ಬೆಂಗಳೂರಿನಲ್ಲಿ ಮಿಡಿದ ಮತ್ತೊಂದು ಜೀವಂತ ಹೃದಯ
ಬೆಂಗಳೂರು, ಜ. 3 : ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಜೀವಂತ ಹೃದಯ ಹೊತ್ತ ಆಂಬ್ಯುಲೆನ್ಸ್ ಬಿಜಿಎಸ್ ಆಸ್ಪತ್ರೆಗೆ 30 ನಿಮಿಷಗಳಲ್ಲಿ ಬಂದು ತಲುಪಿದೆ. ಬಿಜಿಎಸ್ ಆಸ್ಪತ್ರೆ ಉಪಾಧ್ಯಕ್ಷರಾದ ವೆಂಕಟರಮಣ ಅವರ ನೇತೃತ್ವದಲ್ಲಿ ಹೃದಯ ಕಸಿ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ.
ಸಮಯ 10 ಗಂಟೆ : ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಜೀವಂತ ಹೃದಯ ಹೊತ್ತ ಆಂಬ್ಯುಲೆನ್ಸ್ ಬಿಜಿಎಸ್ ಆಸ್ಪತ್ರೆಯತ್ತ ಹೊರಟಿದೆ. ಪಶ್ಚಿಮ ಬಂಗಾಳ ಮೂಲದ 29 ವರ್ಷದ ವ್ಯಕ್ತಿಯೊಬ್ಬರಿಗೆ ಜೀವಂತ ಹೃದಯವನ್ನು ಆಳವಡಿಸಲಾಗುತ್ತದೆ.
ಸಮಯ 9.15 : ಸೆಪ್ಟೆಂಬರ್ 3ರಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಕೆಂಪೇಗೌಡ ಏರ್ಪೋರ್ಟ್ಗೆ ತೆಗೆದುಕೊಂಡು ಹೋದ ಆಂಬ್ಯುಲೆನ್ಸ್ ಅನ್ನು ಈ ಬಾರಿಯೂ ಬಳಸಿಕೊಳ್ಳಲಾಗುತ್ತಿದೆ. ಕಳೆದ ಬಾರಿ ಆಂಬ್ಯುಲೆನ್ಸ್ ಚಾಲಕರಾಗಿದ್ದ ದೇವರಾಜ್ ಅವರೇ ಈ ಬಾರಿಯೂ ಜೀವಂತ ಹೃದಯವನ್ನು ಬಿಜಿಎಸ್ಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಬೆಳಗ್ಗೆ 9 ಗಂಟೆ : ಜೀವಂತ ಹೃದಯ ಸಾಗುವ ಮಾರ್ಗ ಹೀಗಿದೆ : ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಜೀವಂತ ಹೃದಯ ಸದಾಶಿವನಗರ ಠಾಣೆ, ಟಾಟಾ ಇನ್ಸಿಟ್ಯೂಟ್, ತುಮಕೂರು ರಸ್ತೆ, ಗೋರಗುಂಟೆ ಪಾಳ್ಯ, ನಾಗರಭಾವಿ, ಜ್ಞಾನ ಭಾರತಿ ಕ್ಯಾಂಪಸ್, ಮೈಸೂರು ರಸ್ತೆ ಮೂಲಕ ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಸಾಗಲಿದೆ, ಒಟ್ಟು 27 ಕಿ.ಮೀ ಮಾರ್ಗದಲ್ಲಿ ಜೀವಂತ ಹೃದಯ ಸಾಗಲಿದೆ.
ಬ್ರೈನ್ ಡೆಡ್ ಆದ ಬಾಲಾಜಿ (21) ತಾಯಿ ಭುವನೇಶ್ವರಿ ಮತ್ತು ಬಾಲಾಜಿ ಸ್ನೇಹಿತರು ಎಂಎಸ್ ರಾಮಯ್ಯ ಆಸ್ಪತ್ರೆಬಳಿ ಇದ್ದು, ಜೀವಂತ ಹೃದಯ ಸಾಗಣೆಗೆ ಸಾಕ್ಷಿಯಾಗಲಿದ್ದಾರೆ. ಬಾಲಾಜಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ. ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಮಾಡಿದ್ದು, ಅನಾಹುತಕ್ಕೆ ಕಾರಣವಾಗಿತ್ತು. ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಮಾಡಬೇಡಿ ಎಂದು ಬಾಲಾಜಿ ಸ್ನೇಹಿತರು ಜನರಿಗೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.
ಬೆಳಗ್ಗೆ 8.30 : ಹೊಸ ವರ್ಷದ ಆರಂಭದಲ್ಲಿಯೇ ಬೆಂಗಳೂರಿನಲ್ಲಿ ಜೀವಂತ ಹೃದಯದ ಕಸಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮೃತಪಟ್ಟ ಯುವಕನ ಹೃದಯವನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ಜೋಡಿಸುವ ಶಸ್ತ್ರ ಚಿಕಿತ್ಸೆ ಶನಿವಾರ ನಡೆಯಲಿದೆ.
ಬೆಂಗಳೂರಿನಿಂದ 2014ರಲ್ಲಿ ಎರಡು ಬಾರಿ ಚೆನ್ನೈಗೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ಬಾರಿ ಬೆಂಗಳೂರಿನ ಎರಡು ಆಸ್ಪತ್ರೆಗಳ ವೈದ್ಯರು ಇಂತಹ ಸಾಹಸ ಮಾಡುತ್ತಿದ್ದಾರೆ. [ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿದ ಜೀವಂತ ಹೃದಯ!]

ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಕೆಲವು ಹೊತ್ತಿನಲ್ಲಿ ಜೀವಂತ ಹೃದಯವನ್ನು ಹೊತ್ತ ಆಂಬ್ಯುಲೆನ್ಸ್ ಬಿಜಿಎಸ್ ಆಸ್ಪತ್ರೆಗೆ ತೆರಳಲಿದ್ದು, ಸಂಚಾರಿ ಪೊಲೀಸರಿಗೂ ಈ ಕುರಿತು ಮಾಹಿತ ನೀಡಿ, ಅನುಮತಿ ಪಡೆದುಕೊಳ್ಳಲಾಗಿದೆ. [ಮಣಿಪಾಲ್ ಆಸ್ಪತ್ರೆಯಿಂದ ಚೆನ್ನೈಗೆ ಜೀವಂತ ಹೃದಯ ಸಾಗಣೆ]
ಬಾಲಾಜಿ ಎಂಬ ಯುವಕನ ಹೃದಯ : ಜನವರಿ 1ರಂದು ಬೆಂಗಳೂರಿನ ಜಾಲಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾಲಾಜಿ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದ, ಯುವಕನ ಮೆದುಳು ನಿಷ್ಕ್ರಿಯವಾದ ಹಿನ್ನಲೆಯಲ್ಲಿ ಅವರ ಪೋಷಕರು ಹೃದಯವನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ಸದ್ಯ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬಾಲಾಜಿ ಹೃದಯ ಹೊರತೆಗೆಯುವ ಚಿಕಿತ್ಸೆ ನಡೆಯುತ್ತಿದ್ದು, ಅದನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಅಗತ್ಯವಿರುವ ವ್ಯಕ್ತಿಯೊಬ್ಬರಿಗೆ ಅಳವಡಿಸಲಾಗುತ್ತದೆ. [ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ]

ಹಿಂದಿನ ಪ್ರಕರಣಗಳು : 2014ರಲ್ಲಿ ಎರಡು ಬಾರಿ ಬೆಂಗಳೂರಿನ ಆಸ್ಪತ್ರೆಗಳಿಂದ ಚೆನ್ನೈಗೆ ಜೀವಂತ ಹೃದಯವನ್ನು ಸಾಗಣೆ ಮಾಡಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ಬಾರಿ ಬೆಂಗಳೂರಿನ ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಜೀವಂತ ಹೃದಯ ಸಾಗಣೆ ಮಾಡಲಾಗುತ್ತಿದೆ.
* ಸೆಪ್ಟೆಂಬರ್ 3 : ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಕೆಂಪೇಗೌಡ ಏರ್ಪೋರ್ಟ್ಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಚೆನ್ನೈನ ಪೋರ್ಟಿಸ್ ಆಸ್ಪತ್ರೆಗೆ ತಲುಪಿಸಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.
* ಡಿಸೆಂಬರ್ 19 : ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಮಗುವಿನ ಜೀವಂತ ಹೃದಯವನ್ನು ಎಚ್ಎಎಲ್ ಏರ್ಪೋರ್ಟ್ ಮೂಲಕ ಚೆನ್ನೈಗೆ ತೆಗೆದುಕೊಂಡು ಹೋಗಿ ಯಶಸ್ವಿಯಾಗಿ ಆಳವಡಿಸಲಾಗಿತ್ತು.












Click it and Unblock the Notifications