ಕೊನೆಗೂ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ
ಬೆಂಗಳೂರು, ಡಿಸೆಂಬರ್ 25: ಬಹಳ ಚರ್ಚೆ, ಟೀಕೆಯ ಬಳಿಕ ಕೆಎಂಎಫ್ ತನ್ನ 'ನಂದಿನಿ' ಬ್ರಾಂಡ್ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನವೆಂಬರ್ನಲ್ಲಿಯೇ ಈ ಉತ್ಪನ್ನ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಬಳಿಕ ಸದ್ಯಕ್ಕೆ ಉತ್ಪನ್ನ ಬಿಡುಗಡೆ ಮಾಡುವುದಿಲ್ಲ ಎಂದು ಕೆಎಂಎಫ್ ಹೇಳಿತ್ತು.
ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 'ನಂದಿನಿ' ವತಿಯಿಂದ ಪ್ರಥಮ ಬಾರಿಗೆ ತಯಾರಿಸಿರುವ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ವೆಂಕಟೇಶ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸದ್ಯಕ್ಕೆ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ಬೆಂಗಳೂರು ನಗರದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಗರದಲ್ಲಿ ದೋಸೆ, ಇಡ್ಲಿ ಹಿಟ್ಟು ಮಾರಾಟದ ಪ್ಯಾಕಿಂಗ್ ಮಾಡಲು ಪ್ರತ್ಯೇಕ ಘಟಕವನ್ನು ಕೆಎಂಎಫ್ ಆರಂಭಿಸಿದ್ದು, ಇಲ್ಲಿಂದಲೇ ನಗರದ ಉಳಿದ ಕಡೆ ಸರಬರಾಜು ಆಗುತ್ತದೆ.
ನಂದಿನಿ ಇಡ್ಲಿ, ದೋಸೆ ಹಿಟ್ಟು ದರ: ಬೆಂಗಳೂರು ನಗರದಲ್ಲಿ ಮಾತ್ರ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಯಲ್ಲಿ ಲಭ್ಯವಿದೆ. ಎರಡು ಮಾದರಿ ಪ್ಯಾಕ್ಗಳಲ್ಲಿ ಈ ಉತ್ಪನ್ನ ಮಾರುಕಟ್ಟೆಗೆ ಬಂದಿದೆ.
450 ಗ್ರಾಂ ಪ್ಯಾಕ್ಗೆ 40 ರೂ. ಮತ್ತು 900 ಗ್ರಾಮ ಪ್ಯಾಕ್ಗೆ 80 ರೂ. ದರವನ್ನು ನಿಗದಿ ಮಾಡಲಾಗಿದೆ. ಈ ಉತ್ಪನ್ನಕ್ಕೆ ಜನರ ಪ್ರತಿಕ್ರಿಯೆಯ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಇತರ ನಗರ, ಪಟ್ಟಣದಲ್ಲಿಯೂ ಇದನ್ನು ಮಾರಾಟ ಮಾಡಲಾಗುತ್ತದೆ ಎಂದು ಕೆಎಂಎಫ್ ಹೇಳಿದೆ.
ಈಗಾಗಲೇ ವಿಶ್ವಮಟ್ಟದಲ್ಲಿ 'ನಂದಿನಿ' ಬ್ರಾಂಡ್ ಹೆಸರುಗಳಿಸಿದೆ. ಕರ್ನಾಟಕ ಮಾತ್ರವಲ್ಲ ವಿವಿಧ ರಾಜ್ಯಗಳು, ದುಬೈನಲ್ಲಿನಲ್ಲಿ ಕೆಎಂಎಫ್ನ ಮಳಿಗೆಗಳಿದ್ದು, ನಂದಿನಿ ಹಾಲು, ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
ಖಾಸಗಿ ಕಂಪನಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಇಡ್ಲಿ, ದೋಸೆ ಹಿಟ್ಟನ್ನು ಮಾರಾಟ ಮಾಡುತ್ತಿವೆ. ಇದಕ್ಕೆ ಪೈಪೋಟಿ ನೀಡಲು ಕೆಎಂಎಫ್ ನಂದಿನಿ ಬ್ರಾಂಡ್ ದೋಸೆ, ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ತಂದಿದೆ. ನವೆಂಬರ್ನಲ್ಲಿಯೇ ಕೆಎಂಎಫ್ ನಂದಿನಿ ದೋಸೆ, ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಿತ್ತು.
ಆಗ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ. ಕೆ. ಜಗದೀಶ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಕೇರಳ ಮೂಲದ ಖಾಸಗಿ ಕಂಪನಿ ಲಾಬಿಗೆ ಮಣಿದು ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಎಂಎಫ್ ಎಂಡಿ ವರ್ಗಾವಣೆ ಮಾಡಿ, ಇಡ್ಲಿ & ದೋಸೆ ಹಿಟ್ಟು ಬಿಡುಗಡೆಗೆ ತಡೆ ಹಾಕಿದೆ ಎಂದು ಟೀಕಿಸಲಾಗಿತ್ತು.
ಕೆಎಂಎಫ್ ಅಧಿಕಾರಿಗಳ ಪ್ರಕಾರ ಬೆಂಗಳೂರು ನಗರದಲ್ಲಿ ಕೆಲಸದ ಒತ್ತಡವಿದೆ. ಆದ್ದರಿಂದ ಇಲ್ಲಿ ರೆಡಿ ಟು ಈಟ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ಖಾಸಗಿ ಕಂಪನಿಗಳ ಮಾದರಿಯಲ್ಲಿ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಗೆ ತರಲಾಗಿದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಬೇರೆ ನಗರಕ್ಕೂ ವ್ಯಾಪಾರ ವಿಸ್ತರಣೆ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ನಗರದಲ್ಲಿ ಪ್ರತಿದಿನ 10 ರಿಂದ 20 ಸಾವಿರ ಕೆಜಿ ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿಯೇ ಜಯನಗರದಲ್ಲಿ ಪ್ಯಾಕಿಂಗ್ ಘಟಕವನ್ನು ಕೆಎಂಎಫ್ ಆರಂಭಿಸಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಖಾಸಗಿ ಕಂಪನಿಯ ದೋಸೆ, ಇಡ್ಲಿ ಹಿಟ್ಟು ದರಕ್ಕಿಂತ ಕಡಿಮೆ ದರದಲ್ಲಿಯೇ ಉತ್ಪನ್ನವನ್ನು ಕೆಎಂಎಫ್ ಪರಿಚಯಿಸಿದೆ.












Click it and Unblock the Notifications