ಹರಿಹರಪುರ ಶ್ರೀಗಳ ಮಾರ್ಗದರ್ಶನದಲ್ಲಿ ಲಕ್ಷ್ಮೀನರಸಿಂಹ ಸಹಸ್ರನಾಮ ಪಾರಾಯಣ
ಹರಿಹರಪುರದ ಲಕ್ಷ್ಮೀನರಸಿಂಹನಿಗೊಂದು ಶಿಲಾಮಯ ದೇಗುಲ ಮಹಾಕುಂಭಾಭಿಶೇಕಕ್ಕೂ ಮುನ್ನ ಮೇ 28 ರಂದು ಸಹಸ್ರಾರು ಭಕ್ತರಿಂದ ಏಕಕಂಠದಲ್ಲಿ ಶ್ರೀಲಕ್ಷ್ಮೀನರಸಿಂಹ ಸಹಸ್ರನಾಮ ಪಾರಾಯಣವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ
ಬೆಂಗಳೂರು, ಮೇ 26: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ತುಂಗೆಯ ದಡದ ಹರಿಹರಪುರದಲ್ಲಿ ಆದಿಶಂಕರರಿಂದ ಸ್ಥಾಪಿತ ಲಕ್ಷ್ಮೀನರಸಿಂಹ ಶಾರದ ಪೀಠವು ಅಗಸ್ತ್ಯರ ತಪೋಭೂಮಿಯೂ ಆಗಿದೆ.
ಇಲ್ಲಿನ ಶ್ರೀ ಲಕ್ಷ್ಮೀನರಸಿಂಹನಿಗೊಂದು ಶಿಲಾಮಯ ದೇಗುಲ ಪುನರ್ ನಿರ್ಮಾಣ ಕಾರ್ಯ ಜಾರಿಯಲ್ಲಿದೆ. ಮಹಾಕುಂಭಾಭಿಶೇಕಕ್ಕೂ ಮುನ್ನ ಮೇ 28 ರಂದು ಸಹಸ್ರಾರು ಭಕ್ತರಿಂದ ಏಕಕಂಠದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸಹಸ್ರನಾಮ ಪಾರಾಯಣವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.
ಪ್ರಸ್ತುತ ಪೀಠಾಧೀಶರಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿರವರು ಲಕ್ಷ್ಮೀನರಸಿಂಹದೇವರಿಗೆ 2009ರಲ್ಲಿ ಭವ್ಯವಾದ ಶಿಲಾಮಯ ದೇಗುಲವನ್ನು ನಿರ್ಮಿಸುವ ಸಂಕಲ್ಪ ಕೈಗೊಂಡು ಕಾರ್ಯಪ್ರವೃತ್ತರಾಗಿ ಈಗ ಮುಕ್ತಾಯದ ಹಂತದಲ್ಲಿದ್ದು ಮುಂಬರುವ 2018ರಲ್ಲಿ ಮಹಾಕುಂಭಾಭಿಷೇಕವನ್ನು ನೆರವೇರಿಸಲಿದ್ದಾರೆ.
ದೇಗುಲದ ವೈಶಿಷ್ಟ್ಯತೆ : ಕಾರ್ಯಸಿದ್ದಿ ಗರುಡ ಯಂತ್ರ, 108 ಶ್ರೀಲಕ್ಷ್ಮೀನರಸಿಂಹ ಸಾಲಿಗ್ರಾಮಗಳು, ಸ್ತಂಭರೂಪದಲ್ಲಿರುವ ಯಂತ್ರರಾಜ ಶ್ರೀ ಲಕ್ಷ್ಮೀನರಸಿಂಹ ಯಂತ್ರ ಅದರ ಮೇಲೆ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ.
ಮಹಾಕುಂಭಾಭಿಷೇಕಕ್ಕೆ ಪೂರ್ವಭಾವಿಯಾಗಿ ಬೆಂಗಳೂರು ಮಹಾನಗರದಲ್ಲಿ ಸಕಲ ಪಾಪಹರವೂ, ಶೀಘ್ರಫಲದಾಯಕವೂ ಆದ ಲಕ್ಷ್ಮೀನರಸಿಂಹ ಸಹಸ್ರನಾಮ ಕೋಟಿ ಪಾರಾಯಣ ಮಹೋತ್ಸವವನ್ನು ಇದೇ ಮೇ 28ರ ಭಾನುವಾರ ಬೆಳಿಗ್ಗೆ 9.30ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.
ಬ್ರಹ್ಮಾಂಡಪುರಾಣದಲ್ಲಿ ಸ್ವತಃ ಬ್ರಹ್ಮದೇವನೇ ಭಗವಂತನಾದ ಲಕ್ಷ್ಮೀನರಸಿಂಹನನ್ನು ಸ್ತುತಿ ಮಾಡಿರುವ ಸಹಸ್ರನಾಮವನ್ನು ಪಾರಾಯಣಕ್ಕೆ ಅನುಕೂಲವಾಗಲು ನಾಲ್ಕು ಭಾಷೆಗಳಲ್ಲಿ ಪುಸ್ತಕ , ಕಲಾಂಬಿಕೆ ಸಹೋದರಿಯರು ಮಧ್ಯಮಾವತಿ ರಾಗದಲ್ಲಿ ಹಾಡಿರುವ ಸಿ ಡಿ ಪ್ರಕಟವಾಗಿದೆ.
ಇಂದು ಲೋಕದಲ್ಲಿ ಅಸುರೀತನದ ಹಿಂಸಾಪ್ರವೃತ್ತಿ ಹೆಚ್ಚಾಗಿದ್ದು ದೈವೀಗುಣಗಳು ಕಡಿಮೆಯಾಗಿವೇ ನಮ್ಮ ಆಂತರ್ಯದಲ್ಲಿ ಸಾತ್ವಿಕತೆ ಮೂಡಲು ಅಚಲ ಶ್ರದ್ಧೆ , ದೃಢನಂಬಿಕೆ ಮತ್ತು ಪರಿಶುದ್ಧ ಭಕ್ತಿಯಿಂದ ಪ್ರಹ್ಲಾದ ವರದನಿಗೆ ಶರಣಾಗಲು ಸಹಸ್ರನಾಮಪಾರಾಯಣವೇ ಸರಳ ಸೂಕ್ತ ಮಾರ್ಗ ಎಂಬುದು ಪೂಜ್ಯ ಶ್ರೀಗಳ ಅಭಿಮತ.
ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿರವರ ದಿವ್ಯಸಾನ್ನಿಧ್ಯದಲ್ಲಿ ನಡೆಯುವ ಈ ಮಹೋತ್ಸವದಲ್ಲಿ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರಿಶಂಕರ್ , ಕೇಂದ್ರ ಸಚಿವ ಅನಂತಕುಮಾರ್ , ಡಿ ವಿ ಸದಾನಂದಗೌಡ , ವಸತಿ ಸಚಿವ ಎಂ ಕೃಷ್ಣಪ್ಪ, ಶಾಸಕರಾದ ಆರ್.ವಿ ದೇವರಾಜ್ , ರವಿಸುಬ್ರಹ್ಮಣ್ಯ, ಗೋಪಾಲಯ್ಯ, ಡಿ ಎನ್ ದೇವರಾಜ್ ಮುಖ್ಯ ಅತಿಥಿಗಳಾಗಿ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಧ್ಯಕ್ಷ ಕೆ ಎನ್ ವೇಂಕಟನಾರಾಯಣ, , ಶರ್ಮಾ ಟ್ರಾನ್ಸ್ ಪೋರ್ಟ್ನ ಸುನಿಲ್ ಕುಮಾರ್ ಶರ್ಮಾ, ನ್ಯಾಷನಲ್ ಕೋಆಪರೇಟಿವ್ ಬ್ಯಾಂಕಿನ ಎಚ್ ಆರ್ ಸುರೇಶ್ , ಶ್ರೀಚರಣ್ ಕೋ ಆಪ್ ಬ್ಯಾಂಕಿನ ದ್ವಾರಕಾನಾಥ್ ಉಪಸ್ಥಿತರಿರುತ್ತಾರೆ ಶ್ರೀ ಮಠದ ಆಡಳಿತಾಧಿಕಾರಿ ಎಂದು ಬಿ ಎಸ್ ರವಿಶಂಕರ್ ತಿಳಿಸಿರುತ್ತಾರೆ.