ಗೋವಾ ಮುಖ್ಯಮಂತ್ರಿ, ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇಕೆ? ಇಲ್ಲಿದೆ ಉತ್ತರ
ಬೆಂಗಳೂರು, ಡಿಸೆಂಬರ್ 29: ಉತ್ತರ ಕರ್ನಾಟಕದಿಂದ ನಗರಕ್ಕೆ ಬಂದಿರುವ ರೈತರು ಬಿಜೆಪಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮಹದಾಯಿ ಸಲುವಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ, ಚಿತ್ರ ನಟರು ಒಬ್ಬೊಬ್ಬರಾಗಿ ಹೋರಾಟಕ್ಕೆ ಧುಮುಕುತ್ತಿದ್ದಾರೆ. ತಣ್ಣಗಿದ್ದ ಉತ್ತರ ಕರ್ನಾಟಕ ಮತ್ತೆ ಮಹದಾಯಿ ಬೆಂಕಿ ಹೊತ್ತಿ ಉರಿಯಲು ಮೂಲ ಕಾರಣ ಆ ಒಂದು ಪತ್ರ.
ಹೌದು, ಪರಿಕ್ಕರ್ ಅವರು ಯಡಿಯೂರಪ್ಪ ಅವರಿಗೆ ಪತ್ರ ಬರೆಯದೇ ಇದ್ದಿದ್ದರೆ ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲವೇನೊ, ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ಜನತೆಗೆ ಆಸೆ ತೋರಿಸಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬರ್ಥದ ಮಾತುಗಳು ಉತ್ತರ ಕರ್ನಾಟಕ ಭಾಗದಲ್ಲಿ ಕೇಳಿಬರುತ್ತಿವೆ.
ಅಕಸ್ಮಾತ್ ಮನೋಹರ ಪರಿಕ್ಕರ್ ಅವರು ಯಡಿಯೂರಪ್ಪ ಅವರ ಬದಲಿಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೆ ಸನ್ನಿವೇಶ ಬೇರೆ ರೀತಿ ಇರುತ್ತಿತ್ತೇನೊ, ಆದರೆ ಅವರೇಕೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯದೇ ತಮ್ಮದೇ ಪಕ್ಷದ ಮುಖಂಡರಿಗೆ ಬರೆದರು. ಈ ಕುರಿತು ಅವರೇ ಉತ್ತರಿಸಿದ್ದಾರೆ. ಏನೆಂದು ತಿಳಿಯಲು ಮುಂದೆ ಓದಿರಿ....

ಯಡಿಯೂರಪ್ಪ ಮೇಲೆ ವಿಶ್ವಾಸವಿದೆ
ಸಚಿವ ಸಭೆಯಲ್ಲಿ ಎದುರಾದ ಈ ಪ್ರಶ್ನೆಗೆ ಉತ್ತರಿಸಿರುವ ಮನೋಹರ ಪರಿಕ್ಕರ್ ಅವರು 'ಕರ್ನಾಟಕದ ಆಡಳಿತ ವಹಿಸಿರುವವರ ಮೇಲೆ ನಂಬಿಕೆ ಇಲ್ಲದ ಕಾರಣ ಯಡಿಯೂರಪ್ಪ ಅವರಿಗೆ ಪತ್ರ ಬರೆದೆ ಅವರ ಬಗ್ಗೆ ನನಗೆ ನಂಬಿಕೆ ಇದೆ' ಎಂದಿದ್ದಾರೆ.

ಬೇಕಿದ್ದರೆ ಯಡಿಯೂರಪ್ಪ ಅವರನ್ನು ಕೇಳಿ
'ನನಗೆ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿದೆ ಹಾಗಾಗಿ ಮಹದಾಯಿ ಕುರಿತು ಮಾತುಕತೆಗೆ ಸಿದ್ದವಿರುವುದಾಗಿ ಯಡಿಯೂರಪ್ಪ ಅವರಿಗೆ ಪತ್ರ ಬರೆದೆ' ಎಂದು ಅವರು ಉತ್ತರಿಸಿದ್ದಾರೆ. ಪತ್ರ ಬರೆಯುವ ಹಿಂದೆ ರಾಜಕೀಯ ಲಾಭದ ಉದ್ದೇಶವೂ ಇದೆ ಎಂಬ ದೂರಿಗೆ ಅವರು "ನಿಮಗೆ ಹಾಗೆ ಅನಿಸಿದಲ್ಲಿ ಅವರನ್ನೇ ಆ ಬಗ್ಗೆ ಕೇಳಿಕೊಳ್ಳಿ' ಎಂದು ಯಡಿಯೂರಪ್ಪ ಅವರ ಕಡೆ ಬೊಟ್ಟು ಮಾಡಿದ್ದಾರೆ ಪರಿಕ್ಕರ್.

ಹಿತ ಬಲಿ ಕೊಡುವ ಅಂಶ ಇಲ್ಲ
ತಾವು ಯಡಿಯೂರಪ್ಪ ಅವರಿಗೆ ಪತ್ರ ಬರೆದುದನ್ನು ಸಮರ್ಥಿಸಿಕೊಂಡಿರುವ ಪರಿಕ್ಕರ್ ಅವರು 'ನನ್ನ ಪತ್ರ ಸಂಪೂರ್ಣ ಕಾನೂನಾತ್ಮಕವಾಗಿಯೇ ಇದೆ, ಪತ್ರ ಬರೆಯುವ ಮೂಲಕ ಯಾವ ಕಾನೂನಿನ ಉಲ್ಲಂಘನೆಯನ್ನೂ ನಾನು ಮಾಡಿಲ್ಲ, ಗೋವಾ ಜನರ ಹಿತ ಬಲಿ ಕೊಡುವ ಯಾವ ಅಂಶಗಳೂ ಪತ್ರದಲ್ಲಿ ಇಲ್ಲ' ಎಂದಿದ್ದಾರೆ. 'ಪತ್ರದಲ್ಲಿ ಬರೆದಿರುವ ಎಲ್ಲ ಅಂಶಗಳೂ ಗೋವಾ ಸರ್ಕಾರ ಟ್ರಿಬ್ಯುನಲ್ ನಲ್ಲಿ ಯಾವ ನಿಲುವು ತಳೆದಿದಿಯೊ ಅದಕ್ಕೆ ಬದ್ಧವಾಗಿಯೇ ಇದೆ' ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್, ಎಎಪಿ ಜೊತೆ
ಮನೋಹರ ಪರಿಕ್ಕರ್ ಅವರು ಯಡಿಯೂರಪ್ಪ ಅವರಿಗೆ ಬರೆದ ಪತ್ರವನ್ನು 'ರಾಜಕೀಯ ಲಾಭ'ಕ್ಕಾಗಿ ಬರೆದ ಪತ್ರ ಎಂದು ಎಎಪಿ ಮತ್ತು ಗೋವಾ ಕಾಂಗ್ರೆಸ್ ದೂರಿದೆ. ಗೋವಾ ಬಿಜೆಪಿಯ ಮಿತ್ರ ಪಕ್ಷ ಗೋವಾ ಫಾರ್ವರ್ಡ್ ಪಾರ್ಟಿ ಸದಸ್ಯರೂ ಕೂಡ ಪರಿಕ್ಕರ್ ಅವರು ಸಚಿವ ಸಂಪುಟದ ಗಮನಕ್ಕೆ ತರದೆ ಮಹದಾಯಿ ವಿಚಾರವಾಗಿ ಪತ್ರ ಬರೆದಿರುವುದಕ್ಕೆ ತೀರ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications