ಬೆಂಗಳೂರು: ಫೇಸ್ಬುಕ್ ಪ್ರೇಮ-ಕಾಮಕ್ಕೆ ಬಾಲಕಿ ಬಲಿ

ಜಸ್ಟ್ ಫೇಸ್ ಬುಕ್ ಮೂಲಕ ಪರಿಚಿತನಾಗಿದ್ದ ಬಿಕಾಂ ವಿದ್ಯಾರ್ಥಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿಬಿಟ್ಟಿದ್ದ. ಕೊನೆಗೆ ಅವನದ್ದು ಅಮರ ಪ್ರೇಮ ಅಲ್ಲ; ಕ್ಷಣಿಕ ಸುಖ-ದೋಖಾ ಎಂಬುದು ಅರಿವಿಗೆ ಬಂದು ಇನ್ನೂ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಬೋಧ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಮರಳಿ ಬಾರದ ಲೋಕಕ್ಕೆ ಜಾರಿಕೊಂಡಿದ್ದಾಳೆ. ಏನೇ ಆಗಲಿ, ಇಲ್ಲಿ ತಪ್ಪು ಯಾರದು ಎಂಬ ಪ್ರಶ್ನೆ ಗಾಢವಾಗಿ ಕಾಡುತ್ತದೆ.
ಮಹಾಲಕ್ಷ್ಮೀ ಲೇ ಔಟ್ ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಪ್ರಕರಣ ಹೀರೋ ಯಾನಿ ವಿಲನ್ ಯಲಹಂಕದಲ್ಲಿರುವ ಶೇಷಾದ್ರಿ ಪುರದ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿ ಎಂ ಮನೋಜ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಿಟ್ಲ್ ಲಿಲ್ಲಿ ಇಂಗ್ಲೀಷ್ ಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಇವನೇ ಕಾರಣ ಎಂಬ ಮಹತ್ವದ ಮಾಹಿತಿಯನ್ನೂ ಕೊನೆಗೆ ಅದೇ facebook ಒದಗಿಸಿದೆ!
'ಮೂಲತಃ ಚಿತ್ರದುರ್ಗದವನಾದ ಆರೋಪಿ, ನಂದಿನಿ ಲೇಔಟ್ ನಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ. ಫೇಸ್ ಬುಕ್ ನಲ್ಲಿ ನಮೂದಿಸಿರುವ ವಿಳಾಸವನ್ನು ಆಧರಿಸಿ ಮನೋಜ್ ನನ್ನು ಬಂಧಿಸಲಾಗಿದೆ' ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರು ತಿಳಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮೀಪದ 14 ವರ್ಷದ ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡವಳು. ಆಕೆಯ ತಂದೆ ನಗರದ ಕಾಲೇಜು ಒಂದರಲ್ಲಿ ಉಪನ್ಯಾಸಕ ರಾಗಿದ್ದಾರೆ. ತಾಯಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಹರ್ಷಿತಾ ಮಂಗಳವಾರ ಮಧ್ಯಾಹ್ನ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿ ಸಂಜೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ಮನೆ ಬಳಿಯೇ ಸಂಬಂಧಿಕರ ಮನೆಯೂ ಇದೆ. ತಮ್ಮನನ್ನು ಕರೆದುಕೊಂಡು ಸಂಬಂಧಿ ಮನೆಗೆ ಹೋಗಿದ್ದ ಹರ್ಷಿತಾ, ಮಧ್ಯಾಹ್ನ 3.15 ರವರೆಗೆ ಅಲ್ಲಿಯೇ ಇದ್ದಳು. ನಂತರ ತಮ್ಮನನ್ನು ಅಲ್ಲಿಯೇ ಬಿಟ್ಟು ಒಬ್ಬಳೇ ಮನೆಗೆ ಮರಳಿದ್ದಾಳೆ. ಪಕ್ಕದ ಮನೆಯವರ ಬಳಿ ಕೊಟ್ಟಿದ್ದ ಮನೆ ಕೀ ಪಡೆದ ಆಕೆ, ಒಳಗೆ ಹೋಗಿ ನೇಣಿಗೆ ಶರಣಾಗಿದ್ದಾಳೆ.
ಹರ್ಷಿತಾ ತಾಯಿ ಮನೆಗೆ ಬಂದಾಗ ಒಳಗಿನಿಂದ ಚಿಲಕ ಹಾಕಿತ್ತು. ಹಲವು ಬಾರಿ ಬಾಗಿಲು ಬಡಿದರೂ ಪ್ರತಿಕ್ರಿಯೆ ಇರಲಿಲ್ಲ. ಇದರಿಂದ ಗಾಬರಿಗೊಂಡ ಅವರು ಕೂಡಲೇ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪತಿ, ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳಗೆ ಹೋದಾಗ ಹರ್ಷಿತಾ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡಿರುವ ಸಂಗತಿ ಗೊತ್ತಾಗಿದೆ.
ಮೂರೂವರೆ ಪುಟದ ಸುದೀರ್ಘ ಪತ್ರ!: ಹರ್ಷಿತಾ, ಆತ್ಮ ಹತ್ಯೆಗೂ ಮುನ್ನ ಬರೆದಿರುವ ಪತ್ರ ಹಾಸಿಗೆ ಮೇಲೆ ಸಿಕ್ಕಿದೆ. ಅದರಲ್ಲಿ ಫೇಸ್ ಬುಕ್ ನಲ್ಲಿ ಪರಿಚಯವಾದ ಮನೋಜ್ ವಂಚಿಸಿದ್ದನ್ನು ವಿವರಿಸಿದ್ದಾಳೆ.
'2012 ಅಕ್ಟೋಬರ್ 29ರಂದು ನಾನು ಫೇಸ್ ಬುಕ್ ಖಾತೆಯನ್ನು ತೆರೆದೆ. ಅದರ ಬಳಕೆ ನಂತರ ಸಾಕಷ್ಟು ಮಂದಿ ಸ್ನೇಹಿತರಾದರು. ಸೆ. 18ರಂದು ಮನೋಜ್ ಕುಮಾರ್ 'ಫ್ರೆಂಡ್ ರಿಕ್ವೆಸ್ಟ್' ಕಳುಹಿಸಿದ್ದ. ನಂತರ ಇಬ್ಬರೂ ಫೇಸ್ ಬುಕ್ ನಲ್ಲಿಯೇ ಸಂಭಾಷಣೆ ನಡೆಸುತ್ತಿದ್ದೆವು. ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತು. ನಂತರ ಅ. 4ರಂದು ಆತ ನಂದಿನಿ ಲೇಔಟ್ ನಲ್ಲಿರುವ ತನ್ನ ಮನೆಗೆ ಆಹ್ವಾನಿಸಿದ. ಆ ದಿನ ಮನೆಗೆ ಹೋದಾಗ ಒಬ್ಬನೇ ಇದ್ದ ಮನೋಜ್, ನನ್ನ ಮೇಲೆ ಅತ್ಯಾಚಾರ ಎಸಗಿದ್ದ' ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿದ್ದಾಳೆ.
ಆ ಘಟನೆ ನಂತರ ಪರಸ್ಪರರ ನಡುವೆ ಮೂರ್ನಾಲ್ಕು ಬಾರಿ ದೈಹಿಕ ಸಂಪರ್ಕ ನಡೆಯಿತು. ಆದರೆ, ಇತ್ತೀಚೆಗೆ ಮನೋಜ್ ವರ್ತನೆಯಲ್ಲಿ ಬದಲಾವಣೆಯಾಗಿತ್ತು. 'ನಿನ್ನ ಗೆಳತಿಯರ ಮೊಬೈಲ್ ಸಂಖ್ಯೆಯನ್ನು ಕೊಡು. ಅವರೊಂದಿಗೆ ಮಾತನಾಡಬೇಕು' ಎಂದು ಪೀಡಿಸುತ್ತಿದ್ದ. ಅಲ್ಲದೇ, ನನ್ನೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದರ ಬಗ್ಗೆ ಕೇಳಿದಾಗ 'ಕೇವಲ ಮೋಜಿಗಾಗಿ (ಜಸ್ಟ್ ಫಾರ್ ಫನ್) ಎಂದು ಹೇಳಿದ್ದ. ಇದರಿಂದ ನನಗೆ ಸಾಕಷ್ಟು ನೋವಾಗಿದೆ. ಆತನಿಗೆ ಶಿಕ್ಷೆ ಆಗಬೇಕು ಎಂದು ಬರೆದಿಟ್ಟಿದ್ದಾಳೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.
'ನೀವು ತೋರಿಸಿದ ಹುಡುಗಿಯನ್ನೇ ಮದುವೆ ಯಾಗುತ್ತೇನೆ ಎಂದು ಪೋಷಕರ ಬಳಿ ಪ್ರಮಾಣ ಮಾಡಿದ್ದೇನೆ. ಹೀಗಾಗಿ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ' ಎಂದು ಕೊನೆಯ ಬಾರಿಗೆ ಸಂದೇಶ ಕಳುಹಿಸಿದ್ದ ಆತ, ನಂತರ ನನ್ನೊಂದಿಗೆ ಸರಿಯಾಗಿ ಮಾತನಾಡಲಿಲ್ಲ. ಫೇಸ್ ಬುಕ್ ನಲ್ಲಿ ಸಂದೇಶ ರವಾನಿಸಿದರೆ, ಅದಕ್ಕೂ ಪ್ರತಿಕ್ರಿಯಿಸುತ್ತಿರಲಿಲ್ಲ' ಎಂದು ಹರ್ಷಿತಾ ನೋವು ತೋಡಿಕೊಂಡಿದ್ದಾಳೆ.
'ಮಗಳ ಬಳಿ ಮೊಬೈಲ್ ಅಥವಾ ಕಂಪ್ಯೂಟರ್ ಇರಲಿಲ್ಲ. ಆಕೆ, ಸೈಬರ್ ಕೇಂದ್ರಕ್ಕೆ ತೆರಳಿ ಫೇಸ್ ಬುಕ್ ಬಳಸಿರಬಹುದು. ಕೆಲವು ಬಾರಿ ನನ್ನ ಮೊಬೈಲ್ ನಿಂದಲೇ ಆತನಿಗೆ ಕರೆ ಮಾಡಿದ್ದಳು. ಈ ವಿಷಯ ಗೊತ್ತಾಗಿ ನಾನು ಆಕೆಗೆ ಬೈಯ್ದಿದ್ದೆ. ಒಮ್ಮೆ ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹುಡುಗನಿಗೆ ಎಚ್ಚರಿಕೆಯನ್ನೂ ನೀಡಿದ್ದೆ' ಎಂದು ಹರ್ಷಿತಾ ತಾಯಿ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications