ಕೋವಿಡ್ ಅಕ್ರಮ: ಮಾಜಿ ಸಚಿವ ಕೆ.ಸುಧಾಕರ್ ಸೇರಿ ಮೂವರ ವಿರುದ್ಧ ದೂರು ದಾಖಲು
ಬೆಂಗಳೂರು, ನವೆಂಬರ್ 09: ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯ ಬಹುಕೋಟಿ ಹಗರಣ ನಡೆದಿದೆ ಎಂದು ತಿಳಿಸಿದ್ದ ಆಮ್ ಆದ್ಮಿ ಪಕ್ಷವು ಕೋವಿಡ್ ಕಾಲದಲ್ಲಿ ಮಂತ್ರಿಯಾಗಿದ್ದ ಬಿಜೆಪಿ ನಾಯಕ ಡಾ.ಕೆ ಸುಧಾಕರ್ ಸೇರಿದಂತೆ ಮೂರು ಜನರ ವಿರುದ್ಧ ದೂರು ದಾಖಲಿಸಿದೆ.
ಬೆಂಗಳೂರಿನ ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷವು ಸುದ್ದಿಗೋಷ್ಠಿಯಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯ 140 ಕೋಟಿ ಬೃಹತ್ ಹಗರಣವನ್ನು ಬಯಲು ಗೆಳೆದಿತ್ತು. ಪ್ರಕರಣದ 330 ಪುಟಗಳ ದಾಖಲೆಯನ್ನು ಎಎಪಿ ಬಹಿರಂಗಪಡಿಸಿದೆ. ಕೋವಿಡ್ ಟೆಸ್ಟ್ ಗಳನ್ನು ಮಾಡಿ ನೂರಾರು ಕೋಟಿ ಅಕ್ರಮ ಅವ್ಯವಹಾರಗಳನ್ನು ನಡೆಸಿದ ಹಗರಣ ಬಯಲು ಮಾಡಿದ್ದ ಪಕ್ಷ ಇದೀಗ ತಪ್ಪಿತಸ್ಥರ ಮೇಲೆ ದೂರು ನೀಡಿದೆ ಎಂದು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಟಿ ನಾಗಣ್ಣ ಅವರು ತಿಳಿಸಿದರು.

ಎಎಪಿ ಪಕ್ಷದ ಕಾನೂನು ಘಟಕವು ಈ ಬೃಹತ್ ಹಗರಣದ ರೂವಾರಿ ಹಾಗೂ ಪ್ರಮುಖ ಆರೋಪಿ ಅಂದಿನ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಸುಧಾಕರ್, ಕಿದ್ವಾಯಿ ಗ್ರಂಥೀ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ.ರಾಮಚಂದ್ರ ಹಾಗೂ ಬಿಎಂಎಸ್ ಸಂಸ್ಥೆಯ ಮಾಲೀಕ ಎಸ್ ಪಿ ರಕ್ಷಿತ್ ರವರ ಮೇಲೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಐಸಿಎಂಆರ್) ದೂರು ಕೊಡಲಾಗಿದೆ ಎಂದು ಅವರು ತಿಳಿಸಿದರು.
ತಪಿತಸ್ಥರ ಆಸ್ತಿ ಮುಟ್ಟುಗೋಲಿಗೆ, ಕ್ರಮಕ್ಕೆ ಆಗ್ರಹ
ಈ ಕೂಡಲೇ ಕಿದ್ವಾಯಿ ಸ್ಮಾರಕ ಗ್ರಂಥಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಆರೋಪಿತ ಬಿಎಂಎಸ್ ಸಂಸ್ಥೆಯ ನಡುವಿನ ಒಪ್ಪಂದ ಪತ್ರ (MOU) ರದ್ದುಗೊಳಿಸಬೇಕು. ಹಗರಣದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಪ್ರಭಾವಿಗಳ ವಿರುದ್ಧ ಕ್ರಿಮಿನಲ್ ಮೊಖದ್ದಮೆಯನ್ನು ದಾಖಲಿಸಲು ಕ್ರಮ ತೆಗೆದುಕೊಳ್ಳಬೇಕು ಮತ್ತು ತಪಿತಸ್ಥರ ಆಸ್ತಿ ಮುಟ್ಟುಗೋಲನ್ನು ಹಾಕಿಕೊಳ್ಳುವ ಮೂಲಕ ಅಕ್ರಮ ನೂರಾರು ಕೋಟಿ ರೂಪಾಯಿಗಳನ್ನು ವಸೂಲು ಮಾಡಬೇಕೆಂದು ದೂರನ್ನು ನೀಡಲಾಗಿದೆ ಎಂದು ಬಿಟಿ ನಾಗಣ್ಣ ತಿಳಿಸಿದರು.
ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಹಾಗೂ ಪಕ್ಷದ ಕಾನೂನು ಘಟಕದ ವಕೀಲರಾದ ಲೋಹಿತ್ ಜಿ.ಹನುಮಪುರ ಮಾತನಾಡಿ, ರಾಜ್ಯದಲ್ಲಿನ ಎಲ್ಲಾ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಗಳ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ರೋಗ ತಪಾಸಣೆ ವಿಭಾಗವನ್ನು ಖಾಸಗಿ ಲ್ಯಾಬೋರೇಟರಿಗಳಿಗೆ ನೀಡಲಾಗಿದೆ.

ಇನ್ನಷ್ಟು ದಾಖಲೆ ಬಿಡುಗಡೆ?
ಖಾಸಗಿಯವರಿಗೆ ನೀಡುವ ಮೂಲಕ ಸಾವಿರಾರು ಕೋಟಿ ತೆರಿಗೆದಾರರ ಹಣವನ್ನು ಲೂಟಿ ಮಾಡುತ್ತಿರುವ ವ್ಯವಸ್ಥೆಯನ್ನು ಸಮಗ್ರವಾಗಿ ದಾಖಲೆಗಳ ಸಮೇತ ಮುಂಬರುವ ದಿವಸಗಳಲ್ಲಿ ಬಹಿರಂಗಗೊಳಿಸಲಾಗುವುದು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಇಂತಹ ಖಾಸಗಿ ಲ್ಯಾಬೋರೇಟರಿಗಳ ಹಗಲು ದರೋಡೆ ನಿಲ್ಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.












Click it and Unblock the Notifications