ನಾನು, ನನ್ನ ಕುಟುಂಬ ಒಂದೇ ಒಂದು ನಿವೇಶನ ಪಡೆದಿಲ್ಲ: ಸಚಿವರು ಸ್ಪಷ್ಟನೆ ಕೊಟ್ಟಿದ್ಯಾಕೆ?
ಬೆಂಗಳೂರು, ಸೆಪ್ಟಂಬರ್ 02: ರಾಜ್ಯದಲ್ಲಿ ಮುಡಾ ಹಗರಣ ಸೇರಿದಂತೆ, ಸಿಎ ನಿವೇಶನ ಹಂಚಿಕೆ ಬಗ್ಗೆ ವ್ಯಾಪಕ ಆರೋಪಗಳನ್ನು ರಾಜ್ಯ ಸರ್ಕಾರ ಎದುರಿಸುತ್ತಿದೆ. ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಅವರ ಕುಟುಂಬ ಸಕ್ರಿಯವಾಗಿರುವ ಸಿದ್ಧಾರ್ಥ್ ಟ್ರಸ್ಟ್ಗೆ ನಿವೇಶನ ನೀಡಿದ್ದಕ್ಕೆ ಸ್ಪಷ್ಟನೆ ಮೂಲಕ ಖಾರವಾಗಿ ತಿರುಗೇಟು ಕೊಟ್ಟಿದ್ದ ಕೈಗಾರಿಕೆ ಸಚಿವರು, ತಮ್ಮ ಕುಟುಂಬದ ಕುರಿತು ಒಂದಷ್ಟು ಸ್ಪಷ್ಟನೆ ನೀಡಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಆರೋಪಕ್ಕೆ ಅವರು ಪ್ರತಿಯುತ್ತರ ನೀಡಿದ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ನಾನಾಗಲಿ, ನಮ್ಮ ಕುಟುಂಬದ ಇತರರಾಗಲಿ ಜಿ- ಕ್ಯಾಟಗರಿ, ಕೆಎಚ್ ಬಿ ಅಥವಾ ಕೆಐಎಡಿಬಿಯ ನಿವೇಶನಗಳನ್ನು ಸರ್ಕಾರದಿಂದ ಪಡೆದುಕೊಂಡಿಲ್ಲ ಎಂದು ತಿಳಿಸಿದರು.

ವಿವಿಧ ಸಂಸ್ಥೆಗಳು ಬೆಂಗಳೂರಿಗೆ ಕೊಡುಗೆ ನೀಡಿವೆ
ನಮ್ಮ ಕುಟುಂಬಕ್ಕೂ ಬಾಗ್ಮನೆ ಕುಟುಂಬಕ್ಕೂ 25-30 ವರ್ಷಗಳಿಂದಲೂ ಪರಸ್ಪರ ಒಡನಾಟವಿದೆ. ಬೆಂಗಳೂರಿನ ಅಭಿವೃದ್ಧಿಗೆ ಪ್ರೆಸ್ಟೀಜ್, ಬ್ರಿಗೇಡ್, ಎಂಬೆಸಿ, ಮಂತ್ರಿ, ಬಾಗ್ಮನೆ ಸಮೂಹ ಸೇರಿದಂತೆ ಹಲವು ಉದ್ಯಮ ಸಮೂಹಗಳು ಕೊಡುಗೆ ನೀಡಿವೆ. ಎಲ್ಲ ಪಕ್ಷಗಳ ಸರ್ಕಾರಗಳ ಆಡಳಿತಾವಧಿಯಲ್ಕೂ ಈ ಸಂಸ್ಥೆಗಳು ಈ ರೀತಿ ನಿವೇಶನ ಪಡೆದು, ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ನೀಡಿರುವುದನ್ನು ನಾರಾಯಣಸ್ವಾಮಿ ಅರ್ಥ ಮಾಡಿಕೊಳ್ಳಬೇಕು' ಎಂದು ಸಚಿವರು ತಿರುಗೇಟು ನೀಡಿದರು.
ಬಾಗ್ಮನೆಯೊಂದಿಗೆ ನಮ್ಮ ಕುಟುಂಬ ಮಟ್ಟದ ವ್ಯವಹಾರಕ್ಕೂ ಸರಕಾರದ ಮಟ್ಟದಲ್ಲಿ ಆಗುವ ನಿರ್ಧಾರಗಳಿಗೂ ಸಂಬಂಧವಿಲ್ಲ ಎಂದು ಅವರು ಹೇಳಿದರು.
ಬಾಗ್ಮನೆ ಸಂಸ್ಥೆಯವರು ಬೆಂಗಳೂರಿನ ಏರೋಸ್ಪೇಸ್ ಪಾರ್ಕಿನಲ್ಲಿ ಕೈಗಾರಿಕಾ ನಿವೇಶನ ಕೋರಿ ಅರ್ಜಿ ಹಾಕಿದ್ದರು. ಇಂತಹ ಸಂದರ್ಭದಲ್ಲಿ ನಾವು ಸಂಸ್ಥೆಯ ಅರ್ಹತೆ, ಸಾಧನೆಗಳನ್ನು ಮಾತ್ರ ಪರಿಗಣಿಸುತ್ತೇವೆ ಅಷ್ಟೆ. ನಾರಾಯಣಸ್ವಾಮಿ ಅವರಿಗೆ ಇಂತಹ ಸರಳ ಸತ್ಯ ಗೊತ್ತಾಗದೆ ಇರುವುದು ಆಶ್ಚರ್ಯಕರ ಸಂಗತಿ ಎಂದು ಅವರು ವಿವರಿಸಿದರು.
ವೈಯಕ್ತಿಕ ಮತ್ತು ಸರ್ಕಾರದ ಕೆಲಸಗಳನ್ನು ಪರಸ್ಪರ ತಳುಕು ಹಾಕಬಾರದು. ನಾರಾಯಣಸ್ವಾಮಿ ಇಂತಹ ಪ್ರಬುದ್ಧತೆಯನ್ನು ಪ್ರದರ್ಶಿಸಬೇಕು. ಇವರ ಮಾತುಗಳ ಹಿಂದೆ ಯಾರ ಕುಮ್ಮಕ್ಕು ಇದೆ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ ಎಂದು ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.
ಮುಡಾ ಅರ್ಜಿ ವಿಚಾರಣೆ ಸೆ.9ಕ್ಕೆ ಮುಂದೂಡಿಕೆ
ಮುಡಾ ಹಗರಣ ರಾಜ್ಯ ಸರ್ಕಾರದ ಮಟ್ಟಿಗೆ ಭಾರೀ ತಲ್ಲಣ ಸೃಷ್ಟಿಸಿದೆ. ಈ ಕುರಿತು ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇತ್ತ ರಾಜ್ಯಪಾಲರಿಗೆ ಸಿಎಂ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಅವರು ನಗರ ಸೆಷನ್ ನ್ಯಾಯಾಯಲದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಹೈಕೋರ್ಟ್ ಸಿಎಂ ಅವರ ಅರ್ಜಿ ವಿಚಾರಣೆಯನ್ನು ಮುಂದಿನ ಸೆಪ್ಟಂಬರ್ 9ಕ್ಕೆ ಮುಂದೂಡಿ ಸೋಮವಾರ ಆದೇಶಿಸಿದೆ.












Click it and Unblock the Notifications