ಬಾಲಕಿ ಮೇಲೆ ಅತ್ಯಾಚಾರ ಮಾಡಿದ ರೇಪಿಸ್ಟ್ಗೆ 20 ವರ್ಷ ಸಜೆ
ಬೆಂಗಳೂರು, ಜೂ. 24: ಹದಿನೇಳು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮೂರನೇ ತ್ವರಿತ ಸೆಷನ್ ನ್ಯಾಯಾಲಯ ಆದೇಶ ನೀಡಿದೆ. ಅಲ್ಲದೇ ಸಂತ್ರಸ್ತ ಬಾಲಕಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಬನಶಂಕರಿ ಇಟ್ಟುಮಡು ನಿವಾಸಿ ಬಾಬು ಅಲಿಯಾಸ್ ಚಿಟ್ಟಿಬಾಬು ಶಿಕ್ಷೆಗೆ ಗುರಿಯಾದವನು. ಚಿಟ್ಟಿಬಾಬುಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಈ ವೇಳೆ 17 ವರ್ಷಾದ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ ಚಿಟ್ಟಿಬಾಬು ಲೈಂಗಿಕವಾಗಿ ಬಳಸಿಕೊಳ್ಳುವ ದುರುದ್ದೇಶದಿಂದ ಆಕೆಯ ಜತೆ ಸ್ನೇಹ ಸಂಪಾಂದಿಸಿದ್ದ. ಕೆಲ ದಿನಗಳ ಬಳಿಕ ಪ್ರೀತಿ ಮಾಡುತ್ತಿರುವುದಾಗಿ ನಾಟಕವಾಡಿ ಪುಸಲಾಯಿಸಿದ್ದ. ಇದಕ್ಕೆಒಪ್ಪದೇ ಇದ್ದ ಬಾಲಕಿಗೆ ಕೊಲೆ ಬೆದರಿಕೆ ಹಾಕಿ ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಬಾಲಕಿಯನ್ನು ಬೈಕ್ ನಲ್ಲಿ ಹೊರಗೆ ಕರೆದುಕೊಂಡು ಹೋಗಿ ಮೈ- ಮುಟ್ಟಿ ದೌರ್ಜನ್ಯ ಎಸಗಿದ್ದ. ವಿಷಯವನ್ನು ಹೇಳಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ.
ಆ ಬಳಿಕ ಆ ಬಾಲಕಿಗೆ ಮೊಬೈಲ್ ಕೊಡಿಸಿ ಪ್ರತಿದಿನ ಮಾತನಾಡುವಂತೆ ಬೆದರಿಕೆ ಹಾಕಿದ್ದ. ಚಿಟ್ಟಿಬಾಬು ಬೆದರಿಕೆಗೆ ಹೆದರಿದ್ದ ಬಾಲಕಿ ಆತ ಹೇಳಿದಂತೆ ಮಾಡುತ್ತಿದ್ದಳು. 2017 ರಲ್ಲಿ ಮನೆಯಲ್ಲಿ ಒಬ್ಬಳೇ ಇರುವುದನ್ನು ನೋಡಿ ಒಳ ಹೋಗಿದ್ದ ಚಿಟ್ಟಿಬಾಬು ಮನೆಗೆ ಹೋಗಿ ಬೈಕ್ ನಲ್ಲಿ ಪರಿಚಿತರ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದ. ಈ ವಿಷಯ ತಿಳಿದ ಬಾಲಕಿಯ ಪೋಷಕರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಅಂದಿನ ಜಯನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಉಮಾ ಮಹೇಶ್ ಎಸ್.ಪಿ, ಆರೋಪಿಯ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 3 ನೇ ತ್ವರಿತ ಸೆಷನ್ಸ್ ನ್ಯಾಯಾಲಯದ ನ್ಯಾ. ಇಷ್ಕಕ್ ಜಹಾನ್ ಅರ ಅವರು, ಅತ್ಯಾಚಾರ ಆಅಪರಾಧಕ್ಕೆ 10 ವರ್ಷ ಶಿಕ್ಷೆ, ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ತಪ್ಪಿದಲ್ಲಿ ಒಂದು ವರ್ಷ ಶಿಕ್ಷೆ ಹೆಚ್ಚುವರಿಯಾಗಿ ಅನುಭವಿಸುವಂತೆ ಆದೇಶಿಸಿದ್ದಾರೆ.
ಪೋಸ್ಕೋ ಕಾಯ್ದೆ ಕಲಂ 5 ರ ಅಡಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ ಚಿಟ್ಟಿಬಾಬುಗೆ 20 ವರ್ಷ ಶಿಕ್ಷೆ ಹಾಗೂ ನೊಂದ ಬಾಲಕಿಗೆ ನಾಲ್ಕು ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಧೀಶರು ಮಹತ್ವದ ಆದೇಶ ನೀಡಿದ್ದಾರೆ. ಆರೋಪಿ ನ್ಯಾಯಾಲಯಕ್ಕೆ ಕಟ್ಟಬೇಕಿರುವ ಹತ್ತು ಸಾವಿರ ರೂ. ದಂಡವನ್ನು ಸಹ ನೊಂದ ಬಾಲಕಿಗೆ ನೀಡುವಂತೆ ಆದೇಶಿಸಿ ನ್ಯಾಯಾಧೀಶರು ಮಾನವೀಯ ತೀರ್ಪು ನೀಡಿದ್ದಾರೆ. ಸಂತ್ರಸ್ತ ಬಾಲಕಿ ಪರವಾಗಿ ಸರ್ಕಾರಿ ಅಭೀಯೋಜಕಿ ಗೀತಾ ರಾಮಕೃಷ್ಣ ಗೊರವರ ಅವರು ವಾದ ಮಂಡಿಸಿದ್ದರು.