ಈ ಮಾನಸಿಕ ಅಸ್ವಸ್ಥ ವ್ಯಕ್ತಿ ಪತ್ತೆಯಾದರೆ ತಿಳಿಸಿ
ಬೆಂಗಳೂರು, ಡಿಸೆಂಬರ್ 14 : ಮಿರಜ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಕಿತ್ತೂರು ಚೆನ್ನಮ್ಮ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 58 ವರ್ಷದ ಪುರುಷರು ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡಬೇಕೆಂದು ಅವರ ಸಂಬಂಧಿಕರು ಪೊಲೀಸರನ್ನು ಮತ್ತು ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.
ಬೆಂಗಳೂರಿನ ಜಾಲಹಳ್ಳಿ ವಾಸಿಯಾಗಿರುವ ಜನಾರ್ದನ್ ದಶರಥ್ ಗಾಯಕ್ವಾಡ್ (58) ನಾಪತ್ತೆಯಾಗಿರುವ ವ್ಯಕ್ತಿ. ಮಾನಸಿಕವಾಗಿ ಅರೆಅಸ್ವಸ್ಥವಾಗಿರುವ ಅವರು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಕಾಣೆಯಾಗಿರುವುದು ಯಶವಂತಪುರಕ್ಕೆ ಬಂದ ನಂತರವೇ ಗೊತ್ತಾಗಿದೆ.
ಮಹಾರಾಷ್ಟ್ರದ ಮಿರಜ್ ನಿಂದ ಅವರ ಸಂಬಂಧಿ ಕಿಶೋರ್ ಗಾಯಕ್ವಾಡ್ ಮತ್ತೊಬ್ಬ ಹಿರಿಯ ಮಹಿಳೆಯೊಂದಿಗೆ ಡಿಸೆಂಬರ್ 12ರಂದು ಅವರು ಬೆಂಗಳೂರಿಗೆ ಪಯಣಿಸುತ್ತಿದ್ದರು. ಅವರು ಎಸ್ 9 ಬೋಗಿಯ 39ನೇ ಬರ್ತ್ ನಲ್ಲಿದ್ದರೆ, ಅವರ ಸಂಬಂಧಿಗಳು ಎಸ್ 8ರಲ್ಲಿ ಪಯಣಿಸುತ್ತಿದ್ದರು.

ಡಿಸೆಂಬರ್ 13ರ ಬೆಳಗಿನ ಜಾವ ಯಶವಂತಪುರಕ್ಕೆ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ಬಂದನಂತರ ವಿಚಾರಿಸಲಾಗಿ, ಜನಾರ್ದನ್ ಅವರು ಬೆಳಗಾವಿ ಜಿಲ್ಲೆಯ ಖಾನಾಪುರದ ಬಳಿಯ ಲೋಂಡಾ ಸ್ಟೇಷನ್ ನಲ್ಲಿಂದಲೇ ಅವರು ಬೋಗಿಯಲ್ಲಿ ಕಾಣಿಸಿಕೊಂಡಿಲ್ಲ. ಲೋಂಡಾ ಸ್ಟೇಷನ್ ನಲ್ಲಿಯೇ ಅವರು ಇಳಿದಿರಬಹುದೆಂದು ಶಂಕಿಸಲಾಗಿದೆ.
ಪಿಂಕ್ ಬಣ್ಣದ ಅಂಗಿ, ಕಂದು ಬಣ್ಣದ ಪ್ಯಾಂಟ್ ತೊಟ್ಟಿರುವ ಜನಾರ್ದನ್ ಅವರ ಭಾವಚಿತ್ರ ಇಲ್ಲಿದೆ. ಅವರ ಬಳಿ ಯಾವುದೇ ಗುರುತಿನ ಚೀಟಿಯಾಗಲಿ, ಮೊಬೈಲ್ ಫೋನ್ ಆಗಲಿ ಇಲ್ಲದ್ದರಿಂದ ಪತ್ತೆ ಹಚ್ಚುವುದು ಭಾರೀ ಜಟಿಲವಾಗಿದೆ.
ಅವರ ನಾಪತ್ತೆಯ ಕುರಿತು ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಎಫ್ಐಆರ್ ಸಂಖ್ಯೆ : 0217/2015. ಅವರು ಕಂಡುಬಂದಲ್ಲಿ ಸಂಪರ್ಕಿಸಬೇಕಾದ ಸಂಖ್ಯೆಗಳು : +91-7259936481/+91-7259992970.












Click it and Unblock the Notifications