'ಪ್ರಿಯಾಂಕಾ ಬಂಧನ ಹಿಟ್ಲರ್ ಸಂಸ್ಕೃತಿಯ ಪ್ರತೀಕ, ಇದು ರಾವಣ ರಾಜ್ಯವೋ?': ಡಿಕೆಶಿ ಟ್ವೀಟ್
ಬೆಂಗಳೂರು, ಅಕ್ಟೋಬರ್ 04: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಹಿನ್ನೆಲೆ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಘಟನಾ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಅವರನ್ನು ಬಂಧನ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಈ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಡಿ ಕೆ ಶಿವಕುಮಾರ್, "ಉತ್ತರ ಪ್ರದೇಶದಲ್ಲಿ ಪ್ರತಿಭಟನೆನಿರತ ರೈತರ ಹತ್ಯೆ ಹಾಗೂ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧನ ಮಾಡಿರುವುದು ಖಂಡನೀಯ," ಎಂದು ಹೇಳಿದ್ದಾರೆ.
ಇನ್ನು ಈ ಬಂಧನವನ್ನು ಕರ್ನಾಟಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಿಟ್ಲರ್ ಸಂಸ್ಕೃತಿಗೆ ಹೋಲಿಕೆ ಮಾಡಿದ್ದಾರೆ. "ಪ್ರಿಯಾಂಕಾ ಗಾಂಧಿ ಅವರ ಬಂಧನ ಮಾಡಿರುವುದು ಹಿಟ್ಲರ್ ಸಂಸ್ಕೃತಿಯ ಪ್ರತೀಕ, ಖಂಡನೀಯ," ಎಂದಿದ್ದಾರೆ.

"ಈ ದೇಶದಲ್ಲಿ ಅನ್ನದಾತರಿಗೆ ರಕ್ಷಣೆ ಇಲ್ಲ. ರಕ್ಷಕರೇ ಭಕ್ಷಕರಾಗಿದ್ದಾರೆ, ರಾಕ್ಷಸರಾಗಿದ್ದಾರೆ. ಇದು ರಾಮರಾಜ್ಯವೋ?! ರಾವಣ ರಾಜ್ಯವೋ?," ಎಂದು ಡಿ ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
"ಉತ್ತರ ಪ್ರದೇಶ ಹಿಂಸಾಚಾರದಲ್ಲಿ ಎಂಟು ಮಂದಿ ಮೃತಪಟ್ಟಿರುವ ಲಖಿಂಪುರ-ಖೇರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡುವ ಸಂದರ್ಭದಲ್ಲಿ ಹರಗಾಂವ್ನಲ್ಲಿ ಅವರನ್ನು ಬಂಧನ ಮಾಡಲಾಗಿದೆ," ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀನಿವಾಸ್ ಬಿವಿ ಹೇಳಿದ್ದಾರೆ.
"ಬಿಜೆಪಿ ಸರ್ಕಾರ ರೈತರನ್ನು ತುಳಿಯುವ ರಾಜಕೀಯ ಮಾಡುತ್ತಿದೆ, ರೈತರನ್ನು ನಾಶ ಮಾಡುವ ರಾಜಕಾರಣ ಮಾಡುತ್ತಿದೆ," ಎಂದು ಕೂಡಾ ಹೇಳಿದ್ದಾರೆ. ಹಾಗೆಯೇ ಈ ಹಿಂದೆ ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ 1977 ರಲ್ಲಿ ಅಕ್ಟೋಬರ್ 3 ರಂದು ಬಂಧನಕ್ಕೆ ಒಳಗಾದ ದೃಶ್ಯ ಹಾಗೂ ಇಂದು ಪ್ರಿಯಾಂಕ ಗಾಂಧಿ ಬಂಧನಕ್ಕೆ ಒಳಗಾದ ದೃಶ್ಯವನ್ನು ಹಾಕಿ, "ಇಂದಿರಾ ಮತ್ತೆ ಬಂದಿದ್ದಾರೆ," ಎಂದು ಹೇಳಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೂಡಾ ಟ್ವೀಟ್ ಮಾಡಿದ್ದಾರೆ. "ಪ್ರಿಯಾಂಕಾ, ನೀವು ಹಿಂಜರಿಯುವುದಿಲ್ಲ ಎಂದು ನನಗೆ ತಿಳಿದಿದೆ. ಅವರು ನಿಮ್ಮ ಧೈರ್ಯವನ್ನು ನೋಡಿ ದಿಗ್ಭ್ರಾಂತರಾಗಿದ್ದಾರೆ. ನ್ಯಾಯಕ್ಕಾಗಿ ಈ ಅಹಿಂಸಾತ್ಮಕ ಹೋರಾಟದಲ್ಲಿ, ನಾವು ದೇಶದ ಅನ್ನದಾತನನ್ನು ಗೆಲ್ಲುವಂತೆ ಮಾಡುತ್ತೇವೆ," ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರತಿಭಟನೆನಿರತ ರೈತರ ಹತ್ಯೆ ಹಾಗೂ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಶ್ರೀಮತಿ @PriyankaGandhi ಅವರ ಬಂಧನ ಹಿಟ್ಲರ್ ಸಂಸ್ಕೃತಿಯ ಪ್ರತೀಕ, ಖಂಡನೀಯ.
— DK Shivakumar (@DKShivakumar) October 4, 2021
ಈ ದೇಶದಲ್ಲಿ ಅನ್ನದಾತರಿಗೆ ರಕ್ಷಣೆ ಇಲ್ಲ. ರಕ್ಷಕರೇ ಭಕ್ಷಕರಾಗಿದ್ದಾರೆ, ರಾಕ್ಷಸರಾಗಿದ್ದಾರೆ.
ಇದು ರಾಮರಾಜ್ಯವೋ?! ರಾವಣ ರಾಜ್ಯವೋ? pic.twitter.com/M4YuHoTPQX
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳು ರೈತರ ಮೇಲೆ ಹರಿದು ಹೋದ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರನೂ ಇದ್ದರು ಎಂದು ಹೇಳಲಾಗಿದೆ. ಈ ನಡುವೆ ಕೇಂದ್ರ ಸಚಿವರ ಪುತ್ರ ಆಶೀಶ್ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಇನ್ನು ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಮಗ ಆಶೀಶ್ ವಿರುದ್ದ ಮಾತ್ರವಲ್ಲದೆ ಇನ್ನೂ ಕೂಡಾ ಹಲವು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ. ಎಫ್ಐಆರ್ನಲ್ಲಿ ಇನ್ನೂ ಹಲವಾರು ಮಂದಿಯ ಹೆಸರನ್ನು ಉಲ್ಲೇಖ ಮಾಡಲಾಗಿದೆ.
ಉತ್ತರ ಪ್ರದೇಶದಲ್ಲಿ ಈ ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಇದ್ದರು ಎಂಬ ಆರೋಪವನ್ನು ರೈತ ಮುಖಂಡರು ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ರೈತ ಮುಖಂಡ ಡಾ. ದರ್ಶನ್ ಪಾಲ್, "ನಾವು ಸಚಿವರುಗಳ ಭೇಟಿಯನ್ನು ತಡೆಯುವ ನಿಟ್ಟಿನಲ್ಲಿ ಘೇರಾವು ನಡೆಸಿ ಹಿಂದಕ್ಕೆ ತೆರಳುವ ವೇಳೆ ಕಾರುಗಳು ರೈತರ ಮೇಲೆಯೇ ಹರಿದು ಹೋಗಿದೆ. ಈ ಸಂದರ್ಭ ಕಾರಿನಲ್ಲಿ ಸಚಿವರ ಮಗನೂ ಇದ್ದ," ಎಂದು ಆರೋಪ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications