ಅಮ್ಮನಿಗೆ ಮಾಡಿದ ಒಂದು ಕರೆ ಬೆಂಗಳೂರಲ್ಲಿದ್ದ ಕೊಲೆ ಆರೋಪಿಯ ಸುಳಿವು ನೀಡಿತು!
ಬೆಂಗಳೂರು, ಅಕ್ಟೋಬರ್ 27: ಆ ಘಟನೆ ನಡೆದಿದ್ದು 15 ವರ್ಷಗಳ ಹಿಂದೆ. ಪತ್ನಿಯ ಕತ್ತು ಹಿಸುಕಿ ಕೊಂದ ಆರೋಪ ಆತನ ಮೇಲಿತ್ತು. ಅಹಮದಾಬಾದ್ ನಿವಾಸಿಯಾಗಿದ್ದ ಆತ ಪತ್ನಿಯ ಸಾವಿನ ಬಳಿಕ ನಾಪತ್ತೆಯಾಗಿದ್ದ.
ಆತನಿಗಾಗಿ ಗುಜರಾತ್ ಪೊಲೀಸರು ಇಡೀ ರಾಜ್ಯವನ್ನು ಜಾಲಾಡಿದ್ದರು. ಬೇರೆ ರಾಜ್ಯಗಳ ಪೊಲೀಸರಿಗೂ ಆತನ ಮಾಹಿತಿ ನೀಡಿದ್ದರು. ಆದರೆ ಎಷ್ಟು ಹುಡುಕಾಟ ನಡೆಸಿದರೂ ಆತನ ಸುಳಿವೇ ಸಿಕ್ಕಿರಲಿಲ್ಲ.
ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ಆತ ಓಡಿ ಬಂದಿದ್ದು ಬೇರೆಲ್ಲಿಗೂ ಅಲ್ಲ, ಲಕ್ಷಾಂತರ ವಲಸಿಗರಿಗೆ ಆಶ್ರಯ ನೀಡಿರುವ ಬೆಂಗಳೂರಿಗೆ. ಬೆಂಗಳೂರು ಆತನ ಪಾಲಿಗೆ ಸುರಕ್ಷಿತ ತಾಣವಾಗಿತ್ತು. ತಾನು ಮೊದಲಿನಂತೆಯೇ ಇದ್ದರೆ ಪೊಲೀಸರ ಬಲೆಗೆ ಬೀಳುವುದು ಖಚಿತ ಎನ್ನುವುದು ಆತನಿಗೆ ತಿಳಿದಿತ್ತು. ಹಾಗಾಗಿ ತನ್ನನ್ನು ಬದಲಿಸಿಕೊಂಡ.
ಹೆಸರು ಬದಲಿಸಿಕೊಂಡ. ಪ್ರಮುಖ ಕಂಪೆನಿಯಲ್ಲಿ ಉದ್ಯೋಗವನ್ನೂ ಗಿಟ್ಟಿಸಿಕೊಂಡ. ಮತ್ತೊಂದು ಮದುವೆಯನ್ನೂ ಆದ. ಇಬ್ಬರು ಮಕ್ಕಳೂ ಹುಟ್ಟಿದರು. ಎಷ್ಟೆಲ್ಲಾ ಜಾಗ್ರತೆ ವಹಿಸಿದ್ದರೂ, ಕಚೇರಿಯ ಲ್ಯಾಂಡ್ಲೈನ್ ದೂರವಾಣಿ ಸಂಪರ್ಕದಿಂದ ತನ್ನ ಅಮ್ಮನ ಮೊಬೈಲ್ ಫೋನ್ಗೆ ಕರೆ ಮಾಡಿ ಯಡವಟ್ಟು ಮಾಡಿಕೊಂಡ. ಅದೇ ಆತನ ಬಂಧನಕ್ಕೂ ಕಾರಣವಾಯಿತು.

ಅಲ್ಲಿ ತರುಣ್, ಇಲ್ಲಿ ಪ್ರವೀಣ್
ಅಹಮದಾಬಾದ್ನ ತರುಣ್ ಕುಮಾರ್ ಜಿನರಾಜ್ ಎಂಬಾತನ ಕಥೆ ಇದು. ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದ ಆತ, ಇಲ್ಲಿ ತನ್ನ ಹೆಸರನ್ನು ಪ್ರವೀಣ್ ಭಾಟ್ಲೆ ಎಂದು ಬದಲಿಸಿಕೊಂಡಿದ್ದ. ಪ್ರತಿಷ್ಠಿತ ಒರಾಕಲ್ ಕಂಪೆನಿಯಲ್ಲಿ ಎಕ್ಸಿಕ್ಯುಟಿವ್ ಆಗಿದ್ದ ಆತನನ್ನು ಗುಜರಾತ್ ಪೊಲೀಸರು ಬಂಧಿಸಿ ತವರಿಗೆ ಕರೆದೊಯ್ದಿದ್ದಾರೆ.

ಕತ್ತು ಹಿಸುಕಿ ಕೊಲೆ ಮಾಡಿದ್ದ
2003ರ ಫೆಬ್ರುವರಿ 14ರಂದು ತರುಣ್, ಬ್ಯಾಂಕ್ ಉದ್ಯೋಗಿಯಾಗಿದ್ದ ಪತ್ನಿ ಸಜನಿ ಜಿನರಾಜ್ (26) ಅವರನ್ನು ಅಹಮದಾಬಾದ್ನ ಬೋಪಾಲ್ನಲ್ಲಿರುವ ತನ್ನ ಅಪಾರ್ಟ್ಮೆಂಟ್ನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಆದರೆ, ಮನೆಗೆ ನುಗ್ಗಿದ್ದ ಡಕಾಯತರು ಈ ಕೊಲೆ ಮಾಡಿದ್ದಾರೆ ಎಂದು ಬಿಂಬಿಸಿದ್ದ. ಅನುಮಾನಗೊಂಡಿದ್ದ ಪೊಲೀಸರು ತನಿಖೆ ತೀವ್ರಗೊಳಿಸುತ್ತಿದ್ದಂತೆ ತರುಣ್ ತಪ್ಪಿಸಿಕೊಂಡಿದ್ದ. ಎಷ್ಟೇ ಹುಡುಕಾಡಿದರೂ ಆತ ಪತ್ತೆಯಾಗದ ಕಾರಣ ಈ ಪ್ರಕರಣ ಬಹುದೊಡ್ಡ ಸುದ್ದಿಯಾಗಿತ್ತು.

22 ಲಕ್ಷ ಸಂಬಳ
ಅನೈತಿಕ ಸಂಬಂಧದ ಅನುಮಾನದಲ್ಲಿ ಆತ ಹೆಂಡತಿಯನ್ನು ಕೊಲೆ ಮಾಡಿದ್ದ. ಅಲ್ಲಿಂದ ಕಣ್ಮರೆಯಾಗಿ ಹೆಸರು ಬದಲಿಸಿಕೊಂಡು ಪುಣೆ ಮೂಲದ ನಿಶಾ ಎಂಬಾಕೆಯನ್ನು ಮದುವೆಯಾಗಿ ಎರಡು ಗಂಡುಮಕ್ಕಳ ತಂದೆಯಾದ. ಆತ ಬೆಂಗಳೂರಿಗೆ ಬಂದು ಆರು ವರ್ಷಗಳಿಂದ ಒರಾಕಲ್ನಲ್ಲಿ ಕೆಲಸ ಮಾಡುತ್ತಿದ್ದ. ವರ್ಷಕ್ಕೆ 22 ಲಕ್ಷ ಸಂಬಳ ಪಡೆಯುತ್ತಿದ್ದ ತರುಣ್, ಬಿಟಿಎಂ ಲೇಔಟ್ನ ಎರಡನೆಯ ಹಂತದಲ್ಲಿ ಹೆಂಡತಿ ಮಕ್ಕಳ ಜತೆ ಸುಖ ಸಂಸಾರ ನಡೆಸಿದ್ದ ಎಂದು ಅಹಮದಾಬಾದ್ ಅಪರಾದ ದಳದ ವಿಶೇಷ ಪೊಲೀಸ್ ಕಮಿಷನರ್ ಜೆಕೆ ಭಟ್ ತಿಳಿಸಿದ್ದಾರೆ.

ರಾತ್ರಿ ಪಾಳಿಯಲ್ಲೇ ಇರುತ್ತಿದ್ದ
ತನ್ನಷ್ಟಕ್ಕೆ ತಾನು ಇರುತ್ತಿದ್ದ ತರುಣ್, ಹೆಚ್ಚಾಗಿ ರಾತ್ರಿ ಪಾಳಿಗಳಲ್ಲಿಯೇ ಕೆಲಸ ಮಾಡುತ್ತಿದ್ದ. ಇತರೆ ಉದ್ಯೋಗಿಗಳ ಜತೆಗೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಹೀಗಾಗಿ ಆತನೊಟ್ಟಿಗೆ ಕೆಲಸ ಮಾಡುತ್ತಿದ್ದವರಿಗೂ ಅವನು ಎಸಗಿದ ಕೃತ್ಯ, ಆತನೊಬ್ಬ ಹಂತಕ ಎಂಬ ಸುಳಿವೂ ದೊರಕಿರಲಿಲ್ಲ.

ಲ್ಯಾಂಡ್ ಲೈನ್ ಕರೆ ಮಾಡಿ ಸಿಕ್ಕಿಬಿದ್ದ
ಘಟನೆ ಬಳಿಕ ನಾಪತ್ತೆಯಾಗಿದ್ದರೂ ಆತನ ತನ್ನ ಅಮ್ಮನೊಂದಿಗೆ ಸಂಪರ್ಕದಲ್ಲಿದ್ದ. ಅವನೊಂದಿಗೆ ಮಾತನಾಡಲೆಂದೇ ಅಮ್ಮ ಹೊಸ ಸಿಮ್ ಕಾರ್ಡ್ ಖರೀದಿ ಮಾಡಿದ್ದರು. ಆದರೆ, ದಶಕ ಕಳೆದರೂ ಪ್ರಕರಣವನ್ನು ಕೈಬಿಟ್ಟಿರದ ಪೊಲೀಸರು ಇದನ್ನು ತಿಳಿದುಕೊಂಡಿದ್ದರು. ಇತ್ತೀಚೆಗೆ ಅಮ್ಮನ ನಂಬರ್ಗೆ ಒರಾಕಲ್ ಕಂಪೆನಿಯ ಸ್ಥಿರ ದೂರವಾಣಿಯಿಂದ ಕರೆ ಮಾಡಿದ್ದನ್ನು ಪೊಲೀಸರು ಪತ್ತೆಹಚ್ಚಿದರು. ಒಂದೈವರೆ ದಶಕದ ಹಿಂದಿನ ಪ್ರಕರಣದ ಆರೋಪಿ ಕೊನೆಗೂ ಅವರ ಬಲೆಗೆ ಸಿಕ್ಕಿ ಬಿದ್ದ.
ಅಹಮದಾಬಾದ್ ಅಪರಾಧ ದಳದ ಪೊಲೀಸರು ಸತತ ಕಾರ್ಯಾಚರಣೆ ನಡೆಸಿದ್ದರು. ಒಂದು ಲಕ್ಷಕ್ಕೂ ಅಧಿಕ ಫೋನ್ ಸಂಖ್ಯೆಗಳನ್ನು ಪರಿಶೀಲಿಸಿದ್ದರು. ಅದೃಷ್ಟವಶಾತ್ ಬೆಂಗಳೂರಿನಿಂದ ದೂರವಾಣಿ ಕರೆ ಮಾಡಿ ಆತನೇ ಸಿಕ್ಕಿಬಿದ್ದ ಎಂದು ಡಿಸಿಪಿ ದೀಪನ್ ಭದ್ರಾನ್ ತಿಳಿಸಿದ್ದಾರೆ.

ಬೆಂಗಳೂರು ಪೊಲೀಸರ ನೆರವು
ದೂರವಾಣಿ ಮಾಹಿತಿ ಪಡೆದ ಅಹಮದಾಬಾದ್ ಪೊಲೀಸರು ಬೆಂಗಳೂರು ಅಪರಾಧ ದಳದ ಪೊಲೀಸರನ್ನು ಸಂಪರ್ಕಿಸಿದರು. ಅವರು ತರುಣ್ ಮಾಹಿತಿಯನ್ನು ಕಲೆಹಾಕಿ ನಾಲ್ಕು ದಿನಗಳ ಬಳಿಕ ಪತ್ತೆಹಚ್ಚಿದರು. ಒರಾಕಲ್ನಲ್ಲಿ ಆರು ಸಾವಿರ ಉದ್ಯೋಗಿಗಳಿದ್ದಾರೆ. ಎಲ್ಲ ಉದ್ಯೋಗಿಗಳ ಮಾಹಿತಿಯನ್ನೂ ಪರಿಶೀಲಿಸುವುದು ಅಸಾಧ್ಯವಾಗಿತ್ತು.
ತರುಣ್ ಅಂದಾಜು 40 ವರ್ಷದವನಾಗಿರಬಹುದು ಎಂಬ ಆಧಾರದಲ್ಲಿ ಆ ವಯಸ್ಸಿನ ಉದ್ಯೋಗಿಗಳ ದಾಖಲೆ ಪರಿಶೀಲಿಸಿದೆವು. ಗುಜರಾತ್ ಪೊಲೀಸರು ಆತನ ಗುರುತನ್ನು ಖಚಿತಪಡಿಸಿದ ಬಳಿಕ ಬೆಂಗಳೂರು ಪೊಲೀಸರು ಆತನ ಚಲನವಲನಗಳನ್ನು ಗಮನಿಸಿದರು. ರಾತ್ರಿ ಪಾಳಿಯಲ್ಲಿದ್ದ ಆತನನ್ನು ಬಂಧಿಸಿ, ಗುಜರಾತ್ ಪೊಲೀಸರ ವಶಕ್ಕೆ ಒಪ್ಪಿಸಿದರು.












Click it and Unblock the Notifications