ಬೆಂಗಳೂರು ಬಳಿ 'ನಾಲೆಡ್ಜ್ ಹೆಲ್ತ್ ಇನ್ನೋವೇಶನ್ ಅಂಡ್ ರೀಸರ್ಚ್' ಸಿಟಿ ಸ್ಥಾಪನೆ ಶೀಘ್ರ
ಬೆಂಗಳೂರು, ಸೆಪ್ಟಂಬರ್ 01: ಬೆಂಗಳೂರಿನ ಹೊರವಲಯದಲ್ಲಿ ಸುಮಾರು 2000 ಎಕರೆ ಪ್ರದೇಶದಲ್ಲಿ 'ನಾಲೆಡ್ಜ್-ಹೆಲ್ತ್- ಇನ್ನೋವೇಶನ್ ಅಂಡ್ ರೀಸರ್ಚ್'ಸಿಟಿ ಸ್ಥಾಪಿಸುವ ಉದ್ದೇಶ ಸರ್ಕಾರ ಹೊಂದಿದೆ. ಈ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದ ಸಂದರ್ಭದಲ್ಲಿ ಇಲಾಖೆಯ ಸಾಧನೆಗಳು, ಕೈಗೊಂಡಿರುವ ಪ್ರಮುಖ ಕ್ರಮಗಳ ಬಗ್ಗೆ ಮಾಹಿತಿ ನೀಡಲು ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

ಬೆಂಗಳೂರು ಹೊರವಲಯದಲ್ಲಿ ಸುಮಾರು 2000 ಎಕರೆ ಪ್ರದೇಶದಲ್ಲಿ 'ನಾಲೆಡ್ಜ್ -ಹೆಲ್ತ್- ಇನ್ನೋವೇಶನ್ ಅಂಡ್ ರೀಸರ್ಚ್' ಸಿಟಿ ಸ್ಥಾಪಿಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ 1000 ಎಕರೆ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಸಿಟಿಯಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯ, ಆಸ್ಪತ್ರೆ, ಆವಿಷ್ಕಾರ- ಸಂಶೋಧನಾ ಕೇಂದ್ರಗಳಿರಲಿವೆ. ಈ ಯೋಜನೆ ಜಾಗತಿಕ ವಲಯದಲ್ಲಿ ಬೆಂಗಳೂರಿನ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಸಂದೇಹವಿಲ್ಲ," ಎಂದು ಅವರು ಹೇಳಿದರು.
ಕೈಗಾರಿಕಾ ಮೂಲ ಸೌಕರ್ಯ ಸುಧಾರಣೆ
ಕೈಗಾರಿಕಾ ಪ್ರದೇಶಗಳ ಮೂಲ ಸೌಕರ್ಯಗಳ ಸುಧಾರಣೆಗಾಗಿ ನಾವು ಮತ್ತೊಂದು ದಿಟ್ಟ ಹೆಜ್ಜೆ ಇಡುತ್ತಿದ್ದೇವೆ. ಸ್ಥಳೀಯ ಕೈಗಾರಿಕಾ ಅಸೋಸಿಯೇಷನ್ಗಳಿಗೆ ಪ್ರದೇಶದ ನಿರ್ವಹಣೆಯ ಜವಾಬ್ದಾರಿ ವಹಿಸಲಾಗುವುದು. ಇದರಿಂದ ಮೂಲ ಸೌಕರ್ಯದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ಮತ್ತು ಉದ್ಯಮಗಳ ನಡುವಿನ ಅಂತರವನ್ನು ನೀಗಿಸುವ ನಿಟಿನಲ್ಲಿ ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಸಂವಾದ ಪ್ರಾರಂಭಿಸಿದ್ದೇನೆ. ಸ್ಟಾರ್ಟ್ಅಪ್ಗಳಿಂದ ಆರಂಭಿಸಿ ಸಂಘಟಿತ ಸಂಸ್ಥೆಗಳವರೆಗೆ, ಏರೋಸ್ಪೇಸ್ನಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರ ಜತೆ ಮಾತುಕತೆ ಸಾಗಿದೆ. ಇದಲ್ಲದೇ ನೆದರ್ಲ್ಯಾಂಡ್ಸ್, ಜರ್ಮನಿ, ತೈವಾನ್ ಮತ್ತು ಇಸ್ರೇಲ್ನ ರಾಜತಾಂತ್ರಿಕರೊಂದಿಗೂ ಸಂವಾದ ನಡೆಯುತ್ತಿದ್ದು, ಈ ಮೂಲಕ ಕೈಗಾರಿಕಾ ಪರಿಸರಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಕೆಲಸ ಆಗುತ್ತಿದೆ ಎಂದು ಅವರು ವಿವರಿಸಿದರು.
ಹೊಸ ಕೈಗಾರಿಕೆ ನೀತಿ ರಚನೆ
ರಾಜ್ಯ ಸರ್ಕಾರವು 'ಹೊಸ ಕೈಗಾರಿಕಾ ನೀತಿ' ರಚಿಸಲು ಮುಂದಾಗಿದ್ದು, ಇದರಲ್ಲಿ ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಎಲೆಕ್ಟ್ರಿಕ್ ವೆಹಿಕಲ್ ಮತ್ತು ವೇರ್ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಈಗಾಗಲೇ ಕರಡು ರೂಪುಗೊಂಡಿವೆ. ಸದ್ಯ ಇತರ ರಾಜ್ಯಗಳ ಕೈಗಾರಿಕಾ ನೀತಿಯ ಅಧ್ಯಯನ ನಡೆಯುತ್ತಿದೆ. ಶೀಘ್ರದಲ್ಲೇ ಪ್ರಗತಿಪರ ನೀತಿಯನ್ನು ಹೊರತರಲಿದ್ದೇವೆ. ಜತೆಗೆ, ಆಕರ್ಷಕ ಪ್ರೋತ್ಸಾಹಕ ಪ್ಯಾಕೇಜ್ಗಳನ್ನು ಘೋಷಿಸಲಿದ್ದೇವೆ ಎಂದು ತಿಳಿಸಿದರು.
'ಇನ್ವೆಸ್ಟ್ ಕರ್ನಾಟಕ'ವೇದಿಕೆ ಪುನಾರಚನೆ
ರಾಜ್ಯದಲ್ಲಿ ಸದೃಢ ಕೈಗಾರಿಕಾ ಪರಿಸರ ಸೃಷ್ಟಿ ಜತೆಗೆ ಬಂಡವಾಳ ಆಕರ್ಷಣೆಗೆ 'ಇನ್ವೆಸ್ಟ್ ಕರ್ನಾಟಕ' ವೇದಿಕೆಯನ್ನು ಪುನಾರಚಿಸಲಾಗುತ್ತಿದೆ. ಉದ್ಯಮದ ದಿಗ್ಗಜರು ಈ ಮಂಡಳಿಯ ಭಾಗವಾಗಿದ್ದಾರೆ. ವೆಂಚರ್ ಕ್ಯಾಪಿಟಲ್, ಪ್ರೈವೇಟ್ ಇಕ್ವಿಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ವಿವಿಧ ವಲಯಗಳ ಅನುಭವಿಗಳನ್ನು ಒಳಗೊಂಡ 'ಕಾರ್ಯತಂತ್ರ ಹೂಡಿಕೆ ಸಮಿತಿ' ರಚಿಸಲಾಗಿದೆ.
ಕೈಗಾರಿಕಾ ಸುಲಲಿತ ವ್ಯವಹಾರಕ್ಕೆ ಅನುವು ಮಾಡಲು ಅತ್ಯಾಧುನಿಕ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸುವ ಕೆಲಸ ಆಗುತ್ತಿದೆ. ಈ ಸಂಬಂಧ ಹಲವಾರು ಸುತ್ತಿನ ಚರ್ಚೆಗಳು ನೆಡೆದಿದ್ದು, ಶೀಘ್ರದಲ್ಲೇ ಕ್ರಮ ವಹಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications