ಕಸ ಕಿತ್ತಾಟ: ಸಿಎಂ ಸಿದ್ದರಾಮಯ್ಯ ಸಂಧಾನ ಸಭೆ ವಿಫಲ
ಬೆಂಗಳೂರು, ಜೂ.14: ಮಂಡೂರಿನ ಕಸದ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆ ಯಾವುದೇ ತೀರ್ಮಾನಕ್ಕೆ ಬಾರದೇ ವಿಫಲವಾಗಿದೆ.
ಕಸ ಹಾಕಲು ಇನ್ನೂ ಆರು ತಿಂಗಳು ಕಾಲಾವಕಾಶ ಕೊಡಬೇಕು ಎಂದು ಮುಖ್ಯಮಂತ್ರಿ ಅವರು ಕೇಳಿದರೆ, ಶನಿವಾರದಿಂದಲೇ ಕಸ ಸುರಿಯಬಾರದು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಈ ನಡುವೆ ಕೆಲ ಗ್ರಾಮಸ್ಥರು ಘಟಕ ಸ್ಥಗಿತಗೊಳಿಸುವುದಾಗಿ ಮುಚ್ಚಳಿಕೆ ನೀಡಿದರಷ್ಟೇ ಮೂರು ತಿಂಗಳ ಕಾಲಾವಕಾಶ ನೀಡುವುದಾಗಿ ಹೇಳಿದ್ದಾರೆ.
ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಬಿಬಿಎಂಪಿಯು ಈ ಹಿಂದೆ ಒಂದು ವರ್ಷ ಕಾಲಾವಕಾಶ ಕೋರಿತ್ತು. ಆ ಸಂದರ್ಭದಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದರೆ ಈ ಸಮಸ್ಯೆ ತಲೆದೋರುತ್ತಿರಲಿಲ್ಲ. ಈಗಾಗಲೇ ನಾಲ್ಕು ಕಡೆ ಕಸ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ನಮ್ಮ ಸರ್ಕಾರ ಮಂಜೂರಾತಿ ನೀಡಿದೆ. ಘಟಕಗಳ ಸ್ಥಾಪನೆ ಪ್ರಕ್ರಿಯೆಯೂ ಆರಂಭವಾಗಿದೆ. ತ್ಯಾಜ್ಯ ಸಂಸ್ಕರಣೆ ಆರಂಭವಾಗಲು ಆರು ತಿಂಗಳ ಕಾಲಾವಕಾಶ ಅಗತ್ಯವಿದೆ ಎಂದರು.[ಮಂಡೂರು ಕಸ: ಅನಾರೋಗ್ಯಕ್ಕೆ ಮಹಿಳೆ ಬಲಿ]

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮುಖ್ಯಮಂತ್ರಿಗಳು ಸದ್ಯದಲ್ಲೇ ಮಂಡೂರಿಗೆ ಭೇಟಿ ನೀಡಲಿದ್ದಾರೆ. ನಾಲ್ಕು ಯೋಜನೆಗಳ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಲಾಗಿದ್ದು, ಜನವಸತಿಯಿಲ್ಲದ ಪ್ರದೇಶಗಳಲ್ಲಿ ಹೊಸ ಘಟಕಗಳನ್ನು ನಿರ್ಮಿಸುವಂತೆ ಸಿಎಂ ಸೂಚಿಸಿದ್ದಾರೆ. ಹೊಸ ಘಟಕ ಆರಂಭವಾಗುವವರೆಗೆ ಕಸ ಸಾಗಿಸಲು ಆರು ತಿಂಗಳ ಕಾಲಾವಕಾಶ ಕೋರಲಾಗಿದೆ. ಸಭೆಯಲ್ಲಿದ್ದ ಕೆಲವರು ಮೂರು ತಿಂಗಳು ಕಾಲಾವಕಾಶ ನೀಡಲು ಒಲವು ತೋರಿದ್ದಾರೆ ಎಂದು ಹೇಳಿದರು.
ಇನ್ನೊಂದು ಸಭೆ:
ಮೂರು ತಿಂಗಳ ಕಾಲಾವಕಾಶದ ಬಗ್ಗೆ ಮಂಡೂರಿನ ಕೆಲ ಜನರು ಮಾತ್ರ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಗ್ರಾಮದ ಎಲ್ಲಾ ಜನರೊಂದಿಗೆ ಶನಿವಾರ ಸಭೆ ನಡೆಸಿ ನಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಹೀಗಾಗಿ ಶನಿವಾರ ಅಥವಾ ಭಾನುವಾರ ಇನ್ನೊಂದು ಸಭೆ ನಡೆಯಲಿದ್ದು ಆ ಸಭೆಯಲ್ಲಿ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆಯಿದೆ.












Click it and Unblock the Notifications