ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಆರೋಗ್ಯದಲ್ಲಿ ಚೇತರಿಕೆ
ಬೆಂಗಳೂರು, ಮಾರ್ಚ್ 09: ತೇಜರಾಜ್ ಶರ್ಮಾ ಎಂಬಾತನಿಂದ ಚೂರಿ ಇರಿತಕ್ಕೆ ಒಳಗಾಗಿ ವಿಠಲ್ ಮಲ್ಯಾ ಆಸ್ಪತ್ರೆ ಸೇರಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡು ಬಂದಿದೆ.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಸಂಜೆ ವೇಳೆಗೆ ಸ್ವಲ್ಪ ಹುಷಾರಾಗಿದ್ದು, ಕೊಠಡಿಯಲ್ಲಿ ಸ್ವಲ್ಪ ಕಾಲ ನಡೆದಾಡಿದ್ದಾರೆ. ಜೊತೆಗೆ ಅವರ ಸಂಬಂಧಿಕರೊಂದಿಗೂ ಮಾತನಾಡಿದ್ದಾರೆ ಎಂದು ಅವರ ಚಿಕಿತ್ಸೆ ಹೊಣೆ ಹೊತ್ತಿರುವ ವಿಠಲ್ ಮಲ್ಯ ಆಸ್ಪತ್ರೆ ವೈದ್ಯ ದಿವಾಕರ್ ಭಟ್ ಹೇಳಿದ್ದಾರೆ.
ಸಂಪೂರ್ಣ ಚೇತರಿಕೆಗೆ ಇನ್ನಷ್ಟು ಕಾಲಾವಕಾಶದ ಅವಶ್ಯಕತೆ ಇದೆ ಎಂದ ವೈದ್ಯರು 'ಸದ್ಯಕ್ಕೆ ಅವರಿಗೆ ಯಾವುದೇ ಆಹಾರ ನೀಡುತ್ತಿಲ್ಲ. ಶಸ್ತ್ರಚಿಕಿತ್ಸೆ ಆಗಿ 48 ಗಂಟೆಗಳು ಕಳೆಯುವವರೆಗೂ ಆಹಾರ ನೀಡುವುದಿಲ್ಲ. ಅವರ ದೇಹಾರೋಗ್ಯದ ಸ್ಥಿತಿ ನೋಡಿಕೊಂಡು ಶುಕ್ರವಾರ ಅಥವಾ ಶನಿವಾರದಿಂದ ದ್ರವರೂಪದ ಆಹಾರ ನೀಡಲಾಗುವುದು' ಎಂದು ಮಾಹಿತಿ ನೀಡಿದರು.

ವಿಶ್ವನಾಥ ಶೆಟ್ಟಿ ಅವರ ಎದೆಗೆ ಮತ್ತು ಹೊಟ್ಟೆಗೆ ಚೂರಿ ಇರಿತದಿಂದ ಆಳ ಗಾಯವಾಗಿದ್ದು, ದೇಹದ ಮೇಲೆ ಒಟ್ಟು 11 ಕಡೆ ಗಾಯಗಳಾಗಿವೆ ಎಂದ ವೈದ್ಯ ದಿವಾಕರ್ ವಿಶ್ವನಾಥ್ ಅವರನ್ನು ಅರ್ಧ ತಾಸು ತಡವಾಗಿ ಆಸ್ಪತ್ರೆಗೆ ಕರೆತಂದಿದ್ದರೆ ಅವರ ಜೀವಕ್ಕೆ ಅಪಾಯವಿತ್ತು ಎಂದು ಹೇಳಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಅವರನ್ನು ಶಸ್ತ್ರ ಚಿಕಿತ್ಸೆಯ ನಂತರ ಇರಿಸಲಾಗಿರುವ ತೀವ್ರ ನಿಗಾ ಘಟಕದ ವಾರ್ಡ್ಗೆ ಬಿಗಿ ಭದ್ರತೆ ನೀಡಲಾಗಿದೆ.












Click it and Unblock the Notifications