68 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ ಆದ ಕಂಪ್ಲಿ ಶಾಸಕ ಗಣೇಶ್
ಬೆಂಗಳೂರು, ಏಪ್ರಿಲ್ 25: ಶಾಸಕ ಆನಂದ್ ಸಿಂಗ್ ಅವರ ಮೇಲೆ ಈಗಲ್ಟನ್ ರೆಸಾರ್ಟ್ನಲ್ಲಿ ಹಲ್ಲೆ ನಡೆಸಿ ಜೈಲುಪಾಲಾಗಿದ್ದ ಕಂಪ್ಲಿ ಶಾಸಕ ಗಣೇಶ್ ಅವರಿಗೆ ನಿನ್ನೆ ಜಾಮೀನು ದೊರಕಿತ್ತು, ಇಂದು ಅವರು ಜೈಲಿನಿಂದ ಬಿಡುಗಡೆ ಆಗಿ ತಮ್ಮ ನಿವಾಸದತ್ತ ತೆರಳಿದರು.
ನಿಯಮಗಳಂತೆ ಇಂದು ಗಣೇಶ್ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ವಿಕ್ಟೋರಿಯಾ ಆಸ್ಪತ್ರೆಯ ಬಳಿ ಗಣೇಶ್ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು, ಗಣೇಶ್ ಅವರ ಜಯಕಾರಗಳನ್ನೂ ಹಾಕಿದರು.
ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಗಣೇಶ್ ಗೆ ಜಾಮೀನು
ಗಣೇಶ್ ಅವರು ಜನವರಿ 19 ರಂದು ಈಗಲ್ಟನ್ ರೆಸಾರ್ಟ್ನಲ್ಲಿ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ್ದರು, ಜನವರಿ 20 ರಂದು ಅವರ ವಿರುದ್ಧ ದೂರು ದಾಖಲಾಗಿತ್ತು. ನಂತರ ಅವರು ನಾಪತ್ತೆಯಾಗಿದ್ದರು. ನಂತರ ಅವರು ಫೆಬ್ರವರಿ 20 ರಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು, ಫೆಬ್ರವರಿ 21 ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್, ಶಾಸಕ ಗಣೇಶ್ ಜೈಲಿಗೆ
ಗಣೇಶ್ ಅವರು 68 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದು, ಇಂದು ಅವರ ಬಿಡುಗಡೆ ಆಗಿದೆ. ಬಿಡುಗಡೆ ಆದ ನಂತರ ಅವರು ತಮ್ಮ ಮನೆದೇವರು ಹುಲಿಯಮ್ಮ ದೇವರ ದೇವಸ್ಥಾನಕ್ಕೆ ತೆರಳಿದುದಾಗಿ ತಿಳಿದುಬಂದಿದೆ.