Bigg Boss: ಏಕಾಏಕಿ ಸುದ್ದಿಗೋಷ್ಠಿ ರದ್ದುಮಾಡಿದ ಲಾಯರ್ ಜಗದೀಶ್
ಬಿಗ್ ಬಾಸ್ ಮನೆಯಲ್ಲಿ ಜಗಳ ಮಾಡಿಕೊಂಡು ಹೊರಬಂದಿರುವ ಲಾಯರ್ ಜಗದೀಶ್ ಮಾಧ್ಯಮಗಳ ಜೊತೆ ಮುಖಾಮುಖಿ ಭೇಟಿಯಾಗುವುದಾಗಿ ಹೇಳಿದ್ದರು. ಅದರಂತೆ ಶನಿವಾರ ಅರ್ಧರಾತ್ರಿ ಲೈವ್ ಬಂದಿದ್ದ ಅವರು, ಭಾನುವಾರ ಸಂಜೆ ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದ್ದ ಅವರು, ಮಾಧ್ಯಮಗಳಿಗೆ ಆಹ್ವಾನ ನೀಡಿದ್ದರು. ಆದರೆ ಭಾನುವಾರ ಮತ್ತೆ ಲೈವ್ ಬಂದಿರುವ ಅವರು ಸುದ್ದಿಗೋಷ್ಠಿಯನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ನಟ, ಬಿಗ್ ಬಾಸ್ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಜಗದೀಶ್, ನನಗೆ ಮಾತನಾಡಲು ಪದಗಳೇ ಬರುತ್ತಿಲ್ಲ. ಸುದೀಪ್ ಅವರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.

ಸುದೀಪ್ ಅವರ ತಾಯಿ ನಿಧನರಾದ ಕಾರಣ ಇಂದು ನಡೆಯಬೇಕಿದ್ದ ಸುದ್ದಿಗೋಷ್ಠಿಯನ್ನು ಮುಂದೂಡಲಾಗಿದೆ. ಸುದ್ದಿಗೋಷ್ಠಿ ನಡೆಸುವ ಬಗ್ಗೆ ಮತ್ತೊಮ್ಮೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಹಲವು ಕಾರಣಗಳಿಂದ ಇಂದು ಜಗದೀಶ್ ಅವರ ಪ್ರೆಸ್ಮೀಟ್ ಕುತೂಹಲ ಕೆರಳಿಸಿತ್ತು, ಆದರೆ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಅವರು ಸುದ್ದಿಗೋಷ್ಠಿಯನ್ನು ರದ್ದು ಮಾಡಿದ್ದಾರೆ.
ಭಾವನಾತ್ಮಕ ಸಂದೇಶ
"ಇಂದು ಸಂಜೆ ನಾನು ಪ್ರೆಸ್ಮೀಟ್ ಕರೆದಿದ್ದೆ, ಆದರೆ ನಮ್ಮ ದಾದಾ ಅವರ ತಾಯಿ ಕೊನೆಯುಸಿರೆಳೆದಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಶನಿವಾರ ತಾನೇ ತಾಯಿ ಬಗ್ಗೆ ಮಾತನಾಡಿದ್ದರು. ಈಗ ನೋಡಿದರೆ ಈ ರೀತಿ ಆಗಿದೆ. ಕಿಚ್ಚ ದಾದಾಗೆ ಈ ರೀತಿ ಆಗಬಾರದಿತ್ತು. ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ. ದಾದಾ ಅವರ ಕುಟುಂಬಕ್ಕೆ ಈ ನಷ್ಟವನ್ನು ತಡೆದುಕೊಳ್ಳುವ ಶಕ್ತಿ ಕೊಡಲಿ, ತಾಯಿಯನ್ನು ಕಳೆದುಕೊಂಡಾಗ ಆಗುವ ನೋವು ಎಂತಹದ್ದು ಎನ್ನುವುದು ನನಗೆ ಗೊತ್ತಿದೆ. ಮಾಧ್ಯಮ ಮಿತ್ರರು ನನ್ನನ್ನು ಕ್ಷಮಿಸಿ, ಈ ದಿನವನ್ನು ದಾದಾಗೋಸ್ಕರ ಮುಡಿಪಾಗಿಡಬೇಕು, ಏನು ಮಾತನಾಡಬೇಕು ಎಂದು ನನಗೆ ಗೊತ್ತಿಲ್ಲ. ಇನ್ನೊಂದು ದಿನ ನಾನು ನಿಮ್ಮ ಜೊತೆ ಮಾತನಾಡಬಹುದು, ಇಂದು ಸಂಜೆ ನಡೆಯಬೇಕಿದ್ದ ಸುದ್ದಿಗೋಷ್ಠಿಯನ್ನು ರದ್ದು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರ ಪಾರ್ಥೀವ ಶರೀರವನ್ನು ಸುದೀಪ್ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸುದೀಪ್ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಕಲಾವಿದರು, ನಿರ್ದೇಶಕರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಂತಿಮ ದರ್ಶನದ ಬಳಿಕ ಸಂಜೆ 5 ರಿಂದ 7 ಗಂಟೆಯ ನಡುವೆ ವಿಲ್ಸನ್ ಗಾರ್ಡನ್ನಲ್ಲಿರುವ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.











Click it and Unblock the Notifications