ಕೋಮುವಾದಿಗಳಿಂದ ಬೆಂಗಳೂರನ್ನು ಉಳಿಸಿ : ಬಿಕೆ ಹರಿಪ್ರಸಾದ್
ಬೆಂಗಳೂರು, ಏಪ್ರಿಲ್ 16 2019: ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ದೊರೆಸಾನಿ ಪಾಳ್ಯದ ಚರ್ಚಿನಿಂದ ಪ್ರಾರಂಭವಾದ ಈ ರೋಡ್ ಶೋ ದಕ್ಷಿಣ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಂಚರಿಸಿತು.
ಈ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಬಿ ಕೆ ಹರಿಪ್ರಸಾದ್ ಅವರು, ದಕ್ಷಿಣ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ತಾವು ತಯಾರಿಸಿರುವ ಪ್ರಣಾಳಿಕೆಯನ್ನು ವಿವರಿಸಿದರು.
ಮೇಕೆದಾಟು ಹಾಗೂ ಎತ್ತಿನಹೊಳೆ ಯೋಜನೆಯ ಫಲದಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬೋಟಾನಿಕಲ್ ಗಾರ್ಡ್ನ್ ನಿರ್ಮಿಸುವುದು. ಹೊರವರ್ತುಲ ರಸ್ತೆಗೂ ಆಚೆಗೆ ಮೆಟ್ರೋ ರೈಲನ್ನು ವಿಸ್ತರಿಸುವುದು ಹಾಗೂ ಮೋನೋರೈಲ್ ಸೌಲಭ್ಯವನ್ನು ಅಳವಡಿಸುವುದು.

ವಿಶ್ವ ಗುಣಮಟ್ಟದ ಕನ್ವೆಕ್ಷನ್ ಸೆಂಟರ್ ನಿರ್ಮಾಣ. ಸ್ಯಾಂಕಿ ಕರೆಯ ರೀತಿಯಲ್ಲಿ ಕ್ಷೇತ್ರದ ಕೆರೆಗಳ ಅಭಿವೃದ್ದಿ. ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣ. ಚಿಕ್ಕ ರಸ್ತೆಗಳಲ್ಲಿ ಸಂಚಾರ ದಟ್ಟಣೆಗೆ ಮುಕ್ತಿನೀಡಲು ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣ. ಹೀಗೆ ಹತ್ತ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಬದ್ದನಾಗಿದ್ದೇನೆ.

ಕಳೆದ 5 ವರ್ಷಗಳಲ್ಲಿ ಯಾವುದೇ ಅಭಿವೃದ್ದಿ ಕ್ರಮಗಳನ್ನು ಕೈಗೊಳ್ಳದೆ ಕೇವಲ ಕೋಮುವಾದಕ್ಕೆ ಪುಷ್ಠಿ ನೀಡಿದ ಕೋಮುವಾದಿ ಪಕ್ಷವನ್ನು ತಿರಸ್ಕರಿಸಿ ಎಂದರು. ರೋಡ್ ಶೋ ನಲ್ಲಿ ಯು ಬಿ ವೆಂಕಟೇಶ್, ರಾಜ್ಯ ಸಭಾ ಸದಸ್ಯ ರಾಜೀವ್ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಅವರು ಇಂದು ವಿಜಯನಗರ, ಜಯನಗರ ಹಾಗೂ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರು.












Click it and Unblock the Notifications