ಒಕ್ಕಲಿಗರ ಒಗ್ಗಟ್ಟಿನ ಮಂತ್ರ, ದೇವೇಗೌಡರ ಕಾಲಿಗೆ ನಮಸ್ಕರಿಸಿದ ಡಿಕೆಶಿ
ಬೆಂಗಳೂರು, ಜೂನ್ 27: ಇಲ್ಲಿ ಮಂಗಳವಾರ ನಡೆದ ಕೆಂಪೇಗೌಡ ಜಯಂತಿ ಹೊಸ ಸನ್ನೆಗಳನ್ನು, ಸೂಚನೆಗಳನ್ನು ನೀಡಿತು. ಯಾರಿಗೂ ಅದರಲ್ಲೂ ರಾಜಕೀಯ ಪ್ರತಿಸ್ಪರ್ಧಿಗಳಿಗಂತೂ ಚೂರೂ ಬೆಂಡಾಗದ ಇಂಧನ ಸಚಿವ -ಕಾಂಗ್ರೆಸ್ ನ ಹಿರಿಯ ನಾಯಕ ಡಿಕೆ ಶಿವಕುಮಾರ್ ಮಾಜಿ ಪ್ರಧಾನಿ ದೇವೇಗೌಡರ ಕಾಲಿಗೆ ನಮಸ್ಕಾರ ಮಾಡುವ ರೀತಿಯಲ್ಲಿ ನಡು ಬಗ್ಗಿಸಿದ್ದು ಅಚ್ಚರಿಗೆ ಕಾರಣವಾಯಿತು.
ಈ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದರು. ಅದಕ್ಕಾಗಿ ದೆಹಲಿ ಮಟ್ಟದವರೆಗೆ ಲಾಬಿ ಕೂಡ ಮಾಡಿದ್ದರು. ಆದರೆ ಆ ಸ್ಥಾನದಲ್ಲಿ ಪರಮೇಶ್ವರ್ ಅವರನ್ನೇ ಮುಂದುವರಿಸಲಾಯಿತು. ಆ ನಂತರ ಕೆಲ ದಿನಗಳ ಕಾಲ ಮುನಿಸಿಕೊಂಡಿದ್ದ ಅವರು, ಮಾಧ್ಯಮಗಳ ಎದುರು ಮಾತ್ರ ಎಲ್ಲ ಸರಿಯಿದೆ ಎಂಬಂತೆ ಇದ್ದರು.

ಮಂಗಳವಾರ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರೆಲ್ಲರೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ ಹಾಗೂ ಚಂದ್ರಶೇಖರನಾಥ ಸ್ವಾಮೀಜಿ ಕಾಲಿಗೆ ನಮಸ್ಕರಿಸಿ ಮುಂದಕ್ಕೆ ಸಾಗಿದ ಡಿಕೆ ಶಿವಕುಮಾರ್ ವಾಪಸ್ ಬಂದು ದೇವೇಗೌಡರಿಗೂ ನಮಸ್ಕರಿಸಿದರು.

ಈ ಕಾರ್ಯಕ್ರಮ ಒಕ್ಕಲಿಗ ಜನಾಂಗಕ್ಕೆ ತುಂಬ ಪ್ರಮುಖವಾದದ್ದು ಹೌದು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದೇವೇಗೌಡರ ಕೈ ಕುಲುಕಿದರು. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇನ್ನೇನು ಕಣ್ಣೆದುರು ಇದೆ. ಇಂಥ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರಲ್ಲಿನ ಈ ಬದಲಾವಣೆ ಹಲವು ಕುತೂಹಲ, ಚರ್ಚೆಗೆ ಕಾರಣವಾಗಿದೆ.












Click it and Unblock the Notifications