Darshan: ಕೊಲೆ ಪ್ರಕರಣ: 'ಮೂರೇ ತಿಂಗಳಲ್ಲಿ ನಟ ದರ್ಶನ್ ಬಿಡುಗಡೆ'
ಬೆಂಗಳೂರು ಜುಲೈ 25: ಚಿತ್ರದುರ್ಗ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಬಂಧನವಾಗಿ ಎರಡು ತಿಂಗಳು ಆಗುತ್ತಾ ಬಂದಿದ್ದು, ಈವರೆಗೂ ಜಾಮೀನು ಅರ್ಜಿ ಸಲ್ಲಿಕೆಯಾಗಿಲ್ಲ. ಕೊಲೆ ಪ್ರಕರಣದಲ್ಲಿ ದರ್ಶನ್ ಎ-೨ ಆರೋಪಿಯಾಗಿದ್ದು, ಸದ್ಯಕ್ಕೆ ದರ್ಶನ್ ಜೈಲಿನಿಂದ ಹೊರಬರುವುದು ಕಷ್ಟ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇತ್ತ ಕುಟುಂಬಸ್ಥರು ದರ್ಶನ್ ಬಿಡುಗಡೆಗೆ ಹರಸಾಹಸ ಪಡುತ್ತಿದ್ದರೆ. ಅತ್ತ ಅಭಿಮಾನಿಗಳು ಮೆಚ್ಚಿನ ನಟ ಯಾವಾಗ ಹೊರಗೆ ಬರುತ್ತಾರೆ ಎಂದು ಕಾಯುತ್ತಿದ್ದಾರೆ. ದರ್ಶನ್ ಬಿಡುಗಡೆಗಾಗಿ ಅಭಿಮಾನಿಗಳು ಪೂಜೆ-ವ್ರತಾ ಸೇರಿದಂತೆ ದೇವರ ಮೊರೆ ಹೋಗುತ್ತಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯ ದರ್ಶನ್ ಅಭಿಮಾನಿಗಳಿಗೆ ದರ್ಶನ್ ಬಿಡುಗಡೆಗೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊಪ್ಪಳದ ಜನರು ನಂಬಿಕೆ ಇಟ್ಟಿರುವ ದೇವರು ದರ್ಶನ್ ಹೊರಗೆ ಬರುವ ಬಗ್ಗೆ ಭಕ್ತರಿಗೆ ಅಭಯ ನೀಡಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ 10ನೇ ವಾರ್ಡಿನಲ್ಲಿ ಇರಿಸಲಾಗಿದ್ದ ಕೌಡೇಪಿರ ಲಾಲಸಾಬ ದೇವರು ನಟ ದರ್ಶನ್ ಬಿಡುಗಡೆಗೆ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದರ್ಶನ್ ಅಭಿಮಾನಿಗಳು ನಟನ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆಯನ್ನು ದೇವರ ಮುಂದಿಟ್ಟಿದ್ದರು. ಈ ಪ್ರಶ್ನೆಗೆ 'ಮೂರೇ ತಿಂಗಳಲ್ಲಿ ದರ್ಶನ್ ಹೊರಕ್ಕೆ ಬರುತ್ತಾರೆ' ಎಂದು ದೇವರು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.
ಮೊಹರಂ ಸಂದರ್ಭದಲ್ಲಿ ಕೌಡೇಪಿರ ಲಾಲಸಾಬ ದೇವರನ್ನು ಕೂರಿಸುವ ಪದ್ಧತಿ ಮುಸ್ಲಿಂ ಧರ್ಮದಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಕೌಡೇಪಿರ ಲಾಲಸಾಬ ದೇವರು ದರ್ಶನ್ ಬಗ್ಗೆ ಉತ್ತರಿಸಿದ್ದಾರೆ. ಆದರೆ, ಮತ್ತೊಂದು ಅಲಾಹಿ ದೇವರು ದರ್ಶನ್ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿಲ್ಲ ಎಂದು ತಿಳಿದುಬಂದಿದೆ.
ಇನ್ನು ಈ ಹಿಂದೆ 2019ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಂದಿನ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ ಶಿವಕುಮಾರ್ ಅವರ ಬಂಧನವಾಗಿತ್ತು. ಆ ಸಂದರ್ಭದಲ್ಲೂ ಕೌಡೇಪಿರ ಲಾಲಸಾಬ ದೇವರು ಡಿ.ಕೆ ಶಿವಕುಮಾರ್ ಬಿಡುಗಡೆ ಬಗ್ಗೆ ಭವಿಷ್ಯ ನುಡಿದಿತ್ತು. ಆ ಭವಿಷ್ಯ ಅಂದಿಗೆ ನಿಜವಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ದರ್ಶನ್ ಬಿಡುಗಡೆ ಖಚಿತವೆಂದು ಅಭಿಮಾನಿಗಳು ಸಂಸತ ವ್ಯಕ್ತಪಡಿಸಿದ್ದಾರೆ.












Click it and Unblock the Notifications