ಬೆಂಗಳೂರು; ಕೆರೆ ಒತ್ತುವರಿ ತೆರವಿಗೆ 6 ವಾರ ಕಾಲಾವಕಾಶ
ಬೆಂಗಳೂರು, ಸೆಪ್ಟೆಂಬರ್ 05; ಬೆಂಗಳೂರು ನಗರದಲ್ಲಿ 156 ಕೆರೆಗಳ ಒತ್ತುವರಿಯನ್ನು ಪರಿಶೀಲಿಸಿ, ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಮತ್ತೆ 6 ವಾರದಲ್ಲಿ ಸಮಯಾವಕಾಶ ನೀಡಿದೆ.
ಅಷ್ಟರಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಚರಣೆ ಕೈಗೊಳ್ಳಬೇಕು ಮತ್ತು ವಸ್ತುಸ್ಥಿತಿಯ ವರದಿ ಸಲ್ಲಿಸುವಂತೆ ನಿರ್ದೇಶನವನ್ನೂ ಸಹ ನೀಡಿದೆ. ಹಾಗಾಗಿ ಪಾಲಿಕೆಗೆ ಮತ್ತಷ್ಟು ಕಾಲಾವಕಾಶ ದೊರೆತಂತಾಗಿದೆ. ಪಾಲಿಕೆ ಇನ್ನಾದರೂ ಒತ್ತುವರಿ ತೆರವು ಗಂಭೀರವಾಗಿ ಪರಿಗಣಿಸಬೇಕಿದೆ.

ಬೆಂಗಳೂರಿನ ಸಿಟಿಜನ್ ಆಕ್ಷನ್ ಗ್ರೂಪ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. ಅಲ್ಲದೆ, ನಗರದಾದ್ಯಂತ ಒತ್ತುವರಿಯಾಗಿರುವ ಮಳೆನೀರು ಕಾಲುವೆ ಜಾಗವನ್ನು ತೆರವುಗೊಳಿಸಬೇಕು ಎಂದು ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಮತ್ತು ವಾರ್ಡ್ ಸಮಿತಿ ಸೇರಿ ಸಂಬಂಧಪಟ್ಟವರಿಗೆ ನ್ಯಾಯಪೀಠ ನಿರ್ದೇಶಿಸಿತು.
ಒತ್ತುವರಿ ತೆರವು ಕಾರ್ಯಚರಣೆಯಲ್ಲಿ ಬಿಬಿಎಂಪಿ ಕಾರ್ಯಕಾರಿ ಇಂಜಿನಿಯರ್ ಕಾರ್ಯವ್ಯಾಪ್ತಿ ದೊಡ್ಡದಿದೆ. ಆದರೆ, ಬಿಬಿಎಂಪಿ ಕಾರ್ಯಕಾರಿ ಇಂಜಿನಿಯರ್ ಅವರ ಕಛೇರಿಯಲ್ಲಿ ಶೇ. 50ರಷ್ಟು ಹುದ್ದೆಗಳು ಖಾಲಿಯಿವೆ. ಆದ್ದರಿಂದ ಸರ್ಕಾರವು ಸೂಕ್ತ ವಿಧಿ-ವಿಧಾನ ಪಾಲಿಸಿ ಶೀಘ್ರವೇ ಖಾಲಿಯಿರುವ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ನಿರ್ದೇಶಿಸಿದೆ.
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆರೆ ಮತ್ತು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕಾಲಮಿತಿ ನಿಗದಿಪಡಿಸಿರುವ ಬಗ್ಗೆ ಎರಡು ಪ್ರತ್ಯೇಕ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.
ರಾಜಕಾಲುವೆ ತೆರವು; ನಗರದಲ್ಲಿ 859.79 ಕಿ. ಮೀ. ರಾಜಕಾಲುವೆಯಲ್ಲಿ655 ನದಿ (ಸ್ಟ್ರೀಮ್ಸ್) ಹರಿಯುತ್ತವೆ. ಇವೆಲ್ಲವೂ ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ಸರ್ಕಾರದ ಆಸ್ತಿಗಳಾಗಿವೆ. ರಾಜಕಾಲುವೆಗಳ ಒತ್ತುವರಿ ತೆರವಿಗೆ 172 ದಿನಗಳು ಅಗತ್ಯವಿದೆ. ಆ ಪ್ರಕಾರ ರಾಜಕಾಲುವೆಗಳ ಒತ್ತುವರಿ ಪತ್ತೆಗೆ 20 ದಿನ, ನಂತರ ತಹಶೀಲ್ದಾರ್ ಎದುರು ದೂರು ದಾಖಲಿಸಲು 5 ದಿನ, ಬಳಿಕ ಸಮೀಕ್ಷೆಗೆ ಆದೇಶಿಸಲು ಮತ್ತು ಮಾರ್ಕ್ ಮಾಡಲು ತಹಶೀಲ್ದಾರ್ಗೆ 5 ದಿನ, ಆ ನಂತರ 50 ದಿನದಲ್ಲಿ ಸಮೀಕ್ಷೆಗೆ ನಡೆಸಲಾಗುವುದು ಎಂದು ವರದಿಯಲ್ಲಿ ಬಿಬಿಎಂಪಿ ತಿಳಿಸಿದೆ.
ಅಲ್ಲದೆ, ಸಮೀಕ್ಷೆ ನಡೆಸಿದ ಬಳಿಕ ಒತ್ತುವರಿದಾರರಿಗೆ 10 ದಿನಗಳಲ್ಲಿನೋಟಿಸ್ ಜಾರಿಗೊಳಿಸಿ 7 ದಿನದಲ್ಲಿ ಅವರಿಂದ ಪ್ರತಿಕ್ರಿಯೆ ಪಡೆಯಲಾಗುತ್ತದೆ. ಆ ನಂತರ 10 ದಿನಗಳ ಬಳಿಕ ತಹಶೀಲ್ದಾರ್ ಅವರಿಂದ ಅಂತಿಮ ಆದೇಶಕ್ಕೆ ಕಾಲಮಿತಿ ನಿಗದಿ ಮಾಡಲಾಗಿದೆ. ಮೇಲ್ಮನವಿ ಸಲ್ಲಿಸಲು 30 ದಿನ, ಬಳಿಕ ಸಿದ್ಧತೆ ಮಾಡಿಕೊಂಡು ಒತ್ತುವರಿ ತೆರವು ಮಾಡಲು 15 ದಿನ ನಿಗದಿಪಡಿಸಲಾಗಿದೆ. ಆ ನಂತರ 10 ದಿನಗಳ ಒಳಗೆ ತಹಶೀಲ್ದಾರ್ ಅವರು ಭೂಕಬಳಿಕೆ ನಿಷೇಧ ನ್ಯಾಯಾಲಯದ ಮುಂದೆ ದೂರು ದಾಖಲಿಸಬೇಕು ಎಂದು ಅನುಪಾಲನಾ ವರದಿಯಲ್ಲಿಬಿಬಿಎಂಪಿ ಹೇಳಿತ್ತು.
ಕೆರೆ ತೆರವಿಗೆ ಕ್ರಮ: ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಕೆರೆಗಳಿವೆ. ಈ ಪೈಕಿ 24 ಕೆರೆಗಳನ್ನು ಒತ್ತುವರಿಯಿಂದ ಮುಕ್ತಿಗೊಳಿಸಲಾಗಿದೆ. ಈ ಪೈಕಿ 19 ಬಳಕೆಯಾಗದ ಕೆರೆಗಳಿವೆ. 156 ಕೆರೆಗಳಲ್ಲಿ ವಾರದಲ್ಲಿ10 ಕೆರೆಗಳ ಒತ್ತುವರಿ ತೆರವಿಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಒತ್ತುವರಿ ಮಾಹಿತಿ ಸ್ವೀಕರಿಸಿದ 7 ದಿನಗಳ ಒಳಗೆ ಸಕ್ಷಮ ಪ್ರಾಧಿಕಾರದಲ್ಲಿದೂರು ದಾಖಲಿಸಬೇಕು. ನಂತರ ಸಕ್ಷಮ ಪ್ರಾಧಿಕಾರವು ತಹಶೀಲ್ದಾರ್ ಕಡೆಯಿಂದ ಮುಂದಿನ ಏಳು ದಿನಗಳ ಸಮೀಕ್ಷೆ ನಡೆಸಲಾಗುತ್ತದೆ.
ಬಳಿಕ ತಹಶೀಲ್ದಾರ್ 7 ದಿನಗಳಲ್ಲಿಜಂಟಿ ಸಮೀಕ್ಷೆ ನಡೆಸಲಿದ್ದಾರೆ. ತದ ನಂತರ 15 ದಿನಗಳ ಕಾಲಾವಕಾಶ ನೀಡಿ ಒತ್ತುವರಿಗೆ ತೆರವಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಈ ಮಧ್ಯೆ, ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಮಿತಿ ನಿಗದಿಗೊಳಿಸಲಾಗಿದೆ. ಕಾಲಮಿತಿ ಗಡುವು ಮುಗಿದ ಬಳಿಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ವಿವರಿಸಲಾಗಿದೆ.












Click it and Unblock the Notifications