ಬೆಂಗಳೂರು; ವಿಜಯ ಕಾಲೇಜು ಮಹಿಳಾ ಶೌಚಾಲಯಕ್ಕೆ ನುಗ್ಗಿದ್ದವ ಬಂಧನ
ಬೆಂಗಳೂರು, ಜನವರಿ 23; ಬೆಂಗಳೂರು ನಗರದ ಜಯನಗರದಲ್ಲಿರುವ ವಿಜಯ ಕಾಲೇಜಿನ ಮಹಿಳಾ ಶೌಚಾಲಯಕ್ಕೆ ನುಗ್ಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು.
ಬಂಧಿತ ಆರೋಪಿಯನ್ನು ಅಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಜನವರಿ 10ರಂದು ಬೆಳಗ್ಗೆ 8 ಗಂಟೆಗೆ ಆರೋಪಿ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ನುಗ್ಗಿದ್ದ. ಘಟನೆ ನಡೆದ 13 ದಿನಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದಾಗ ಆರೋಪಿ ಅಜಯ್ ಕುಮಾರ್ ಶೌಚಾಲಯದೊಳಗೆ ನುಗ್ಗಿದ್ದ. ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ್ದ. ವಿದ್ಯಾರ್ಥಿನಿ ಕಿರುಚಿದಾಗ ಆಕೆಯನ್ನು ಟಾಯ್ಲೆಟ್ನಲ್ಲಿ ಕೂಡಿಹಾಕಿ ಪರಾರಿಯಾಗಿದ್ದ.

ಈ ಘಟನೆ ಕಾಲೇಜು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿತ್ತು. ವಿಜಯ ಕಾಲೇಜು ಆಡಳಿತ ಮಂಡಳಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಜಯನಗರ ಪೊಲೀಸರಿಗೆ ದೂರು ನೀಡಿತ್ತು. ವಿದ್ಯಾರ್ಥಿಗಳು ಸಹ ಆರೋಪಿ ಬಂಧಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಶಾಸಕರ ಭೇಟಿ; ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಸಹ ಕಾಲೇಜಿಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಪೊಲೀಸರು, ಕಾಲೇಜಿನ ಆಡಳಿತ ಮಂಡಳಿ ಜೊತೆ ಮಾತುಕತೆ ಮಾಡಿದ್ದರು.

ತಮ್ಮ ಫೇಸ್ ಬುಕ್ ಪೋಸ್ಟ್ನಲ್ಲಿ ಶಾಸಕಿ, 'ಜಯನಗರದ ವಿಜಯ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ನುಗ್ಗಿ ಲಾಕ್ ಹಾಕಿ ವಿದ್ಯಾರ್ಥಿನಿಯರನ್ನು ಬೆದರಿಸಿ ನಂತರ ತಪ್ಪಿಸಿಕೊಂಡು ಹೋಗಿರುವ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದು, ಇಂದು ಮತ್ತೆ ನಾನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಜಿ.ವಿ ವಿಶ್ವನಾಥ್, ಕಾರ್ಯದರ್ಶಿ ಶ್ರೀ ಎನ್.ಬಿ ಭಟ್, ಶ್ರೀ ಆತ್ರೆಯ, ಪೊಲೀಸ್ ಅಧಿಕಾರಿಗಳು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದ ಜೊತೆ ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದೆ' ಎಂದು ಹೇಳಿದ್ದರು.
'ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸುವ ಪ್ರತಿಯೊಬ್ಬರ ಗುರುತಿನ ಚೀಟಿಯನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸುವ ಅವಶ್ಯಕತೆಯಿದೆ. ನಮ್ಮ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯನ್ನು ಕಾಲೇಜುಗಳು ಗಂಭೀರವಾಗಿ ಪರಿಗಣಿಸಿ ಇಂತಹ ಘಟನೆಗಳು ನಡೆಯದಂತೆ ಜಾಗೃತಿವಹಿಸಬೇಕು' ಎಂದು ಪೋಸ್ಟ್ ಹಾಕಿದ್ದರು.
ಮನವೊಲಿಸಿದ್ದ ಪೊಲೀಸರು; ಕಾಲೇಜಿನ ಮಹಿಳಾ ಶೌಚಾಲಯಕ್ಕೆ ನುಗ್ಗಿದ್ದ ಆರೋಪಿ ವಿದ್ಯಾರ್ಥಿಗಳು ಕೂಗುತ್ತಿದ್ದಂತೆ 4ನೇ ಮಹಡಿಯಿಂದ ಹಾರಿ ಪರಾರಿಯಾಗಿದ್ದ. ಆರೋಪಿ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು. ಆಗ ಪೊಲೀಸರು ವಿದ್ಯಾರ್ಥಿಗಳ ಮನವೊಲಿಕೆ ಮಾಡಿದ್ದರು.
ದೂರು ದಾಖಲಾದ ಬಳಿಕ ಪೊಲೀಸರು ತನಿಖೆ ಕೈಗೊಂಡಿದ್ದರು. ಹೊರಗಿನಿಂದ ಬಂದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆಯೇ? ಎಂದು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದರು. ಐಪಿಸಿ ಸೆಕ್ಷನ್ 354ರ ಅಡಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು.
ಬಂಧಿತ ಆರೋಪಿ ಅಜಯ್ ಕುಮಾರ್ (42) ಬೆಂಗಳೂರಿನ ಹನುಮಂತ ನಗರ ಸಮೀಪದ ಸುಂಕೇನಹಳ್ಳಿಯ ನಿವಾಸಿ. ಪೊಲೀಸರು ಆರೋಪಿಯನ್ನು ಸೋಮವಾರ ಸಂಜೆ 37ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಗೃಹ ಕಚೇರಿಗೆ ಹಾಜರುಪಡಿಸಿದ್ದರು. ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ್ ಮಾರ್ಗದರ್ಶನದಲ್ಲಿ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನು ಒಳಗೊಂಡ ತಂಡ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications