ಬೆಂಗಳೂರನ್ನು ಮಹಾನಗರಗಳ ಪಟ್ಟಿಗೆ ಸೇರಿಸುವಂತೆ ಸಂಸದ ತೇಜಸ್ವೀ ಸೂರ್ಯ ಮನವಿ
ನವದೆಹಲಿ, ಡಿಸೆಂಬರ್ 14: ಬೆಂಗಳೂರು ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇತರ ಸಮನಾದ ನಗರಗಳನ್ನು ದೇಶದ ಮಹಾನಗರಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ಮಧ್ಯಮ ವರ್ಗದ ಸಂಬಳದಾರರ ಹಿತಾಸಕ್ತಿ ಕಾಯುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಸತ್ತಿನಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಒತ್ತಾಯಿಸಿದ್ದಾರೆ.
ಆದಾಯ ತೆರಿಗೆ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತಂದು ಪ್ರಸ್ತುತ ಶೇ. 40ರಷ್ಟು ಇರುವ ಮನೆ ಬಾಡಿಗೆ ಭತ್ಯೆಯನ್ನು ಶೇ. 50ಕ್ಕೆ ಏರಿಸುವಂತೆ ಸಂಸತ್ತಿನ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಮೇಲಿನ ಚರ್ಚೆ ಸಂದರ್ಭದಲ್ಲಿ ಅವರು ಒತ್ತಾಯಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, " ಬೆಂಗಳೂರು ಮಹಾನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅತ್ಯಂತ ಪ್ರಮುಖ ನಗರವಾಗಿದ್ದು, ಸಂಬಳದಾರ ವರ್ಗವು ಅತಿ ಹೆಚ್ಚು ವಾಸಿಸುವ ದೇಶದ ಮುಖ್ಯ ನಗರವಾಗಿದೆ . ದೆಹಲಿ, ಚೆನ್ನೈ, ಮುಂಬೈ ಮತ್ತು ಕೊಲ್ಕತ್ತಾ ಗಳ ಸಾಲಿಗೆ ಬೆಂಗಳೂರನ್ನು ಕೂಡ ಸೇರಿಸಿದಲ್ಲಿ, ನಗರದ ಮಧ್ಯಮ ವರ್ಗದ ಸಂಬಳದಾರ ವರ್ಗದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ. ಆದಾಯ ತೆರಿಗೆ ನಿಯಮಾವಳಿಗಳನ್ನು ಪರಾಮರ್ಶಿಸುವ ಮೂಲಕ ಬೆಂಗಳೂರು ನಗರದ ಜನತೆಯ ಮನೆ ಬಾಡಿಗೆ ಭತ್ಯೆ ಹೆಚ್ಚಳಕ್ಕೆ ಮನವಿ ಮಾಡುತ್ತೇನೆ ಎಂದು ವಿವರಿಸಿದರು.

ಬೆಂಗಳೂರು ಅನೇಕ ಸ್ಟಾರ್ಟ್ಅಪ್ ಗಳ ತವರು
ಬೆಂಗಳೂರು 1.18 ಕೋಟಿ ನಾಗರಿಕರನ್ನು ಹೊಂದಿದ್ದು ,ಕರ್ನಾಟಕದ ಜಿಡಿಪಿ ಗೆ 80% ರಷ್ಟು ಕೊಡುಗೆ ನೀಡುತ್ತಿದೆ. ಸಿಲಿಕಾನ್ ವ್ಯಾಲಿ ಎಂದಲೂ ಕರೆಯಲ್ಪಡುವ ಬೆಂಗಳೂರು ಅನೇಕ ಸ್ಟಾರ್ಟ್ಅಪ್ ಗಳ ತವರು. ಐಟಿ, ಐಟಿ ಸಂಬಂಧಿತ ಸೇವೆಗಳು, ಸಾಫ್ಟ್ ವೇರ್ ತಂತ್ರಜ್ಞಾನದ $66.80 ಬಿಲಿಯನ್ ಡಾಲರ್ ಅಥವಾ ಭಾರತದ 40% ರಷ್ಟು ಐಟಿ ರಪ್ತು ವಹಿವಾಟು ನಡೆಸುವ ಬಹು ಮುಖ್ಯ ನಗರವಾಗಿದೆ. ಬಯೋ ಟೆಕ್ನಾಲಜಿ ಗೆ ಸಂಬಂಧಿಸಿದ ಅತೀ ಹೆಚ್ಚಿನ ಸಂಸ್ಥೆಗಳು ಇರುವುದು ಬೆಂಗಳೂರಿನಲ್ಲಿ ಎನ್ನುವುದು ವಿಶೇಷ ಎಂದು ಅವರು ತಿಳಿಸಿದರು.

7,500 ಸ್ಟಾರ್ಟ್ ಅಪ್ಗಳ ಕಾರ್ಯನಿರ್ವಹಣೆ
ಮುಂದುವರಿದು ದೇಶದ 80% ರಷ್ಟು ಸೆಮಿ ಕಂಡಕ್ಟರ್ ಉದ್ಯಮವು ಬೆಂಗಳೂರು ಕೇಂದ್ರಿತವಾಗಿದೆ. 7,500 ಸ್ಟಾರ್ಟ್ ಅಪ್ಗಳ ಕಾರ್ಯನಿರ್ವಹಣೆಯಿಂದ ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಂದು ಕೂಡ ಪ್ರಾಮುಖ್ಯತೆ ಪಡೆದಿದೆ. ಬೆಂಗಳೂರು ಮತ್ತು ಇತರ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಮನೆ ಬಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ, ಬೆಂಗಳೂರು ಮತ್ತು ಇಂತಹ ನಗರಗಳನ್ನು ಮಹಾ ನಗರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದಲ್ಲಿ ಮಧ್ಯಮ ವರ್ಗದ ಸಂಬಳದಾರ ವರ್ಗದ ಜನತೆಗೆ ಅನುಕೂಲವಾಗಲಿದೆ ಎಂದು ಸಂಸತ್ತಿನ ಗಮನ ಸೆಳೆದರು.

ನಾಲ್ಕು ನಗರಗಳು ಮಾತ್ರ ಮೊಟ್ರೋಪಾಲಿಟನ್
ಬೆಂಗಳೂರಿನ ನಿವಾಸಿಗಳಿಗೆ ಆದಾಯ ತೆರಿಗೆಯನ್ನು ಲೆಕ್ಕಹಾಕಲು ಅನುಮತಿಸಲಾದ ಮನೆ ಬಾಡಿಗೆ ಭತ್ಯೆ (ಎಚ್ಆರ್ಎ) ಕಡಿತವನ್ನು ಸಂಬಳದ 50% ಕ್ಕೆ ಹೆಚ್ಚಿಸಲು ಅಧಿಕೃತವಾಗಿ ಬೆಂಗಳೂರನ್ನು ಮೆಟ್ರೋಪಾಲಿಟನ್ ಸಿಟಿ ಎಂದು ಘೋಷಿಸಬೇಕು. ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈಗಳನ್ನು ಮಾತ್ರ ಮೆಟ್ರೋಪಾಲಿಟನ್ ನಗರಗಳೆಂದು ಪರಿಗಣಿಸಲಾಗುತ್ತದೆ. ಅದರ ನಿವಾಸಿಗಳು 50% ವರೆಗೆ ಎಚ್ಆರ್ಎ ಕಡಿತವನ್ನು ಪಡೆಯಬಹುದು ಮತ್ತು ಬೆಂಗಳೂರು ಸೇರಿದಂತೆ ಭಾರತದ ಇತರ ನಗರಗಳು ಎಚ್ಎಆರ್ನಂತೆ ಸಂಬಳದ 40% ಕಡಿತವನ್ನು ಮಾತ್ರ ಪಡೆಯಬಹುದು ಎಂದರು.

ಮೆಟ್ರೋಪಾಲಿಟನ್ ನಗರವಾಗಿ ಘೋಷಿಸಿ
ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳನ್ನು ಹೊಂದಿದೆ. ಎಚ್ಎಆರ್ ವಸತಿ ಬಾಡಿಗೆ ಭತ್ಯೆಯನ್ನು ಶೇಕಡಾ 50 ರಷ್ಟು ಕಡಿತಗೊಳಿಸುವ ಉದ್ದೇಶಕ್ಕಾಗಿ ಐಟಿ ನಿಯಮಗಳನ್ನು ಪರಿಶೀಲಿಸಲು ಮತ್ತು ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ಬೆಂಗಳೂರಿನಂತಹ ನಗರಗಳನ್ನು ಮತ್ತು ಅಂತಹುದೇ ಸ್ಥಾನದಲ್ಲಿರುವ ನಗರಗಳನ್ನು ಮೆಟ್ರೋಪಾಲಿಟನ್ ನಗರಗಳ ಪಟ್ಟಿಗೆ ಸೇರಿಸಲು ನಾನು ಹಣಕಾಸು ಸಚಿವರನ್ನು ವಿನಂತಿಸುತ್ತೇನೆ ಎಂದು ಅವರು ಹೇಳಿದರು.












Click it and Unblock the Notifications