ಮತಭೇಟೆಗಿಳದ ಪ್ರಚಾರ ಸಮಿತಿಯ ಅಧ್ಯಕ್ಷ- ಎಂಬಿ ಪಾಟೀಲ್ ಆಗಸ್ಟ್ 19ರಿಂದ ರಾಜ್ಯ ಪ್ರವಾಸ
ಬೆಂಗಳೂರು, ಆಗಸ್ಟ್ 16: ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಎಂಬಿ ಪಾಟೀಲ್ ಕಾರ್ಯಾಲಯವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಿದ್ದಾರೆ. ಪದಾಧಿಕಾರಿಗಳ ಪಟ್ಟಿಯು ಅಂತಿಮವಾಗಿದ್ದು ಆಗಸ್ಟ್ 19ರಂದ ಪ್ರಥಮ ಹಂತದ ರಾಜ್ಯ ಪ್ರವಾಸಕ್ಕೆ ಎಂ.ಬಿ. ಪಾಟೀಲ್ ಸಿದ್ದರಾಗಿದ್ದಾರೆ.
ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಆ.19ರಂದು ಪ್ರಥಮ ಹಂತದ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. 19ರಂದು ಕಲಬುರ್ಗಿಯಿಂದ ಆರಂಭವಾಗಿ, 20ರಂದು ಹುಬ್ಬಳ್ಳಿ, ಅಂದು ಸಂಜೆ ಧಾರವಾಡ, 23ರಂದು ಚಿತ್ರದುರ್ಗ, 24ರಂದು ಶಿವಮೊಗ್ಗ, 26ರಂದು ಮೈಸೂರು, 27ರಂದು ಚಾಮರಾಜನಗರ, ಸೆ.1ರಂದು ಮಂಗಳೂರು, 2ರಂದು ಉಡುಪಿ, 3ರಂದು ತುಮಕೂರು, 5ರಂದು ಕೊಪ್ಪಳ, 6 ಬಳ್ಳಾರಿ, ವಿಜಯನಗರ, 7ರಂದು ರಾಯಚೂರು, 8ರಂದು ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ.
ಸೆ.27ರಿಂದ ರಾಜ್ಯದಲ್ಲಿ ಆರಂಭವಾಗಲಿರುವ ಭಾರತ್ ಜೋಡೋ ಕಾರ್ಯಕ್ರಮ ತಯಾರಿ ಗಮನದಲ್ಲಿಟ್ಟುಕೊಂಡು ಉಳಿದ ಪ್ರವಾಸ ಪಾಟೀಲ್ ಕೈಗೊಳ್ಳಲಿದ್ದಾರೆ. ಈ ಪ್ರವಾಸದಲ್ಲಿ ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ಮಾಡಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ.

ರೈತರ ಆದಾಯ ಡಬಲ್ ಆಗಿಲ್ಲ, ಕಪ್ಪು ಹಣ ಬಂದಿಲ್ಲ
ಪಕ್ಷದ ನಾಯಕರೆಲ್ಲರೂ ಚರ್ಚೆ ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆಗಳು, ಪ್ರಥಮ ಪ್ರಧಾನಿ ನೆಹರೂರಿಂದ ಮನಮೋಹನ್ ಸಿಂಗ್ ಕಾಲದವರೆಗೂ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ರಾಜ್ಯದ ಜನರಿಗೆ ತಿಳಿಸಲು ಕಾರ್ಯಕ್ರಮ ರೂಪಿಸುತ್ತೇವೆ. ಇನ್ನು ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ಸರ್ಕಾರದಿಂದ ಸಿದ್ದರಾಮಯ್ಯ ಸರ್ಕಾರದವರೆಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಪ್ರಚಾರ ಮಾಡುತ್ತೇವೆ. ಬಿಜೆಪಿ ಸರ್ಕಾರದ ವೈಫಲ್ಯಗಳು, ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಕೊಟ್ಟಿದ್ದ ಮಾತು, ಅದರ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲ, ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುವಲ್ಲಿ ವಿಫಲ, ರೈತರ ಆದಾಯ ಡಬಲ್ ಆಗಿಲ್ಲ. ಅವರು ಕೊಟ್ಟ ಮಾತು ನಡೆದಿಲ್ಲ. ಬೆಲೆಏರಿಕೆ, ನಿರುದ್ಯೋಗ ಹೆಚ್ಚಾಗಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.

ಮೌನಂ ಸಮ್ಮತಿ ಲಕ್ಷಣಂ ಎಂಬತಿರುವ ಸರ್ಕಾರ
ನೋಟುಅಮಾನ್ಯ, ಅವೈಜ್ಞಾನಿಕ ಜಿಎಸ್ ಟಿಯಿಂದ ಜನರಿಗೆ ಆಗುತ್ತಿರುವ ತೊಂದರೆ ಎಲ್ಲ ವಿಚಾರದಲ್ಲೂ ಜನಿರೆಗೆ ಜಾಗೃತಿ ಮೂಡಿಸುತ್ತೇವೆ. ಹಾಲು ಮೊಸರಿನ ಮೇಲೆ ಜಿಎಸ್ ಟಿ ಜತೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೂ ಜಿಎಸ್ ಟಿ ಹಾಕಿದ್ದಾರೆ. ಆ ಮೂಲಕ ಈ ಸರ್ಕಾರ ಬದುಕಲು ಬಿಡುವುದಿಲ್ಲ, ಸತ್ತ ಮೇಲೂ ಬಿಡುವುದಿಲ್ಲ ಎಂಬಂತೆ ಸುಲಿಗೆ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದರು. ಅವರು ಕೊಟ್ಟ ಯಾವುದೇ ಭರವಸೆ ನೀಡಿಲ್ಲ.ಇನ್ನು ಈ ಸರ್ಕಾರದಲ್ಲಿ 40% ಭ್ರಷ್ಟಾಚಾರ ನಡೆಯುತ್ತಿದೆ. ಪ್ರಧಾನಿಗಳಿಗೆ ಗುತ್ತಿಗೆದಾರರ ಸಂಘ ಅಧ್ಯಕ್ಷರು ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟರ ವಿರುದ್ಧ ಆದಾಯ ತೆರಿಗೆ, ಇಡಿ, ಸಿಬಿಐ ದಾಳಿ ಆಗಿಲ್ಲ? ಪ್ರಧಾನಿಗಳು ಮೌನವಾಗಿರುವುದೇಕೆ? ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಾಗಿದೆ. ಸರ್ಕಾರದ ಮಂತ್ರಿಗಳು ಯಾವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಯುತ್ತಿಲ್ಲ. ಹೀಗಾಗಿ ಇದು ದಿಕ್ಕು ದೆಸೆ ಇಲ್ಲದ ಸರ್ಕಾರವಾಗಿದೆ. ಇದರ ಜತೆಗೆ ಸಚಿವ ಮಾಧುಸ್ವಾಮಿ ಅವರು ಈ ಸರ್ಕಾರ ಕಾಲವನ್ನು ತಳ್ಳಿಕೊಂಡು ಹೋಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಎಂಬಿ ಪಾಟೀಲ್ ಹೇಳಿದರು.

ಹಲವು ವಿಚಾರಗಳಲ್ಲಿ ಗೊಂದಲ ಸೃಷ್ಟಿ
ಕಾನೂನು ಸಚಿವರೇ ಇದನ್ನು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಹಿಂದೆ ಬೆಂಗಳೂರನ್ನು ವಿಶ್ವವೇ ಐಟಿ ರಾಜಧಾನಿಯಾಗಿ ನೋಡುತ್ತಿತ್ತು. ರಾಜ್ಯ ಅತ್ಯಂತ ಶ್ರೇಷ್ಠ ಮುಖ್ಯಮಂತ್ರಿಗಳನ್ನು ಹೊಂದಿದ್ದು, ದೇಶಕ್ಕೆ ಮಾದರಿಯಾಗಿದ್ದೆವು. ಆದರೆ ಇಂದು ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಜಾರಿಗೆ ತರುವ ಚರ್ಚೆ ಆಗುತ್ತಿದೆ. ಯಾವ ರಾಜ್ಯ ಪ್ರಗತಿ ಕಂಡಿಲ್ಲ, ಅದನ್ನು ಮಾದರಿಯಾಗಿ ಪರಿಗಣಿಸಲಾಗುತ್ತಿದೆ. ಕರ್ನಾಟಕ ಎಲ್ಲ ವರ್ಗದ ಜನರ ನೆಚ್ಚಿನ ತಾಣವಾಗಿತ್ತು. ಎಲ್ಲರನ್ನು ಆಕರ್ಷಿಸುತ್ತಿತ್ತು. ಇದು ಕರ್ನಾಟಕ ಸಮೃದ್ಧಿ ರಾಜ್ಯವಾಗಿತ್ತು. ಇದಕ್ಕೆ ಕುವೆಂಪು ಅವರು ನಮ್ಮ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು. ಆದರೆ ಈಗ ಇದನ್ನು ನಾಶ ಮಾಡಲಾಗುತ್ತಿದೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ಮತ ವಿಭಜನೆಗಾಗಿ ಹಿಜಾಬ್, ಹಲಾಲ್ ಸೇರಿದಂತೆ ಹಲವು ವಿಚಾರಗಳಲ್ಲಿ ಗೊಂದಲ ಸೃಷ್ಟಿಸಿದರು. ನಂತರ ಚಕ್ರತೀರ್ತ ಅವರ ಪಠ್ಯ ಪರಿಷ್ಕರಣ ಸಮಿತಿ ಮೂಲಕ ಎಲ್ಲ ಸಮಾಜದ ಮಹನೀಯರಿಗೆ ಅಪಮಾನ ಮಾಡಿದರು. ಈ ಸಮಿತಿ ಬಸವಣ್ಣ, ಮಹಾತ್ಮ ಗಾಂಧಿ, ನಾರಾಯಣ ಗುರು, ಸುರಪುರ ನಾಯಕರು, ಶಂಕರಾಚಾರ್ಯರು, ಆದಿ ಚುಂಚನಗಿರಿ ಸ್ವಾಮಿ, ಕುವೆಂಪು, ಸಿದ್ದಗಂಗಾ ಸ್ವಾಮಿ ಸೇರಿದಂತೆ ಎಲ್ಲರ ಇತಿಹಾಸ ತಿರುಚಿ ಅಪಮಾನ ಮಾಡಿದರು. ಇದು ಅವರ ನಿಜವಾದ ಅಜೆಂಡಾವನ್ನು ಪ್ರದರ್ಶಿಸುತ್ತದೆ ಎಂದು ಬಿಜೆಪಿ ವಿರುದ್ದ ಎಂ.ಬಿ ಪಾಟೀಲ್ ಹರಿಹಾಯ್ದರು.

ಆರ್ಟಿಕಲ್ 371 ಜಾರಿ ಮೂಲಕ ಯುವಕರಿಗೆ ಉದ್ಯೋಗ
ಈ ಎಲ್ಲ ವಿಚಾರ ಚರ್ಚೆ ಮಾಡಿದ್ದು, ಜಿಲ್ಲಾ ಮಟ್ಟದಲ್ಲಿ ನಾಯಕರು, ಮುಖಂಡರಿಗೆ ತಿಳಿಸಬೇಕಾಗುತ್ತದೆ. ಇನ್ನು ಸ್ಥಳೀಯ ಸಮಸ್ಯೆಗಳ ವಿಚಾರವಾಗಿ ಚರ್ಚೆ ಮಾಡಬೇಕಾಗುತ್ತದೆ. ಉದಾಹರಣೆಗೆ ಕಲ್ಯಾಣ ಕರ್ನಾಟಕದಲ್ಲಿ ಆರ್ಟಿಕಲ್ 371 ಮೂಲಕ ವಿಶೇಷ ಸ್ಥಾನಮಾನ ವಿಚಾರ. ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಲಾಲ್ಕೃಷ್ಣ ಆಡ್ವಾಣಿ ಅವರು ಸಂಸತ್ತಿನಲ್ಲಿ ಸಾಧ್ಯವಿಲ್ಲ ಎಂದಿದ್ದನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂ ಸಿಂಗ್ ಅವರು ಮಾಡಿ ತೋರಿಸಿದರು. ಇದರಿಂದ ಆ ಭಾಗದ 8-10 ಜಿಲ್ಲೆಗಳ ಯುವಕರಿಗೆ ಕೆಲಸ ಸಿಗುತ್ತಿದೆ, ಆ ಭಾಗ ಅಭಿವೃದ್ಧಿ ಕಾಣುತ್ತಿದೆ. ಇಂತಹ ಸ್ಥಳೀಯ ವಿಚಾರಗಳ ಚರ್ಚೆಗಳು ಆಗಬೇಕಿದೆ. ಅವುಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಲಾಗುವುದು. ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಸೇರಿದಂತೆ ಎಲ್ಲ ನಾಯಕರ ಜತೆ ಸಹಕಾರ ನೀಡುತ್ತಾ ಕೆಲಸ ಮಾಡುತ್ತೇವೆ.

ಸಾಮಾಜಿಕ ಜಾಲತಾಣಗಳ ಸದ್ಭಳಕೆ
ಪ್ರಿಯಾಂಕ್ ಖರ್ಗೆ ಮಾತನಾಡಿ, 'ಚುನಾವಣೆ ಮಾಡುವ ರೀತಿ ಬದಲಾಗಿದೆ. ಹೊಸ ತಂತ್ರಜ್ಞಾನ ಬಂದಿವೆ, ಅಭಿಪ್ರಾಯ ಸಂಗ್ರಹಿಸಿದೆ. ಅಂತರ್ಜಾಲ, ಮೊಬೈಲ್ ಬಳಕೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದೆ. ಮಾಧ್ಯಮದಲ್ಲಿ ಮುದ್ರಣ, ವಿದ್ಯುನ್ಮಾನ ಮಾಧ್ಯಮ ಈಗ ಡಿಜಿಟಲ್ ಮಾಧ್ಯಮ ಬಂದಿದೆ. ಅದೇ ರೀತಿ ಚುನಾವಣೆಯಲ್ಲಿ ಹೊಸ ಆವಿಷ್ಕಾರ ಬರುತ್ತಿದೆ. ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶೇ.4ಕ್ಕೂ ಹೆಚ್ಚು ಜನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವಿತರಾಗಿದ್ದಾರೆ. ಮತದಾರರ ಅಂಕಿಅಂಶ, ಬೂತ್ ಮಟ್ಟದಲ್ಲಿ ನಿರ್ವಹಣೆ, ಹೊಸ ಮತದಾರರ ಗುರುತಿಸುವುದನ್ನು ವೃತ್ತಿಪರವಾಗಿ ಮಾಡಬೇಕಾಗುತ್ತದೆ. ಯಾವುದೇ ಪಕ್ಷದಲ್ಲಿ ಈ ವಿಚಾರವಾಗಿ ತಜ್ಞರಿಲ್ಲ. ಹೀಗಾಗಿ ಬಿಜೆಪಿಯವರು ಬಿಲಿಯನ್ ಮೈಂಡ್ಸ್ ಎಂಬ ಸಂಸ್ಥೆಯನ್ನು ನೇಮಿಸಿದೆ. ನಮಗೆ ಅರ್ಥವಾಗದ ಕೆಲವು ವಿಚಾರಗಳ ಬಗ್ಗೆ ತಜ್ಞರಿಂದ ಸಲಹೆ ಪಡೆಯುತ್ತೇವೆ. ಅವರು ಹೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ನಮ್ಮ ಪಕ್ಷದಲ್ಲಿರುವ ಹಿರಿಯರು ಅದನ್ನು ತಿದ್ದುತ್ತಾರೆ'ಎಂದು ತಿಳಿಸಿದರು.

ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ 136 ಸ್ಥಾನ
ನಮ್ಮ ಪ್ರಚಾರ ಸಮಿತಿ ಅಧ್ಯಕ್ಷರು ಮೊದಲ ಹಂತದ ಪ್ರವಾಸ ಮಾಡಿ ರಾಜ್ಯ ಮಟ್ಟದ ಪದಾಧಿಕಾರಿಗಳನ್ನು ನೇಮಿಸಿ, ನಂತರ ಜಿಲ್ಲಾ ಮಟ್ಟದ ಪದಾಧಿಕಾರಿ ಆಯ್ಕೆ ಮಾಡಬೇಕಾಗುತ್ತದೆ. ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಲು ಈ ಪ್ರವಾಸ ಮಾಡುತ್ತಿದ್ದಾರೆ. ಮುಂದೆ ಪಕ್ಷ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದರ ಬಗ್ಗೆ ಪಕ್ಷದ ಎಲ್ಲ ಹಿರಿಯ ನಾಯಕರು ಚರ್ಚೆ ಮಾಡುತ್ತಿದ್ದಾರೆ. ಇನ್ನು ಕನ್ಯಾಕುಮಾರಿಯಿಂದ ಸೆ.7ರಂದು ಭಾರತ್ ಜೋಡೋ ಕಾರ್ಯಕ್ರಮ ಆರಂಭವಾಗಲಿದ್ದು, ಕಾಶ್ಮೀರದವರೆಗೆ ನಮ್ಮ ನಾಯಕ ರಾಹುಲ್ ಗಾಂಧಿ ಅವರು 3500 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ. ಸೆ.27ರ ನಂತರ ರಾಜ್ಯದಲ್ಲಿ 21ದಿನಗಳ ಕಾಲ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಪ್ರವಾಸ ಮಾಡಲಿದ್ದಾರೆ. ಗುಂಡ್ಲುಪೇಟೆಯಿಂದ ರಾಯಚೂರಿನವರೆಗೂ ಎಲ್ಲೆಡೆ ಪ್ರಚಾರ ಮಾಡಲಾಗುವುದು. ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಸಮಾವೇಶ ಮಾಡುವ ಬಗ್ಗೆ ಇನ್ನು ಚರ್ಚೆ ಆಗಿಲ್ಲ. ಬಳ್ಳಾರಿಯಲ್ಲಿ ಒಂದು ಸಾರ್ವಜನಿಕ ಸಭೆ ಮಾಡುವ ಆಲೋಚನೆ ಇದೆ. 'ನಮ್ಮ ಆಂತರಿಕ ಸಮೀಕ್ಷೆ ಪ್ರಕಾರ ನಮಗೆ ಈಗಾಗಲೇ 136 ಸ್ಥಾನಗಳು ಸಿಗಲಿವೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು 150 ಸ್ಥಾನಗಳ ಗುರಿ ನೀಡಿದ್ದು, ಮೊದಲ ಹಂತದ ಸಮೀಕ್ಷೆಯಲ್ಲಿ ನಾವು 136ರಷ್ಟು ತಲುಪಿದ್ದೇವೆ' ಎಂದು ಸಲೀಂ ಅಹ್ಮದ್ ಉತ್ತರಿಸಿದರು.