Get Updates
Get notified of breaking news, exclusive insights, and must-see stories!

ದಲಿತ ಚಳವಳಿಯ ಮೊದಲ ಪೂರ್ಣಾವಧಿ ಕಾರ್ಯಕರ್ತ ರಾಮದೇವ ರಾಕೆ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು, ಏಪ್ರಿಲ್ 12: ಕರ್ನಾಟಕದ ದಲಿತ ಚಳುವಳಿ ಮತ್ತು ಪತ್ರಿಕೋದ್ಯಮದ ಇತಿಹಾಸ ಯಾವತ್ತೂ ಮರೆಯಬಾರದ ಹೆಸರು. ಆದರೆ ಕರ್ನಾಟಕದ ದಲಿತ ಚಳುವಳಿಯ ಇತಿಹಾಸದ ಕುರಿತ ಬರವಣಿಗೆಗಳು ಮತ್ತು ಚರ್ಚೆಗಳೆಲ್ಲ ಕೆಲವು ಹೆಸರುಗಳ ಸುತ್ತಲೇ ಸುತ್ತುತ್ತದೆ. ಇದಕ್ಕೆ ಕಾರಣ ದಸಂಸದ ಹುಟ್ಟಿಗೆ ಕಾರಣರಾದ ಹಲವರು ಸಾಹಿತ್ಯ ಲೋಕದ ತಾರೆಗಳಾಗಿದ್ದದ್ದು.

ದಸಂಸದ ಹುಟ್ಟು ಬೆಳವಣಿಗೆಗೆ ಸಾಹಿತಿಗಳ ಕೊಡುಗೆ ಅಪಾರವಾಗಿದ್ದರೂ ಚಳವಳಿಯನ್ನು ಕೇವಲ ವ್ಯಕ್ತಿ ಕೇಂದ್ರಿತ ದೃಷ್ಟಿಕೋನದಿಂದ ನೋಡುವುದು ಇತಿಹಾಸ ಮತ್ತು ವರ್ತಮಾನ ಎರಡಕ್ಕೂ ಮಾಡುವ ಅಪಮಾನ. ಯಾವುದೇ ಜನಚಳುವಳಿ ವ್ಯಕ್ತಿ ಕೇಂದ್ರಿತವಾಗಿ ಉಳಿಯುವುದಿಲ್ಲ. ಕರ್ನಾಟಕದ ದಲಿತ ಚಳವಳಿಗೆ ಅಪಾರವಾದ ಕೊಡುಗೆಯನ್ನು ಕೊಟ್ಟರೂ ಮರೆಯಲ್ಲೆ ಉಳಿದ ಹಲವಾರು ಜನ ಹಿರಿಯರಿದ್ದಾರೆ ಅಂತವರಲ್ಲಿ ಬಹಳ ಮುಖ್ಯರು ರಾಮದೇವ ರಾಕೆ.

Know about First full-time worker of the Dalit movement: Ramadeva Rake

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಾನವಾಡಿ ಗ್ರಾಮದ ಶಿಕ್ಷಕರ ಮಗನಾಗಿ ಜನಿಸಿದ ರಾಕೆಯವರು ಬಾಲ್ಯದಲ್ಲಿ ಬಡತನವನ್ನಾಗಲೀ, ಅಸ್ಪೃಶ್ಯತೆಯ ನೋವನ್ನಾಗಲೀ ನೇರವಾಗಿ ಉಂಡವರಲ್ಲ. ಹಳೆ ಮೈಸೂರು ಪ್ರಾಂತ್ಯದಲ್ಲಿ ವಸಾಹತುಶಾಹಿಯ ಕಾಲದಲ್ಲೆ ದಲಿತರಿಗೆ ಶಿಕ್ಷಣ ದೊರೆತಿದ್ದರಿಂದ ಇವರ ತಂದೆ ಶಿಕ್ಷಕರಾಗುವುದಕ್ಕೆ ಸಾಧ್ಯವಾಗಿತ್ತು. ಶಿಕ್ಷಕರಾಗಿದ್ದ ತಂದೆ, ಬಿಎಸ್ಸಿ ಪದವೀಧರರಾಗಿದ್ದ ಅಣ್ಣ ಮನೆಯಲ್ಲಿ ಓದಿಗೆ ಬೇಕಾದ ವಾತಾವರಣ ಕಲ್ಪಿಸಿಕೊಟ್ಟಿದ್ದರು.

ಹುಟ್ಟೂರು ಹಾನವಾಡಿ ಮತ್ತು ಮಂಡ್ಯದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಹೈಸ್ಕೂಲು, ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ಬಾಬಾಸಾಹೇಬರ ಪ್ರೇರಣೆಯಿಂದ ಓದುವ ಆಸಕ್ತಿಯನ್ನು ಬೆಳೆಸಿಕೊಂಡ ರಾಕೆ ಜಗತ್ತಿನ ಸಾಹಿತ್ಯ, ರಾಜಕೀಯ ಸಿದ್ದಾಂತಗಳನ್ನು ಓದಿಕೊಂಡು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಂಡರು. ಮೈಸೂರಿನಲ್ಲಿ ಓದುವಾಗ ತಂಗಿದ್ದ ಸಿದ್ಧಾರ್ಥ ಹಾಸ್ಟೆಲ್‌ ಇವರ ಸಾಮಾಜಿಕ ಜೀವನಕ್ಕೆ ಹೊಸ ತಿರುವು ನೀಡಿತು.

ಎಪ್ಪತ್ತರ ದಶಕದ ಕರ್ನಾಟಕಕ್ಕೆ ಹಲವು ತಿರುವುಗಳನ್ನು ಕೊಟ್ಟ ಸಮಾಜವಾದಿ ಯುವಜನ ಸಭಾದಲ್ಲಿ ಸಕ್ರಿಯರಾಗಿದ್ದ ರಾಕೆ ಮೈಸೂರಿನಲ್ಲಿ ನಡೆದ 'ಜಾತಿವಿನಾಶ ಸಮ್ಮೇಳನ', ಅಬ್ರಾಹ್ಮಣ ಬರಹಗಾರರು ಆಯೋಜಿಸಿದ್ದ 'ಬರಹಗಾರರು ಕಲಾವಿದರ ಒಕ್ಕೂಟ'ದ ಸಮ್ಮೇಳನಗಳಲ್ಲಿ ಭಾಗವಹಿಸಿದರು. ಮುಂದೆ ದೇವರಾಜ ಅರಸರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಬಿ. ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದ ಬಗ್ಗೆ ನೀಡಿದ ಹೇಳಿಕೆಯೊಂದರಿಂದ ಶುರುವಾದ 'ಬೂಸಾ ಚಳುವಳಿ'ಯಲ್ಲಿ ಭಾಗವಹಿಸಿದರು.

Know about First full-time worker of the Dalit movement: Ramadeva Rake

ಆ ಸಮಯದಲ್ಲಿ ಸಮಾಜವಾದಿ ಚಳವಳಿಯ ಮುಖವಾಣಿಯಂತೆ ಬರುತ್ತಿದ್ದ ರಾಜಶೇಖರ ಕೋಟಿಯವರ 'ಆಂದೋಲನ' ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. 'ಆಂದೋಲನ'ದಂತಹ ಮುಖ್ಯವಾಹಿನಿಯ ಪತ್ರಿಕೆಗಳು ದಲಿತರಿಗೆ ಸಂಬಂಧಿಸಿದ ಸುದ್ದಿಗಳಿಗೆ ಜಾಗ ಕೊಡುವುದು ಸಾಧ್ಯವಿಲ್ಲ ಎನಿಸಿದಾಗ ದಲಿತರಿಗಾಗಿಯೇ ಒಂದು ಪತ್ರಿಕೆ ಮಾಡಬೇಕು ಎಂದು ಮುಂದಾದ ಹೊಸ ತಲೆಮಾರಿನ ಪ್ರಯತ್ನವಾಗಿ 'ಶೋಷಿತ' ಪತ್ರಿಕೆ ಶುರುವಾಯಿತು. ಮುಂದೆ 'ಶೋಷಿತ' 'ಪಂಚಮ' ಆಗಿ ಬದಲಾಯಿತು. 'ಪಂಚಮ' ಸಂಪಾದಕರಾಗಿ ರಾಮದೇವ ರಾಕೆ ಮತ್ತು ಪ್ರಕಾಶಕರಾಗಿ ಎಚ್.ಗೋವಿಂದಯ್ಯ ಜವಾಬ್ದಾರಿ ವಹಿಸಿಕೊಂಡರೆ ಸಾಹಿತಿ ದೇವನೂರು ಮಹಾದೇವ ಪತ್ರಿಕೆಯ ಬೆನ್ನಿಗೆ ನಿಂತರು.

*ದಲಿತ ಸಮುದಾಯದ ದನಿ ಪಂಚಮ*

'ಪಂಚಮ' ಪತ್ರಿಕೆ ಇಡಿ ರಾಜ್ಯದ ದಲಿತ ಸಮುದಾಯದ ದನಿಯಾಗಿ ಮೂಡಿಬರತೊಗಿತು. ಸಮಾಜವಾದಿ ಚಳುವಳಿ, ಬರಹಗಾರರ ಒಕ್ಕೂಟ ದಲಿತರು ಮತ್ತು ಜಾತಿಯ ಪ್ರಶ್ನೆಯನ್ನು ಸರಿಯಾದ ರೀತಿಯಲ್ಲಿ ಎತ್ತಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ಸಮಾಜವಾದಿ ಯುವಜನ ಸಭಾ ಮತ್ತು ಬರಹಗಾರರ ಒಕ್ಕೂಟದಲ್ಲಿ ಇದ್ದ ಪ್ರೊ‌.ಬಿಕೆ, ದೇವನೂರು ಮಹಾದೇವ, ಇಂಧೂದರ ಹೊನ್ನಾಪುರ, ಎಚ್. ಗೋವಿಂದಯ್ಯ ಶಿವಾಜಿ ಗಣೇಶನ್, ಕೆ.ಬಿ.ಸಿದ್ದಯ್ಯ, ಶ್ರೀಧರ ಕಲಿವೀರ, ಚಂದ್ರಪ್ರಸಾದ್ ತ್ಯಾಗಿ, ಕೆ.ರಾಮಯ್ಯ ಮುಂತಾದ ದಲಿತ ಲೇಖಕರು ಸೇರಿ 'ದಲಿತ ಲೇಖಕರು ಕಲಾವಿದರ ಯುವ ಸಂಘಟನೆ' ಆರಂಭಿಸಿದರು.

ದಲೇಕಯುಸಂನಲ್ಲಿ ಸಕ್ರಿಯರಾಗಿದ್ದ ರಾಕೆ ಮುಂದೆ ಭದ್ರಾವತಿಯಲ್ಲಿ ಇಡೀ ರಾಜ್ಯದ ದಲಿತರ ಸಂಘಟನೆಯಾಗಿ ಶುರುವಾದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾದರು. ರಾಕೆಯವರ ಪ್ರಕಾರ ಬೂಸಾ ಚಳುವಳಿ ರಾಜ್ಯದ ದಲಿತ ಪ್ರಜ್ಞೆಯನ್ನು ಎಚ್ಚರಿಸಿದರೆ 'ಪಂಚಮ ಪತ್ರಿಕೆ' ಆ ಪ್ರಜ್ಞೆಯನ್ನು ಒಂದು ವೇದಿಕೆಗೆ ತರುವುದಕ್ಕೆ ಕಾರಣವಾಯಿತು. ದಸಂಸ ಮುಖವಾಣಿಯಾಗಿ 'ಪಂಚಮ' ಚಳುವಳಿಗೆ ಬೇಕಾದ ಬೌದ್ದಿಕ ಸತ್ವವನ್ನು ಪೂರೈಸತೊಡಗಿತು.

ಇಡಿ ದೇಶದಲ್ಲಿ ದಲಿತರ ಮೇಲಾಗುತ್ತಿದ್ದ ದೌರ್ಜನ್ಯಗಳ ಕುರಿತು ಪಂಚಮ ತರುತ್ತಿದ್ದ ವರದಿಗಳು. ಜಗತ್ತಿನ ಬೇರೆ ಬೇರೆ ದೇಶಗಳ ವಿಮೋಚನಾ ಚಳುವಳಿಗಳು, ವಿಮೋಚನಾ ಸಾಹಿತ್ಯಗಳ ಕುರಿತ ಬರಹಗಳು 'ಪಂಚಮ'ದ ಮೂಲಕ ಕನ್ನಡಕ್ಕೆ ಬರತೊಡಗಿದವು. ಮುಖ್ಯವಾಹಿನಿ ಪತ್ರಿಕೋದ್ಯಮಕ್ಕೆ ಬೇಡವಾಗಿದ್ದ ತಳಸಮುದಾಯದ ಪ್ರಶ್ನೆಗಳನ್ನು ಪಂಚಮ ಎತ್ತುತ್ತಿತ್ತು. ಅದರ ಸಂಪಾದಕರಾಗಿ ಬಹಳ ವರ್ಷ ರಾಮದೇವ ರಾಕೆಯವರು ಪತ್ರಿಕೆಯನ್ನು ಮುನ್ನಡೆಸಿದರು. 'ಪಂಚಮ'ದ ಸಂಪಾದಕರಾಗಿ, ದಲಿತ ಕಲಾ ಮಂಡಲಿಯ ಸಂಚಾಲಕರಾಗಿ, ದಸಂಸದ ಕಾರ್ಯಕರ್ತನಾಗಿ ರಾಮದೇವ ರಾಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯನವರ ಪ್ರಕಾರ ಕರ್ನಾಟಕದ ದಲಿತ ಚಳುವಳಿಯ ಮೊದಲ ಪೂರ್ಣಾವಧಿ ಕಾರ್ಯಕರ್ತ ಅಂತ ಕರೆಯುವುದಾದರೆ ಅದು ರಾಮದೇವ ರಾಕೆ. ಪಂಚಮ ಪತ್ರಿಕೆಯ ವರದಿಗಳು, ಲೇಖನಗಳು, ವಿಶ್ಲೇಷಣಾ ಬರಹಗಳನ್ನು ಇಂದು ಓದಿದಾದ ಹಲವಾರು ಪಿಎಚ್ಡಿ ಪದವಿಗಳಿಗೆ ವಸ್ತುವಾಗಬಲ್ಲ ವಿಷಯಗಳನ್ನು ಹೋರಾಟದಲ್ಲಿದ್ದವರು ಎಷ್ಟು ಸಹಜವಾಗಿ, ಅರ್ಥಪೂರ್ಣವಾಗಿ ಬರೆದಿದ್ದಾರೆ ಅನ್ನಿಸುತ್ತದೆ.

'ಪಂಚಮ'ದ ಪ್ರತಿ ಸಂಚಿಕೆಯ ಹಿಂದೆ ಇರುವ ಕತೆಗಳು ಬೇರಯೇ ಚರಿತ್ರೆಯನ್ನು ಹೇಳುತ್ತವೆ. ಪಂಚಮದ ಪ್ರತಿ ಸಂಚಿಕೆಯೂ ಒಂದು ಪಠ್ಯವಾಗಿ ಕಾಣಿಸುತ್ತವೆ. ಬರವಣಿಗೆಯ ಜೊತೆಗೆ ಕಲಾವಿದರೂ ಆಗಿರುವ ರಾಕೆ ಪಂಚಮ ಪತ್ರಿಕೆ ರೂಪಿಸುವುದರ ಜೊತೆಗೆ ಪತ್ರೆಸಂಗಪ್ಪ, ಶೇಷಗಿರಿಯಪ್ಪ ಪ್ರಕರಣಗಳಂತಹ ದಲಿತ ಚಳುವಳಿ ರೂಪಿಸುತ್ತಿದ್ದ ಹೋರಾಟಗಳಿಗೆ ಬೀದಿ ನಾಟಕಗಳನ್ನೂ ಬರೆದಿದ್ದಾರೆ.

ಮುಂದೆ 1982ರಲ್ಲಿ ಪ್ರಜಾವಾಣಿ ಪತ್ರಿಕೆಗೆ ಸೇರಿ ಬಳ್ಳಾರಿ, ಮಂಡ್ಯ ಸೇರಿದಂತೆ ಹಲವು ಕಡೆ ಕೆಲಸ ಮಾಡಿ 2012 ರಲ್ಲಿ ನಿವೃತ್ತರಾಗಿದ್ದಾರೆ. ದಲಿತ ಚಳುವಳಿ ರೂಪಿಸಿದ ಭೂ ಹೋರಾಟಗಳು, ದಲಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ನಡೆದ ಹೋರಾಟ, ಜಾಥಾಗಳ ಕುರಿತು ನಿಖರವಾಗಿ‌ ಮಾತನಾಡಬಲ್ಲ ರಾಕೆಯವರು ದಲಿತ ಚಳವಳಿಯ ಇತಿಹಾಸದ ಕುರಿತು ಬಂದಿರುವ ಬರವಣಿಗೆಗಳ ಪೊಳ್ಳುತನಗಳ ಬಗ್ಗೆ ಸಿಟ್ಟಾಗುತ್ತಾರೆ. ಚಳವಳಿಯನ್ನು ಸಮಗ್ರವಾಗಿ ದಾಖಲಿಸುವ ಸಾಮರ್ಥ್ಯವುಳ್ಳ ಕೆಲವೇ ಕೆಲವು ಹಿರಿಯರಲ್ಲಿ ರಾಕೆಯವರು ಬಹುಮುಖ್ಯರು.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ತಿಂಗಳಿನಲ್ಲಿ ಬಾಬಾಸಾಹೇಬರ ಆಶಯವನ್ನು ಜಾರಿಗೊಳಿಸುವುದಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರ ಕುರಿತು ದೇಶದೆಲ್ಲೆಡೆ #DalitHistoryMonth ನೆಪದಲ್ಲಿ ದಲಿತ ಇತಿಹಾಸದ‌ ದಾಖಲೀಕರಣ ನಡೆಯುತ್ತಿದೆ. ಅದೇ ದಾರಿಯಲ್ಲಿ ಕರ್ನಾಟಕದ ಹಿರಿಯ ದಲಿತ ಚಳವಳಿಗಾರ ಮತ್ತು ಪರ್ತಕರ್ತ ರಾಮದೇವ ರಾಕೆಯವರೊಂದಿಗೆ ಮಾತು, ಚರ್ಚೆ, ಸಂವಾದ ನಡೆಸುವ ಕಾರ್ಯಕ್ರಮವೇ 'ಹೆಜ್ಜೆ'.

ಕರ್ನಾಟಕದ ದಲಿತ ಚಳುವಳಿಯ ಮೊದಲ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿದ ರಾಮದೇವ ರಾಕೆ ತಾವು ಕಂಡ ಚಳವಳಿಯ ದಿನಗಳನ್ನು, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ 'ಪಂಚಮ‌' ಪತ್ರಿಕೆ ಸೃಷ್ಟಿಸಿದ ಸಂಚಲನದ ಇತಿಹಾಸವನ್ನು ಕುರಿತು ರಾಮದೇವ ರಾಕೆ ಏಪ್ರಿಲ್‌ 14ರಂದು ಸಂಜೆ 'ಜಂಗಮ ಕಲೆಕ್ಟಿವ್'ನಲ್ಲಿ ಅಂಬೇಡ್ಕರ್ ಹುಟ್ಟುಹಬ್ಬದ ದಿನದ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

(ಬರಹಗಾರರು: ವಿ.ಎಲ್.ನರಸಿಂಹಮೂರ್ತಿ, ಉಪನ್ಯಾಸಕರು)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+