ಜ.11ರಿಂದ ಲಾರಿ ಮುಷ್ಕರ, ಅಗತ್ಯ ವಸ್ತುಗಳ ಬೆಲೆ ಏರಿಕೆ?
ಬೆಂಗಳೂರು. ಜ.4 : ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಮರಳು ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮರಳು ಲಾರಿ ಮಾಲೀಕರಿಗೆ, ಸರಕು ಸಾಗಣೆ ವಾಹನ ಮಾಲೀಕರು ಬೆಂಬಲ ಸೂಚಿಸಿದ್ದು,ಪ್ರತಿಭಟನೆ ತೀವ್ರಗೊಳಿಸಲು ಸಜ್ಜಾಗಿದ್ದಾರೆ. ಇದರಿಂದಾಗಿ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನ, ಹಾಲು, ಕಟ್ಟಡ ಸಾಮಗ್ರಿಗಳ ಸಾಗಣೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಸಭೆ ನಡೆಸಿದ ದಕ್ಷಿಣ ಭಾರತದ ಲಾರಿ ಮಾಲೀಕರ ಒಕ್ಕೂಟ, ಜ.11ರ ಮಧ್ಯರಾತ್ರಿಯಿಂದ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನ, ಹಾಲು, ಕಟ್ಟಡ ಸಾಮಗ್ರಿ ಸೇರಿದಂತೆ ಇನ್ನಿತರ ಸರಕು ಸಾಗಣೆಯನ್ನು ಸ್ಥಗಿತಗೊಳಿಸಿ, ಲಾರಿ ಮಾಲೀಕರೊಂದಿಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಆಂಧ್ರಪ್ರದೇಶ, ಕೇರಳ, ಪಾಂಡಿಚೇರಿ, ತಮಿಳುನಾಡಿನ ಲಾರಿ ಮಾಲೀಕರ ಸಂಘಗಳು ಸಭೆಯಲ್ಲಿ ಭಾಗವಹಿಸಿದ್ದು, ತಾವು ಸಹ ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಜ.11ರ ಮಧ್ಯರಾತ್ರಿಯಿಂದ ಹೊರ ರಾಜ್ಯದ ಲಾರಿಗಳು ಸರಕು ಸಾಗಣೆ ಹೊತ್ತು, ರಾಜ್ಯದೊಳಗೆ ಪ್ರವೇಶಿಸುವುದಿಲ್ಲ. [ಜ.6ರಂದು ಆಟೋ ಮುಷ್ಕರ ]
ಜ. 11ರ ಮಧ್ಯರಾತ್ರಿಯಿಂದ ಗ್ಯಾಸ್, ಹಾಲು, ಕಟ್ಟಡ ಸಾಮಗ್ರಿ ಸೇರಿದಂತೆ ಸರಕು ಸಾಗಣೆ ಸ್ಥಗಿತಗೊಳ್ಳಲಿದೆ. ಅವುಗಳೊಂದಿಗೆ ಪ್ರವಾಸಿ ವಾಹನ, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ, ಐಟಿ-ಬಿಟಿ ಕಂಪನಿಗಳಿಗೆ ಒಪ್ಪಂದದ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ವಾಹನಗಳು ಸ್ಥಗಿತಗೊಳ್ಳಲಿವೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. [ಅಕ್ರಮ ಮರಳು ಗಣಿಗಾರಿಕೆ ಮಾಡಿದರೆ ಜೈಲು!]
ಜ.11ರಿಂದ ಮುಷ್ಕರ ಆರಂಭಿಸಿದರೂ ಆ್ಯಂಬುಲೆನ್ಸ್, ಔಷಧ, ತರಕಾರಿ ಮತ್ತು ದಿನಪತ್ರಿಕೆಗಳ ಸಾಗಣೆ ವಾಹನಗಳು ಮಾತ್ರ ಕೆಲಸ ಮಾಡಲಿವೆ ಎಂದು ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಹೇಳಿದ್ದಾರೆ. ಒಂದು ವೇಳೆ ಸರ್ಕಾರ ಪ್ರತಿಭಟನಾನಿತರ ಲಾರಿ ಮಾಲೀಕರೊಂದಿಗೆ ಸಭೆ ನಡೆಸದಿದ್ದರೆ, ಮುಷ್ಕರ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುವುದು ಖಚಿತ.











Click it and Unblock the Notifications