ಕೆಎಸ್ಆರ್ಟಿಸಿ ಆಸ್ಪತ್ರೆ ಖಾಸಗೀಕರಣ: ಸಂಸದರ ವಿರುದ್ಧ ಎಎಪಿ ಕಿಡಿ
ಬೆಂಗಳೂರು, ಜುಲೈ,25: ಬೆಂಗಳೂರಿನ ಜಯನಗರದಲ್ಲಿರುವ ಕೆಎಸ್ಆರ್ಟಿಸಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನಿರ್ಧಾರಕ್ಕೆ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ವಿರೋಧ ವ್ಯಕ್ತಪಡಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್ ದಾಸರಿ, "ಹಲವು ವರ್ಷಗಳಿಂದ ಕೆಎಸ್ಆರ್ಟಿಸಿ ಆಸ್ಪತ್ರೆಯಲ್ಲಿ ಕೆಎಸ್ಆರ್ಟಿಸಿ ನೌಕರರು ಅಗತ್ಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ. ಸಾರಿಗೆ ನೌಕರರಿಗೆ ಇರುವ ಏಕೈಕ ಆಸ್ಪತ್ರೆ ಇದಾಗಿದ್ದು, ಇನ್ನೂ ಒಂದು ಆಸ್ಪತ್ರೆ ತೆರೆದು ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರ ಯೋಚಿಸಬೇಕು. ಆದರೆ ಸಂಸದ ತೇಜಸ್ವಿ ಸೂರ್ಯರವರು ಈಗಿರುವ ಆಸ್ಪತ್ರೆಯನ್ನೂ ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡಲು ಹೊರಟಿರುವುದು ಖಂಡನೀಯ" ಎಂದು ಹೇಳಿದರು.
"ಕಮಿಷನ್ ಆಸೆಗಾಗಿ ತೇಜಸ್ವಿ ಸೂರ್ಯ ಈ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ಅಲ್ಲಿರುವ ನೌಕರರು ಕೆಲಸ ಕಳೆದುಕೊಳ್ಳುವ ಅಪಾಯವಿದೆ. ಸಾರಿಗೆ ನೌಕರರು ಸಣ್ಣಪುಟ್ಟ ಚಿಕಿತ್ಸೆಗೂ ದುಬಾರಿ ಬೆಲೆ ತೆರಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಸರ್ಕಾರವು ಹಲವು ವರ್ಷಗಳಿಂದ ಕಾಪಾಡಿಕೊಂಡ ಸಂಸ್ಥೆಗಳನ್ನು ಭ್ರಷ್ಟ ಬಿಜೆಪಿಯು ಒಂದೊಂದಾಗಿಯೇ ಮಾರಾಟ ಮಾಡುತ್ತಿದೆ" ಎಂದು ಮೋಹನ್ ದಾಸರಿ ದೂರಿದರು.

ಸಂಸದ ತೇಜಸ್ವಿ ಸೂರ್ಯ ಹೆಸರು ಪ್ರಸ್ತಾವ
ಸಾವಿರಾರು ಕೆಎಸ್ಆರ್ಟಿಸಿ ನೌಕರರಿಗೆ ಚಿಕಿತ್ಸೆಗೆ ನೆರವಾಗುತ್ತಿರುವ ಜಯನಗರದ ಕೆಎಸ್ಆರ್ಟಿಸಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಗೆ 30 ವರ್ಷಗಳವರೆಗೆ ಗುತ್ತಿಗೆ ನೀಡಲು ಒತ್ತಡವಿದೆ. ಬೆಂಗಳೂರು ದಕ್ಷಿಣ ವಿಭಾಗದ ಸಂಸದ ತೇಜಸ್ವಿ ಸೂರ್ಯ ಕೆಎಸ್ಆರ್ಟಿಸಿ ಆಸ್ಪತ್ರೆ ಖಾಸಗಿಕರಣಕ್ಕೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಮೇಲೆ ಒತ್ತಡ
ವಾಸವಿ ಸಮಾಜದ ಡಯಾಲಿಸ್ ಸಂಸ್ಥೆಗೆ ಜಯನಗರದ ಕೆಎಸ್ಆರ್ಟಿಸಿ ಆಸ್ಪತ್ರೆಗೆ ಗುತ್ತಿಗೆ ನೀಡಲು ತಯಾರಿ ನಡೆದಿದ್ದು, ಈಗಾಗಲೇ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದಕ್ಕೆ ಸ್ವತಃ ಸಂಸದ ತೇಜಸ್ವಿ ಸೂರ್ಯ ಅವರೇ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಕೆಎಸ್ಆರ್ಟಿಸಿ ನೌಕರರು ಗಂಭೀರ ಆರೋಪ ಮಾಡಿದ್ದಾರೆ.

ಸಂಸದರ ಕಚೇರಿ ಮುಂದೆ ಉಗ್ರ ಹೋರಾಟ
ಕೆಎಸ್ಆರ್ಟಿಸಿ ನೌಕರರ ಸಂಘದ ಮುಖಂಡ ಅನಂತ ಸುಬ್ಬರಾವ್ ಮಾತನಾಡಿ, "ಕರ್ನಾಟಕ ರಾಜ್ಯದಲ್ಲಿ ಕೆಎಸ್ಆರ್ಟಿಸಿಗೆ ನೌಕರರಿಗೆ ಇರುವ ಏಕೈಕ ಆಸ್ಪತ್ರೆ ಎಂದರೆ ಅದು ಜಯನಗರದ ಆಸ್ಪತ್ರೆ. ಈಗ ಈ ಆಸ್ಪತ್ರೆಯನ್ನು ಖಾಸಗೀಕರಣ ಮಾಡಿದರೆ ಸಂಸದರ ಕಚೇರಿ ಮುಂದೆ ಉಗ್ರ ಹೋರಾಟ ಮಾಡ್ತೇವೆ. ಸಂಸದರು ತಮ್ಮ ಕ್ಷೇತ್ರದ ಮತದಾರರನ್ನು ಓಲೈಕೆ ಮಾಡಲು ಹೀಗೆ ಮಾಡುತ್ತಿದ್ದಾರೆ. ಈ ಆಸ್ಪತ್ರೆ ನಂಬಿ ಸಾವಿರಾರು ನೌಕರರಿದ್ದಾರೆ. ಇದನ್ನು ಖಾಸಗಿಗೆ ಕೊಟ್ಟರೆ ನೌಕರರು ಎಲ್ಲಿಗೆ ಹೋಗ್ಬೇಕು?. ಇದರ ಹಿಂದೆ ಸಂಸದರ ಸ್ವಹಿತಾಸಕ್ತಿ ಇದೆ" ಎಂದು ಆರೋಪಿಸಿದ್ದಾರೆ.

ನಷ್ಟದ ನೆಪವೊಡ್ಡಿ ಖಾಸಗಿಗೆ ಹಸ್ತಾಂತರ
ಈ ಹಿಂದೆಯೂ ವಾಸವಿ ಖಾಸಗಿ ಸಂಸ್ಥೆಗೆ ಕೆಎಸ್ಆರ್ಟಿಸಿ ಆಸ್ಪತ್ರೆಯನ್ನು ಪರಭಾರೆ ಮಾಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು . ಈಗ ಮತ್ತೊಮ್ಮೆ ಇದೇ ಆರೋಪವನ್ನು ಸಾರಿಗೆ ನೌಕರರೇ ಮಾಡಿದ್ದಾರೆ. ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ನಷ್ಟದಲ್ಲಿದ್ದು, ತನ್ನ ಸ್ವತ್ತುಗಳ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಸಾರಿಗೆ ಇಲಾಖೆಯ ಈ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಲು ಕುತಂತ್ರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
"ಕೆಎಸ್ಆರ್ಟಿಸಿ ನೌಕರರು ಏಳನೇ ವೇತನ ಶ್ರೇಣಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಸರಿಯಾದ ಪಿಂಚಣಿ, ವಿಮಾ ಸೌಲಭ್ಯ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ತುಟಿ ಬಿಚ್ಚದ ಸಂಸದ ತೇಜಸ್ವಿ ಸೂರ್ಯರವರು ಕೆಎಸ್ಆರ್ಟಿಸಿ ಆಸ್ಪತ್ರೆಯನ್ನು ಮಾರಾಟ ಮಾಡಲು ನಿರ್ಧರಿಸಿರುವುದು ನಾಚಿಕೆಗೇಡಿನ ಸಂಗತಿ. ಅವರು ಈ ನಿರ್ಧಾರದಿಂದ ಶೀಘ್ರವೇ ಹಿಂದೆಸರಿಯಬೇಕು" ಎಂದು ಮೋಹನ್ ದಾಸರಿ ಒತ್ತಾಯಿಸಿದರು.












Click it and Unblock the Notifications