ಸೆ. 10ರಿಂದ ಅನ್ವಯ: ಕೆಎಸ್ಆರ್ಟಿಸಿ, ಬೆಂಗಳೂರು ಮಹತ್ವದ ಪ್ರಕಟಣೆ
ಬೆಂಗಳೂರು, ಸೆ 8: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣದಲ್ಲಿ (ಮೆಜಿಸ್ಟಿಕ್) ಪ್ರಯಾಣಿಕರ ಒತ್ತಡ ಕಮ್ಮಿ ಮಾಡುವ ದೃಷ್ಟಿಯಿಂದ ಪ್ರಾರಂಭಿಸಲಾಗಿದ್ದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಆರಂಭವಾದಾಗಿನಿಂದ, ಸಾರ್ವಜನಿಕರಿಗೆ ಅದರ ಪ್ರಯೋಜನವಾಗಿದ್ದೇ ಕಮ್ಮಿ.
ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದ ಕಡೆ ಹೋಗುವ ಸುಮಾರು 62 ಮಾರ್ಗಗಳನ್ನು, ಮೆಜಿಸ್ಟಿಕ್ ನಿಂದ ಬಸವೇಶ್ವರ ನಿಲ್ದಾಣಕ್ಕೆ ಏಪ್ರಿಲ್ ತಿಂಗಳಲ್ಲಿ ಸ್ಥಳಾಂತರಿಸಲಾಗಿತ್ತು. ಆದರೆ, ಪ್ರಯಾಣಿಕರ ಬರ ಕಾಡಿದ್ದರಿಂದ, ರಸ್ತೆ ಸಾರಿಗೆ ಸಂಸ್ಥೆ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡಿದೆ.
ಇದೇ ಸೋಮವಾರ, ಸೆಪ್ಟಂಬರ್ ಹತ್ತರಿಂದ ಅನ್ವಯವಾಗುವಂತೆ, ಬಸವೇಶ್ವರ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಮಾರ್ಗದ ಬಸ್ಸುಗಳು ಮತ್ತೆ ಮೆಜಿಸ್ಟಿಕ್ ನಿಂದ ಕಾರ್ಯನಿರ್ವಹಿಸಲಿದೆ ಎನ್ನುವ ಆದೇಶವನ್ನು ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ ಆರ್ ಟಿಸಿ) ವ್ಯವಸ್ಥಾಪಕ ನಿರ್ದೇಶಕರು ಹೊರಡಿಸಿದ್ದಾರೆ.

ಖಾಸಗಿ ಬಸ್ಸುಗಳು ಇನ್ನೂ ಮೆಜಿಸ್ಟಿಕ್ ಭಾಗದಿಂದಲೇ ಕಾರ್ಯನಿರ್ವಹಿಸುತ್ತಿದೆ, ಜೊತೆಗೆ ಪ್ರಯಾಣಿಕರನ್ನು ಆಕರ್ಷಿಸುವ ದರಗಳನ್ನು ನೀಡುತ್ತಿರುವುದರಿಂದ, ಬಸವೇಶ್ವರ ನಿಲ್ದಾಣದಿಂದ ಹೊರಡುವ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾಗಿರುವುದರಿಂದ, ಮೆಜಿಸ್ಟಿಕ್ ನಿಂದಲೇ ಕಾರ್ಯನಿರ್ವಹಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕೆಎಸ್ ಆರ್ ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ, ನಗರದ ಹೊರವಲಯಕ್ಕೆ ಸಾರಿಗೆ ನಿಗಮಗಳನ್ನು ಶಿಫ್ಟ್ ಮಾಡಲಾಗುತ್ತದೆ ಎಂದು ನಿಗಮ ಹೇಳಿತ್ತು. ಇದರಿಂದ, ಪೀಣ್ಯದ ಬಸವೇಶ್ವರ ನಿಲ್ದಾಣಕ್ಕೆ 62 ಮಾರ್ಗಗಳನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬರಲಾಗಿತ್ತು.
ಆದರೆ, ನಿಗಮ ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಲದ ಹಿನ್ನಲೆಯಲ್ಲಿ, ಮುಂದಿನ ಆದೇಶದವರೆಗೆ ಮೆಜಿಸ್ಟಿಕ್ ಭಾಗದಿಂದಲೇ ಕಾರ್ಯನಿರ್ವಹಿಲಾಗುವುದು ಎಂದು ಕೆಎಸ್ ಆರ್ ಟಿಸಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.












Click it and Unblock the Notifications