ನಕಲಿ ವೆಬ್ಸೈಟ್ ಸೃಷ್ಟಿಸಿ ವಂಚನೆ, ಯುವಕನ ಬಂಧನ
ಬೆಂಗಳೂರು, ಮಾರ್ಚ್ 24 : ಕರ್ನಾಟಕ ರಾಜ್ಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆ (ಕೆಎಸ್ಇಸಿಎಸ್) ಹೆಸರಿನಲ್ಲಿ ನಕಲಿ ವೆಬ್ಸೈಟ್ ಆರಂಭಿಸಿ, ಸುಳ್ಳು ಉದ್ಯೋಗ ಅಧಿಸೂಚನೆ ಹೊರಡಿಸಿದ್ದ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೆಂಗೇರಿ ಸಮೀಪದ ರಾಯಸಂದ್ರದ ನಿವಾಸಿ ಎ.ಅರ್ಜುನ್ (24) ಎಂದು ಗುರುತಿಸಲಾಗಿದೆ. ಪಿಯುಸಿ ಮುಗಿಸಿದ್ದ ಅರ್ಜುನ್ ಸುಲಭವಾಗಿ ಹಣಗಳಿಸಲು ನಕಲಿ ವೆಬ್ಸೈಟ್ ಆರಂಭಿಸಿ ನೂರಾರು ಜನರನ್ನು ವಂಚಿಸಿದ್ದ. ಈಗ ಸಿಐಡಿ ಸೈಬರ್ ವಿಭಾಗದ ಪೊಲೀಸರಿಗೆ ಸಿಕ್ಕಿಬಿದ್ದು, ಜೈಲು ಸೇರಿದ್ದಾನೆ. [162 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC]

ನಕಲಿ ವೆಬ್ಸೈಟ್, ನಕಲಿ ಅಧಿಸೂಚನೆ : ಪಿಯುಸಿ ಮುಗಿದ ಬಳಿಕ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದ ಈತ, ಅಲ್ಲಿನ ನೇಮಕಾತಿ ಆದೇಶವನ್ನು ತಪ್ಪದೇ ಓದುತ್ತಿದ್ದ. ನಂತರ ಸುಲಭವಾಗಿ ಹಣಗಳಿಸಲು 'ಕರ್ನಾಟಕ ರಾಜ್ಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆ' ಹೆಸರಿನಲ್ಲಿ www.ksecsorg.in ವೆಬ್ಸೈಟ್ ತೆರೆದಿದ್ದ. [KPSC ಗ್ರೂಪ್ 'ಸಿ' ನೇಮಕಾತಿ ಅಧಿಸೂಚನೆ]
ಪ್ರಥಮ ದರ್ಜೆ ಸಹಾಯಕರು 180, ದ್ವಿತೀಯ ದರ್ಜೆ ಸಹಾಯಕರು 220, ಸಹಾಯಕ ಲೆಕ್ಕಿಗರು 580, ಕಂಪ್ಯೂಟರ್ ಆಪರೇಟರ್ 140, ವಾಹನ ಚಾಲಕರ 60 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 4, 2016 ಎಂದು ನಕಲಿ ಅಧಿಸೂಚನೆ ಹೊರಡಿಸಿದ್ದ.
ಅಧಿಸೂಚನೆಯಲ್ಲಿ ಆನ್ಲೈನ್ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಿದ ಬಳಿಕ ಅಭ್ಯರ್ಥಿಗಳು ಸ್ವೀಕೃತಿ ಪತ್ರ ಮತ್ತು ದ್ವಿಪ್ರತಿ ಚಲನ್ ಅನ್ನು ಪಡೆದುಕೊಂಡು, ಅರ್ಜಿ ಶುಲ್ಕವನ್ನು ಇ-ಪೇಮೆಂಟ್ ಸೌಲಭ್ಯವಿರುವ ರಾಜ್ಯದ ಯಾವುದೇ ಅಂಚೆ ಕಚೇರಿಯಲ್ಲಿ ಏಪ್ರಿಲ್ 5, 2016ರೊಳಗೆ ಪಾವತಿ ಮಾಡಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಿದ್ದ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1, ಅಂಗವಿಕಲರು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250 ರೂ, 2ಎ/2ಬಿ/3ಎ/3ಬಿ/ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿ ಮಾಡಿದ್ದ.
ಕೆಎಸ್ಇಸಿಎಸ್ ಹೆಸರಿನಲ್ಲಿ ವಿಶ್ವೇಶ್ವರಯ್ಯ ಬಡಾವಣೆ ಎಸ್ಬಿಐ ಬ್ಯಾಂಕ್ನಲ್ಲಿ ಚಾಲ್ತಿ ಖಾತೆ ತೆರದಿದ್ದ. ಅಂಚೆ ಕಚೇರಿಯಲ್ಲಿ 33 ಲಕ್ಷ ಅರ್ಜಿ ಶುಲ್ಕ ಸಂಗ್ರಹವಾಗಿದ್ದು, ಕೆಲವು ದಿನಗಳಲ್ಲಿ ಈ ಹಣ ಆರೋಪಿಯ ಖಾತೆಗೆ ವರ್ಗಾವಣೆಯಾಗುತ್ತಿತ್ತು.
ಸಿಕ್ಕಿಬಿದ್ದದ್ದು ಹೇಗೆ ? : ಈ ಅಧಿಸೂಚನೆ ಪ್ರಕಟಗೊಂಡು 2 ತಿಂಗಳು ಕಳೆದರೂ ಯಾವುದೇ ನೇಮಕಾತಿ ಆಗಿರಲಿಲ್ಲ. ಇದರಿಂದ ಅನುಮಾನಗೊಂಡ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾಧ್ಯಮಗಳಿಗೆ ವಿಷಯ ತಿಳಿಸಿದ್ದರು. ವಿಜಯವಾಣಿ ಪತ್ರಿಕೆಯ ಸಂಪಾದಕರಾದ ಹರಿಪ್ರಕಾಶ್ ಮತ್ತು ವರದಿಗಾರ ನಾರಾಯಣ್ ಅವರು ಸಿಐಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಮಾಹಿತಿ ಆಧರಿಸಿ ಸಿಐಡಿ ಇನ್ಸ್ಪೆಕ್ಟರ್ ಸೈಯದ್ ತಬ್ರೇಜ್ ಸಿಐಡಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ಸಿಐಡಿ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸ್ಪಷ್ಟೀಕರಣ : ಒನ್ಇಂಡಿಯಾ ಕನ್ನಡದಲ್ಲಿಯೂ 'ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಎಸ್ಇಸಿಎಸ್' ಎಂಬ ಉದ್ಯೋಗ ಮಾಹಿತಿ ಪ್ರಕಟವಾಗಿದೆ. ಇದನ್ನು ನೋಡಿ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಾರದು ಎಂದು ಒನ್ಇಂಡಿಯಾ ಕನ್ನಡ ಮನವಿ ಮಾಡುತ್ತದೆ. [ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ KSECS]












Click it and Unblock the Notifications