ಶಾಸ್ತ್ರೋಕ್ತವಾಗಿ ನಡೆಯಲಿದೆ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ
ಬೆಂಗಳೂರು, ಮೇ 22: ಪ್ರಗತಿಪರರು ಏನೇ ಕೂಗಾಡಲಿ, ದೇವೇಗೌಡರ ಕುಟುಂಬ ಯಾವುದಕ್ಕೂ ಸೊಪ್ಪು ಹಾಕಿದಂತೆ ಕಾಣುತ್ತಿಲ್ಲ. ಬುಧವಾರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕ್ಷಣ ಶಾಸ್ತ್ರೋಸ್ತ್ರವಾಗಿ ನಡೆಯಲಿದೆ.
ದೇವೇಗೌಡರೆಂದರೆ ಮೊದಲಿಗೆ ನೆನಪಿಗೆ ಬರುವುದು ಅವರ ದೈವಭಕ್ತಿ. ಪಂಚಾಂಗದ ಲೆಕ್ಕಾಚಾರವನ್ನು ಒಂದಿಷ್ಟೂ ಮೀರದ ಅವರಿಗೆ ತಮಗೆ ದೊರೆತ ಅಧಿಕಾರದ ಸುವರ್ಣಘಳಿಗೆಗಳಿಗೆಲ್ಲಾ ದೈವ ಸಹಾಯವೇ ಕಾರಣ ಎಂಬ ನಂಬಿಕೆ ಇದೆ. ಈ ನಂಬಿಕೆ ಇಂಬು ನೀಡಿರುವುದು ಕುಟುಂಬದ ಪಾಲಿಗೆ ಮತ್ತೆ ದೊರೆತಿರುವ ಅಧಿಕಾರ.
ಸೋಮವರ ಎಚ್ ಡಿ ಕುಮಾರಸ್ವಾಮಿ ದಂಪತಿ ಹಾಗೂ ಸಹೋದರ ಎಚ್ ಡಿ ರೇವಣ್ಣ ಹೊಳೆನರಸೀಪುರದಲ್ಲಿ ದೇಗುಲ ಪ್ರದಕ್ಷಿಣೆಯಲ್ಲಿದ್ದರೆ, ವಿಧಾನಸೌಧದ ಎದುರಿನ ಮೆಟ್ಟಿಲುಗಳ ಮೇಲೆ ದೇವೇಗೌಡರ ಅಣತಿಯಂತೆ ನಾನಾ ಪೂಜೆ-ಹೋಮಗಳು ನಡೆದವು. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲು ನಿಲ್ಲುವ ಜಾಗದಲ್ಲೂ ವಾಸ್ತು ಪೂಜೆ ನಡೆಸಲಾಯಿತು.

ಇಷ್ಟಕ್ಕೆ ಗೌಡರ ಕುಟುಂಬದ ದೈವಭಕ್ತಿ ನಿಂತಿಲ್ಲ. ನಾಳೆ ಕುಮಾರಸ್ವಾಮಿಯವರು ಪೂಜೆ ಮಾಡಲ್ಪಟ್ಟ ರೇಷ್ಮೆ ಬಟ್ಟೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಅವರು ಮನೆಯಿಂದ ಬರಿಗಾಲಲ್ಲಿ ಬರಲಿದ್ದಾರೆ. ಪ್ರಮಾಣವಚನ ಸ್ವೀಕರಿಸಿ, ಮುಖ್ಯಮಂತ್ರಿ ಕಚೇರಿಯೊಳಗೆ ಪೂಜೆ ಸಲ್ಲಿಸಿದ ಬಳಿಕವೇ ಅವರು ಚಪ್ಪಲಿ ಹಾಕಿಕೊಳ್ಳಲಿದ್ದಾರೆ.












Click it and Unblock the Notifications