ಪೊಲೀಸರ ಮುಂದೆ ಕಣ್ಣೀರು ಹಾಕಿದ ಹೂವು ಮತ್ತು ತರಕಾರಿ ವ್ಯಾಪಾರಿಗಳು
ಬೆಂಗಳೂರು, ಏಪ್ರಿಲ್ 28: ಕೊರೊನಾ ಲಾಕ್ ಡೌನ್ ನಿರ್ಬಂಧಗಳಿಂದ ಹೂವು ವ್ಯಾಪಾರಿಗಳ ಬದುಕು ಬಾಡಿ ಹೋಗುತ್ತಿದೆ. ಹಣ್ಣು ವ್ಯಾಪಾರಿಗಳ ಜೀವನ ಬೀದಿಯಲ್ಲಿ ಕೊಳೆಯುವಂತಾಗಿದೆ. ಹೂವು ಮತ್ತು ತರಕಾರಿ ಮಾರಿಕೊಂಡು ಸಾವಿರಾರು ಮಂದಿ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪುಟ್ಟದೊಂದು ಸ್ವಂತ ಬದುಕು ಕಟ್ಟಿಕೊಂಡವರು ಇದೀಗ ಪುಟ್ಪಾತ್ಗೆ ಬರುವಂತಾಗಿದೆ.
ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಹೂ ವ್ಯಾಪಾರಿಗಳ ಅಳಲು:
ಮಲ್ಲೇಶ್ವರಂ ಹೂ ಮಾರುಕಟ್ಟೆಗೆ ಕಾಲಿಟ್ಟರೆ ಸಾಕು ಅಲ್ಲಿ ಮಲ್ಲಿಗೆಯ ಘಮ, ಘಮ ವಾಸನೆ. ನೂರಾರು ಮಂದಿ ಹೂ ವ್ಯಾಪಾರದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಮಿಗಿಲಾಗಿ ಹೂ ವ್ಯಾಪಾರ ಆರಂಭವಾಗುವುದೇ ಬೆಳಗ್ಗೆ 9 ರಿಂದ. ಇನ್ನು ರಾತ್ರಿ ವೇಳೆಗೆ ಹೂವು ಮಾರಿ ಗಳಿಸಿದ ದುಡ್ಡಿನಲ್ಲಿ ಪುಟ್ಟ ಜೀವನ. ಇದೀಗ ಕರೋನಾ ನಿಯಮಗಳಿಂದ ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯೊಳಗೆ ಎಲ್ಲಾ ಹೂ ಮಳಿಗೆ ಲಾಕ್ ಮಾಡಬೇಕು.
ನಾಲ್ಕು ತಾಸಿನಲ್ಲಿ ಹೂವು ಕಟ್ಟಿ ವ್ಯಾಪಾರ ಅರಂಭ ಮಾಡುವುದರೊಳಗೆ ಬಾಗಿಲು ಮುಚ್ಚಬೇಕು. ಇದರಿಂದ ಖರೀದಿಸಿದ ಹೂವು ಬಾಡಿ ಹೋಗಿ ಬೀದಿಗೆ ಹಾಕಬೇಕು. ದುಬಾರಿ ಬೆಂಗಳೂರಿನಲ್ಲಿ ಜೀವನ ನಡೆಸಬೇಕಾದರೆ ಒಂದು ದಿನ ದುಡಿಮೆ ಕೂಡ ಕಡಿತ ಮಾಡುವಂತಿಲ್ಲ. ಪರಿಸ್ಥಿತಿ ಹೀಗಿರುವಾಗ ಇದೀಗ ಹದಿನೈದು ದಿನ ಏನು ಮಾಡುವುದು. ಕೊರೊನಾದಿಂದ ಬೇಕಾದರೂ ಸಾಯುತ್ತೀವಿ, ಹಸಿವಿನಿಂದ ಸಾಯುವಂತೆ ಮಾಡಬೇಡಿ ಎಂದು ಮಲ್ಲೇಶ್ವರಂ ಹೂ ಮಾರುಕಟ್ಟೆಯ ವ್ಯಾಪಾರಿಗಳು ಪೊಲೀಸರನ್ನು ಬೇಡಿಕೊಂಡರು. ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಸರ್ಕಾರ ರೂಪಿಸಿರುವ ನಿಯಮಗಳನ್ನು ಜಾರಿ ಮಾಡುವುದಷ್ಟೇ ನಮ್ಮ ಕೆಲಸ. ಹೀಗಾಗಿ ಅಂಗಡಿಗಳನ್ನು ಮುಚ್ಚಿ. ನಮ್ಮ ಕೈಯಲ್ಲಿ ಏನೂ ಇಲ್ಲವಲ್ಲ ಎಂದು ಪೊಲೀಸರು ಮನವರಿಕೆ ಮಾಡಿಕೊಟ್ಟರು. ಪುಟ್ಟ ಪುಟ್ಟ ಹೂ ವ್ಯಾಪಾರಿಗಳ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು. ಇದ್ದ ಹಣದಿಂದ ಹೂ ತಂದಿದ್ದವರು ಇದೀಗ ಬರಿಗೈಯಲ್ಲಿ ಜೀವನ ನಡೆಸುವ ಸ್ಥಿತಿ.

ಮಾರ್ಕೆಟ್ನಲ್ಲಿ ಮಾರ್ಷಲ್ಗಳ ದಾಳಿ:
ಕೆ.ಆರ್. ಮಾರ್ಕೆಟ್ ಸೇರಿದಂತೆ ನಗರದ ಸಣ್ಣ ಪುಟ್ಟ ತರಕಾರಿ ಮಾರುಕಟ್ಟೆಗಳಿಗೆ ಭೇಟಿ ನೀಡಿದ ಬಿಬಿಎಂಪಿ ಮಾರ್ಷಲ್ಗಳು ನಿಗದಿಯಂತೆ ಹತ್ತು ಗಂಟೆಗೆ ತರಕಾರಿ ಅಂಗಡಿ ಬಾಗಿಲು ಮುಚ್ಚಿಸಿದರು. ಕೆಲವರು ತಳ್ಳುವ ಗಾಡಿಗಳಲ್ಲಿ ತರಕಾರಿ ತುಂಬಿಕೊಂಡು ಬೀದಿಗಳಲ್ಲಿ ತರಕಾರಿ ಮಾರಾಟ ಮಾಡಲು ಮುಂದಾದರು. ಇನ್ನು ಕೆಲವರು ಅನಿವಾರ್ಯವಾಗಿ ತರಕಾರಿ ಅಂಗಡಿ ಮುಚ್ಚಿ ಹೊರ ನಡೆದರು. ಲಾಕ್ ಡೌನ್ ಮೊದಲ ದಿನವಂತೂ ಬೆಂಗಳೂರಿನಲ್ಲಿ ಎಲ್ಲಾ ಅಂಗಡಿಗಳು ಬಂದ್ ಆದವು. ಕೆಲವು ಹೋಟೆಲ್ಗಳು ತೆಗೆದಿದ್ದರೂ ಅವು ಪಾರ್ಸಲ್ಗೆ ಮಾತ್ರ ಸೀಮಿತವಾಗಿದ್ದವು. ಬೀದಿ ಬದಿ ಸಣ್ಣ ಪುಟ್ಟ ವ್ಯಾಪಾರ ಮಾಡುವ ಹೋಟೆಲ್ಗಳು ಬಾಗಿಲು ತೆಗೆದಿರಲಿಲ್ಲ. ಅಂತೂ ಲಾಕ್ ಡೌನ್ ಮೊದಲ ದಿನ ಬೆಂಗಳೂರು ಸಂಪೂರ್ಣ ಬಂದ್ ರೀತಿಯಲ್ಲಿ ಸ್ಥಬ್ಧವಾಗಿತ್ತು.

ಟ್ರೈನ್ಗಳು ಫುಲ್ ಜನ ಸಂದಣಿ:
ರಾಜ್ಯದಲ್ಲಿ ಬಸ್ ಸಂಚಾರ ಬಂದ್ ಆಗಿದೆ. ಆದರೆ ಹೊರ ರಾಜ್ಯಗಳಿಗೆ ಸಂಪರ್ಕ ಹೊಂದಿರುವ ರೈಲು ಸೇವೆ ಮಾತ್ರ ಅಸ್ತಿತ್ವದಲ್ಲಿದೆ. ಕೊರೊನಾ ಲಾಕ್ ಡೌನ್ ನಿಯಮಗಳಿಂದ ಹೆದರಿದ ಜನರು ಇದೀಗ ಬೆಂಗಳೂರು ಬಿಟ್ಟು ವಾಪಸು ತೆರಳಿದ್ದಾರೆ. ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು. ಅಂತರ ರಾಜ್ಯಗಳಿಗೆ ರೈಲಿನಲ್ಲಿ ಸಂಚರಿಸಬಹುದು. ಆದರೆ ಅಂತರ್ ಜಿಲ್ಲಾ ನಡುವೆ ಸಂಚರಿಸುವುದು ನಿಷೇಧ. ಸರ್ಕಾರದ್ದು ಇದು ಯಾವ ಲೆಕ್ಕಾಚಾರ. ಟ್ರೈನ್ಗಳಲ್ಲಿ ಪ್ರಯಾಣಿಸುವುದರಿಂದ ಕೊರೊನಾ ಹರಡುವುದಿಲ್ಲವೇ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಸಂಜೆ ವರೆಗೂ ರೈಲು ಪ್ರಯಾಣ ಮಾಡುವರ ಸಂಖ್ಯೆಯಲ್ಲಿ ಇಳಿಮಖವಾಗಲೇ ಇಲ್ಲ. ಬೆಂಗಳೂರಿಗೆ ಬರುವ ಟ್ರೈನ್ಗಳು ಖಾಲಿ- ಖಾಲಿಯಾಗಿದ್ದವು. ಆದರೆ ಬೆಂಗಳೂರಿನಿಂದ ಹೊರ ಹೋಗುವ ಟ್ರೈನ್ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.












Click it and Unblock the Notifications