಾಗಿರುವುದನ್ನು ಸೂಚಿಸಿದೆ.
ಆರ್. ಆರ್. ನಗರ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ
ರಾಜಕೀಯ ಪಕ್ಷ ಅಂದ ಮೇಲೆ ಇದೆಲ್ಲಾ ಸಹಜ. ಆತಂಕಗೊಳ್ಳುವ ವಿಚಾರವೇ ಇಲ್ಲ. ಕ್ಷೇತ್ರ ಗೊತ್ತಿಲ್ಲದೇ ಇದ್ದರೆ ಆತಂಕಗೊಳ್ಳಬೇಕು. ನನಗೆ ಕ್ಷೇತ್ರ ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗೊತ್ತಿದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದು ಮುನಿರತ್ನ ಅವರ ಪ್ಲಾನ್ ಬಿ ಮುನ್ಸೂಚನೆ ಎನ್ನಲಾಗುತ್ತಿದೆ. ಹಾಗಾದರೆ ಅವರ ಪ್ಲಾನ್ ಬಿ ಏನು?
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ?
ನನಗೆ ಕ್ಷೇತ್ರದ ಪರಿಚಯವಿದೆ ಎಂದು ಸೂಚ್ಯವಾಗಿ ಹೇಳಿರುವ ಮುನಿರತ್ನ ಅವರು ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆರ್ ಆರ್ ನಗರದಲ್ಲಿ ಸ್ಪರ್ಧೆ ಮಾಡಲು ಮುನಿರತ್ನ ಸಿದ್ಧತೆ ನಡೆಸಿದ್ದಾರೆ. ನಾಳೆವರೆಗೆ ಕಾಯ್ದು ನೋಡಿ, ನಂತರವೂ ಬಿಜೆಪಿ ಟಿಕೆಟ್ ಅನೌನ್ಸ್ ಮಾಡದೇ ಇದ್ದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಮುನಿರತ್ನ ಅವರು ಸಿದ್ಧತೆ ನಡೆಸಿದ್ದಾರೆ. ಇದೇ ವಿಚಾರವನ್ನು ಹೈಕಮಾಂಡ್ಗೆ ತಿಳಿಸುವಂತೆ ರಾಜ್ಯ ಬಿಜೆಪಿ ಹಿಂದಿನ ಸಹ ಉಸ್ತವಾರಿ ಪುರಂದರೇಶ್ವರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಇದೀಗ ಆತಂಕಗೊಳ್ಳುವ ಸರದಿ ರಾಜ್ಯ ಬಿಜೆಪಿ ಘಟಕದ್ದಾಗಿದೆ. ಮುನಿರತ್ನ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಲ್ಲಿ ಅದರ ನೇರ ಪರಿಣಾಮವನ್ನು ರಾಜ್ಯ ಬಿಜೆಪಿ ಸರ್ಕಾರ ಎದುರಿಸಬೇಕಾಗುತ್ತದೆ. ಯಾಕೆಂದರೆ ಉಳಿದ 16 ಜನ ರೆಬೆಲ್ ಮುಖಂಡರೂ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂಬ ಮಾಹಿತಿ ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಲ್ಲಿ ಜೆಡಿಎಸ್ ಬೆಂಬಲವನ್ನು ಪಡೆಯಲು ಮುನಿರತ್ನ ಅವರು ಪ್ರಯತ್ನ ಮಾಡಲಿದ್ದಾರೆ ಎಂಬ ಮಾಹಿತಿಯಿದೆ.
Recommended Video