Marks Cards Racket in Bengaluru : ಬೆಂಗಳೂರಲ್ಲಿ ಅಂಕಪಟ್ಟಿ ದಂಧೆ, ನಾಲ್ವರ ಬಂಧನ: CCB
ಬೆಂಗಳೂರು, ಡಿಸೆಂಬರ್ 07: ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್) ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರ ಸೇರಿದಂತೆ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಐ) ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಎಂಜಿನಿಯರಿಂಗ್ ಮತ್ತು ಪಿಎಚ್ಡಿ ಸೇರಿದಂತೆ ದೇಶದ ವಿವಿಧ 12ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ಅಂಕಪಟ್ಟಿ ದಾಖಲೆಗಳು ಆರೋಪಿಗಳ ಬಳಿ ಇದ್ದವು. ಒಟ್ಟು 700 ಅಂಕಪಟ್ಟಿ ಮತ್ತು ಎಸ್ಎಸ್ಎಲ್ಸಿ, ಪಿಯುಸಿ ಜೊತೆಗೆ ಬಿಕಾಂ, ಬಿಬಿಎ, ಬಿಎಎಸ್ಸಿ ಸೇರಿದಂತೆ ವಿವಿಧ ಪದವಿಗಳ ಒಟ್ಟು ಸುಮಾರು 1,100 ದಾಖಲೆಗಳನ್ನು ಪೊಲೀಸು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಮಹಾಲಕ್ಷ್ಮಿಪುರಂನ ಶ್ರೀ ವೆಂಕಟೇಶ್ವರ ಇನ್ಸ್ಟಿಟ್ಯೂಟ್, ಮಾರತ್ತಹಳ್ಳಿ ಮತ್ತು ಕೊಡಿಗೇಹಳ್ಳಿಯ ಮೂರು ಸ್ಥಳಗಳಲ್ಲಿ ಸೋಮವಾರ ತಡರಾತ್ರಿ ಪೊಲೀಸರು ದಾಳಿ ನಡೆಸಿದ ಬಳಿಕ ಈ ಅಂಕಪಟ್ಟಿ ದಂಧೆ ಬೆಳಕಿಗೆ ಬಂದಿದೆ.
ಒಂದು ಮಾಹಿತಿಯ ಪ್ರಕಾರ, ಪಿಎಎಚ್ಡಿ ಪ್ರಮಾಣಪತ್ರದ ಬೆಲೆ 1 ಲಕ್ಷದಿಂದ 25 ಲಕ್ಷದವರೆಗೆ ನಿಗದಿಯಾಗಿರುತ್ತದೆ. ಅದೇ ರೀತಿ ದಂಧೆಕೋರರು ನಕಲಿ ಅಂಕಪಟ್ಟಿ ನೀಡಿ ಹಣ ಮಾಡುತ್ತಿದ್ದರು. ಆದರೆ ಈ ದಂಧೆಯಡಿ ಆರೋಪಿಗಳಿಂದ ಅಂಕಪಟ್ಟಿ ಮತ್ತು ದಾಖಲೆಗಳನ್ನು ಪಡೆದ ವಿದ್ಯಾರ್ಥಿಗಳ ಎಷ್ಟು ಎಂಬ ಸಂಖ್ಯೆ ಬಗ್ಗೆ ಮಾಹಿತಿ ಲಭಿಸಿಲ್ಲ ಎಂದು ನಗರ ಪೊಲೀಸ್ ಮುಖ್ಯಸ್ಥ ಸಿ.ಎಚ್. ಪ್ರತಾಪ್ ರೆಡ್ಡಿ ತಿಳಿಸಿದರು.
ಪದವಿ ಅಂಕಪಟ್ಟಿಗಳು, ಪಿಎಚ್ಡಿ ಪ್ರಮಾಣಪತ್ರಗಳನ್ನು ಆರೋಪಿಗಳು ಅಧಿಕ ಬೆಲೆಗೆ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಒಂದು ಅಂಕಪಟ್ಟಿ, ಇನ್ನಿತರ ಶೈಕ್ಷಣಿಕ ದಾಖಲೆಗಳಿಗೆ ಆರೋಪಿಗಳು ಎಷ್ಟೇಷ್ಟು ಹಣ ವಿಧಿಸುತ್ತಿರುದ್ದರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ನವೆಂಬರ್ ಕೊನೆಯ ವಾರದಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ದೂರುದಾರರು ನವೆಂಬರ್ 2 ರಂದು ಶ್ರೀ ವೆಂಕಟೇಶ್ವರ ಸಂಸ್ಥೆಯ ಮಹಾಲಕ್ಷ್ಮಿಪುರಂ ಶಾಖೆಗೆ ಭೇಟಿ ನೀಡಿದ್ದರು. ಪತ್ರ ವ್ಯವಹಾರದ ಮೂಲಕ ವಾಣಿಜ್ಯ ಪದವಿ ಪಡೆಯಲು ಬಯಸುವುದಾಗಿ ಹೇಳಿದರು.
ವಾಣಿಜ್ಯ ಪದವಿ ಅಂಕಪಟ್ಟಿಗೆ 1ಲಕ್ಷ ರೂ.ಬೇಡಿಕೆ
ರಿಸೆಪ್ಷನ್ ಕೌಂಟರ್ನಲ್ಲಿದ್ದ ಮಹಿಳೆ 1 ಲಕ್ಷ ರೂಪಾಯಿಗೆ ವಾಣಿಜ್ಯ ಪದವಿ ನೀಡುವುದಾಗಿ ತಿಳಿಸಿದ್ದರು. ಇದಕ್ಕಾಗಿ ಮೊದಲು ತಾವು ಮುಂಗಡವಾಗಿ 40 ಸಾವಿರ ರೂ. ನೀಡಬೇಕು ಎಂದು ತಿಳಿಸಿದರು. ದೂರುದಾರರು ಪರೀಕ್ಷೆ ಯಾವ ದಿನಾಂಕದಂದು ನಡೆಯತ್ತದೆ ಎಂದು ಮರು ಪ್ರಶ್ನಿಸಿದರು. ಅದಕ್ಕೆ ಆ ಮಹಿಳೆ ಪರೀಕ್ಷೆಗೆ ಹಾಜರಾಗದೆ ಅಂಕ ಪಟ್ಟಿಗಳನ್ನು ಪಡೆಯಬಹುದು ಎಂದು ತಿಳಿಸಿದಳು. ಅದರಂತೆ ದೂರುದಾರರಿಗೆ ನವೆಂಬರ್ 26ರಂದು ಬಿಕಾಂ ಪದವಿಯ ಮೊದಲ ಮತ್ತು ಎರಡನೇ ವರ್ಷ ಅಂಕಪಟ್ಟಿಗಳನ್ನು ಕಳುಹಿಸಿದ್ದರು. ಮೂರನೇ ವರ್ಷದ ಅಂಕಪಟ್ಟಿಗೆ ಬಾಕಿ ಹಣ ನೀಡುವಂತೆ ರಿಜಿಸ್ಟ್ರರ್ ಕೇಳಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ (ಸಿಸಿಬಿ) ಎಸ್ಡಿ ಶರಣಪ್ಪ ವಿವರಿಸಿದರು.
ಬಂಧಿತ ಆರೋಪಿಗಳಾದ ಮಹಾಲಕ್ಷ್ಮೀಪುರಂ ನಿವಾಸಿ ಕಿಶೋರ್ (37), ಕಾಮಾಕ್ಷಿಪಾಳ್ಯ ನಿವಾಸಿ ಆರ್.ರಾಜಣ್ಣ (46), ಕೊಡಿಗೇಹಳ್ಳಿಯವರಾದ ಶಿಲ್ಪಾ (30) ಮತ್ತು ಶಾರದ (29)ರನ್ನು 14 ದಿನಗಳ ಕಾಲ ವಿಚಾರಣೆ ಸಂಬಂಧ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.