KSPCB ಅಧ್ಯಕ್ಷ ಹುದ್ದೆ ಡೀಲ್: ಯಡಿಯೂರಪ್ಪ ವಿರುದ್ದ ಎಸಿಬಿಗೆ ದೂರು
ಬೆಂಗಳೂರು,ಜು.15: ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KSPCB)ಯ ಅಧ್ಯಕ್ಷ ಹುದ್ದೆಯನ್ನು ಲಂಚಕ್ಕೆ ಪರಭಾರೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಕೆಯಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ. ಎಂ. ಸುಧೀಂದ್ರರಾವ್ ಸುದ್ದಿವಾಹಿನಿಗೆ ನೀಡಿರುವ ಹೇಳಿಕೆ ಆಧರಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ತನಿಖೆ ನಡೆಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ದೂರಿನಲ್ಲಿ ಕೋರಿದ್ದಾರೆ.
ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆ ನೀಡಲು ತಮ್ಮ ಬಳಿ 16 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 9.75 ಕೋಟಿ ರೂ. ಪಡೆದಿದ್ದರು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಎಂ. ಸುಧೀಂದ್ರರಾವ್ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು. ಈ ಕುರಿತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದೇನೆ. ಕಾಲಮಿತಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಕೇಸು ದಾಖಲಿಸಿಕೊಳ್ಳದೇ ಇದ್ದಲ್ಲಿ, ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ದೂರುದಾರ ಟಿ.ಜೆ. ಅಬ್ರಹಾಂ "ಒನ್ಇಂಡಿಯಾ ಕನ್ನಡ"ಕ್ಕೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಅಳಿಯ ಸಂಜಯ್ ಶ್ರೀ, ಮೊಮ್ಮಗ ಶಶಿಧರ್ ಮರಡಿ, ಯಡಿಯೂರಪ್ಪ ಅವರ ದೂರದ ಸಂಬಂಧಿ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮರಿಸ್ವಾಮಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ. ಎಂ. ಸುಧೀಂದ್ರರಾವ್ ವಿರುದ್ಧ ತನಿಖೆ ಮಾಡಲು ದೂರಿನಲ್ಲಿ ಕೋರಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನಾಗಲು ಕೇಂದ್ರ ಪರಿಸರ ಸಚಿವಾಲಯ ನಿಗದಿಗೊಳಿಸಿದ್ದ ಅರ್ಹತೆಗಳನ್ನು ಹೊಂದಿಲ್ಲದಿದ್ದರೂ ಸುಧೀಂದ್ರರಾವ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಇದಕ್ಕಾಗಿ 16 ಕೋಟಿ ರೂ.ಗೆ ಬೇಡಿಕೆಗೆ ಇಟ್ಟಿದ್ದು, 9.75 ಕೋಟಿ ರೂ. ಪಡೆಯಲಾಗಿದೆ. ಇದಲ್ಲದೇ 60 ಕಂಪನಿಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಪೇಕ್ಷಣಾ ಪತ್ರ ನೀಡಲು ಬಲವಂತವಾಗಿ ಸಹಿ ಹಾಕಿಸಿ 100 ರಿಂದ 120 ಕಡತಗಳಿಗೆ ಸಹಿ ಹಾಕಿಸಿ ಭ್ರಷ್ಟಾಚಾರ ಎಸಗಿದ್ದಾರೆ. ಇದರಲ್ಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ಅಳಿಯ ಸಂಜಯ್ ಶ್ರೀ, ಮೊಮ್ಮಗ ಶಶಿಧರ್ ಮರಡಿ ಶಾಮೀಲಾಗಿದ್ದಾರೆ. ಈ ಕುರಿತು ಮಾಜಿ ಅಧ್ಯಕ್ಷರೇ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಅಬ್ರಹಾಂ ದೂರಿನಲ್ಲಿ ಕೋರಿದ್ದಾರೆ.
Recommended Video
ರಾಮಲಿಂಗಂ ಪ್ರಕರಣ ಹೈಕೋರ್ಟ್ ಮೊರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರು ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿಯಿಂದ ಲಂಚ ಪಡೆದು ಗುತ್ತಿಗೆ ನೀಡಿರುವ ಆರೋಪ ಸಂಬಂಧ ಜನ ಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಶೀಘ್ರದಲ್ಲಿಯೇ ಹೈಕೋರ್ಟ್ ಮೊರೆ ಹೋಗುತ್ತೇನೆ ಎಂದು ದೂರುದಾರ ಟಿ.ಜೆ. ಅಬ್ರಹಾಂ ತಿಳಿಸಿದ್ದಾರೆ. ಯಡಿಯೂರಪ್ಪ ಮತ್ತು ಕುಟುಂಬ ಸದಸ್ಯರ ವಿರುದ್ಧ ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರನ್ನು ಜನ ಪ್ರತಿನಿಧಿಗಳ ನ್ಯಾಯಾಲಯ ರದ್ದು ಮಾಡಿತ್ತು. ಅಭಿಯೋಜನಾ ಮಂಜೂರಾತಿ ನೀಡದ ಹಿನ್ನೆಲೆಯಲ್ಲಿ ರದ್ದು ಮಾಡಿತ್ತು. ರಾಜ್ಯಪಾಲರ ನಡೆಯ ಬಗ್ಗೆಯೇ ದೂರುದಾರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.