ನಲಪಾಡ್ ಕಾರು ಅಪಘಾತ ಪ್ರಕರಣ: ಈವರೆಗೆ ನಡೆದಿದ್ದೇನು?
ಬೆಂಗಳೂರು, ಫೆಬ್ರವರಿ 13: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ, ಈ ಹಿಂದೆ ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗಿರುವ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮತ್ತೊಂದು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಅವರ ಕಾರು ಅಪಘಾತಕ್ಕೆ ಈಡಾಗಿದ್ದು, ಅಪಘಾತದಲ್ಲಿ ಸಿಲುಕಿದ ವ್ಯಕ್ತಿಯೋರ್ವನಿಗೆ ತೀವ್ರ ಗಾಯಗಳಾಗಿದೆ. ಅಪಘಾತದ ಸಂದರ್ಭದಲ್ಲಿ ಮೊಹಮ್ಮದ್ ನಲಪಾಡ್ ಅವರೇ ಕಾರು ಚಾಲನೆ ಮಾಡುತ್ತಿದ್ದರು ಎಂಬುದು ಪೊಲೀಸರ ಆರೋಪ ಈ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ.
ಮೊಹಮ್ಮದ್ ನಲಪಾಡ್ ಕಾರು ಅಪಘಾತ ಪ್ರಕರಣದಲ್ಲಿ ಕೆಲವು ತಿರುವುಗಳು ಸಹ ಸಂಭವಿಸಿದ್ದು, ನಲಪಾಡ್ ಹಾಗೂ ನಲಪಾಡ್ ಅವರ ಗನ್ಮ್ಯಾನ್ ಬಾಲು ಪ್ರಕರಣದ ಕೇಂದ್ರದಲ್ಲಿದ್ದಾರೆ.
ನನ್ನನ್ನು ಬಿಟ್ಟು ಬಿಡಿ ಎಂದು ಮಾಧ್ಯಮದೆದುರು ಕಣ್ಣೀರಿಟ್ಟ ನಲಪಾಡ್
ನಡೆದಿದ್ದೇನು?: ಫೆಬ್ರವರಿ 9 ರಂದು ಮೇಖ್ರಿ ವೃತ್ತದ ಕೆಳಸೇತುವೆ ಬಳಿ ಬೆಂಟ್ಲಿ ಕಾರು ಗುದ್ದಿ ಸರಣಿ ಅಪಘಾತ ಸಂಭವಿಸಿತ್ತು. ಆ ಕಾರು ಮೊಹಮ್ಮದ್ ನಲಪಾಡ್ ಅವರದ್ದಾಗಿತ್ತು. ಈ ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದ.
ನಲಪಾಡ್ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ
ಈ ಪ್ರಕರಣಕ್ಕೆ ಸಂಭಂಧಿಸಿದಂತೆ ನಲಪಾಡ್ ಅವರಿಗೆ ನೊಟೀಸ್ ನೀಡಿ ಠಾಣೆಗೆ ಹಾಜರಾಗುವಂತೆ ಹೇಳಲಾಗಿತ್ತು. ಅಂತೆಯೇ ನಲಪಾಡ್ ಅವರು ಬುಧವಾರ ಠಾಣೆಗೆ ಹಾಜರಾಗಿದ್ದರು. ಅವರನ್ನು ಬಂಧಿಸಿದ ಸದಾಶಿವನಗರ ಸಂಚಾರ ಪೊಲೀಸರು ನಂತರ ಠಾಣಾ ಜಾಮೀನ ಮೇಲೆ ಬಿಡುಗಡೆ ಮಾಡಿದರು.
ನಲಪಾಡ್ ಗನ್ಮ್ಯಾನ್ ಸಹ ಬಂಧನ
ಆದರೆ ಇದಕ್ಕೂ ಮುನ್ನಾ ನಲಪಾಡ್ ಗನ್ಮ್ಯಾನ್ ಬಾಲಕೃಷ್ಣ, 'ನಾನೇ ಅಂದು ಬೆಂಟ್ಲಿ ಕಾರು ಚಲಾಯಿಸಿದ್ದು ಎಂದು ಪೊಲೀಸ್ ಠಾಣೆಗೆ ಹೋಗಿ ಹೇಳಿದ್ದ'. ಆದರೆ ಆತ ಸುಳ್ಳು ಹೇಳುತ್ತಿದ್ದಾನೆಂದು ಆರೋಪಿಸಿ, ತನಿಖೆ ಹಾದಿ ತಪ್ಪಿಸುವ, ಅಪರಾಧಿಯನ್ನು ತಪ್ಪಿಸುವ ಯತ್ನ ಮಾಡಿದ್ದಾನೆಂದು ಬಾಲಕೃಷ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.
ಮೊಹಮ್ಮದ್ ನಲಪಾಡ್ ನೀಡಿದ ಹೇಳಿಕೆ
ಠಾಣೆ ಜಾಮೀನಿನ ಮೇಲೆ ಹೊರಬಂದ ನಲಪಾಡ್, 'ನಾನು ಕಾರು ಚಲಾಯಿಸಿಲ್ಲ, ನಾನು ಹಿಂದಿನ ಕಾರಿನಲ್ಲಿ ಘಟನೆ ನಡೆದ ಸ್ಥಳಕ್ಕೆ ಬಂದು, ಗಾಯಗೊಂಡವರಿಗೆ ಸಹಾಯ ಮಾಡಿದೆವು. ಅವರ ಆಸ್ಪತ್ರೆ ಖರ್ಚು ನಾವೇ ಕೊಟ್ಟೆವು' ಎಂದರು.
ಭಾವುಕರಾದ ನಲಪಾಡ್
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾವುಕರಾದ ನಲಪಾಡ್, 'ಮೊದಲ ಪ್ರಕರಣದಲ್ಲಿ ನಾನು ಬಹುವಾಗಿ ನೊಂದಿದ್ದೇನೆ. ವಯಸ್ಸಾದ ಅಜ್ಜ, ಅಜ್ಜಿ ನನಗೆ ಇದ್ದಾರೆ, ಅವರು ಬಹುವಾಗಿ ನೋವುಂಡಿದ್ದಾರೆ. ನನ್ನನ್ನು ಅಪರಾಧಿಯನ್ನಾಗಿಸುವ ಉದ್ದೇಶಿತ ಯತ್ನ ಬೇಡ ಎಂದರು. ಸುದ್ದಿಗಾರರು ನಲಪಾಡ್ ಅವರಿಗೆ ಪ್ರಶ್ನೆಗಳನ್ನು ಕೇಳುವ ಹೊತ್ತಿಗೆ, ನಲಪಾಡ್ ಸ್ನೇಹಿತರು, ನಲಪಾಡ್ ಅನ್ನು ಬಲವಂತವಾಗಿ ಸ್ಥಳದಿಂದ ಎಳೆದುಕೊಂಡು ಹೋದರು.
ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು
ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಆರೋಪಿಯನ್ನು ತನಿಖೆಗೆ ಒಳಪಡಿಸಲು ಸಾಕಷ್ಟು ಸಮಯ ಇದೆ. ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ' ಎಂದು ಹೇಳಿದ್ದಾರೆ. ಇಂದು ಪೊಲೀಸರು ಮೇಖ್ರಿ ವೃತ್ತ ಹಾಗೂ ಅದರ ಸುತ್ತ-ಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.