ಬೆಂಗಳೂರು : ಮೂವರು ಶಾಲಾ ಮಕ್ಕಳನ್ನು ಕೊಂದ ಪಾಪಿ
ಬೆಂಗಳೂರು, ಸೆಪ್ಟೆಂಬರ್, 08 : ಶಾಲೆಯಿಂದ ಮನಗೆ ವಾಪಸ್ ಆಗುತ್ತಿದ್ದ ಮೂವರು ಮಕ್ಕಳನ್ನು ಅಪಹರಣ ಮಾಡಿ ಮ್ಯಾನ್ಹೋಲ್ಗೆ ತಳ್ಳಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸರು ಫಯೂಮ್ ಖಾನ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ಮಕ್ಕಳನ್ನು ಆಲಿ ಅಬ್ಬಾಸ್ ಬೇಗ್ (8), ಉಸ್ಮಾ ಬೇಗಂ (6), ರಹೀಂ ಬೇಗ್ (4) ಎಂದು ಗುರುತಿಸಲಾಗಿದೆ. ಆ.27ರಂದು ಪಿಳ್ಳಣ್ಣ ಗಾರ್ಡ್ನ್ನಲ್ಲಿನ ಶಾಲೆಗೆ ಹೋಗಿದ್ದ ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿದ್ದರು. ಮಕ್ಕಳ ತಾಯಿ ನಾಜಿಯಾ ಬೇಗಂ ಬಾಣಸವಾಡಿ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು. [ಬುದ್ಧಿವಾದ ಹೇಳಿದ್ದಕ್ಕೆ ಟೆಕ್ಕಿಯನ್ನು ಕೊಂದರು]

ಸೋಮವಾರ ಮೂವರು ಮಕ್ಕಳು ಕೊಲೆಯಾಗಿರುವುದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಡುಗೊಂಡನಹಳ್ಳಿಯ ನಿವಾಸಿ ಫಯೂಮ್ ಖಾನ್ (24)ನನ್ನ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಶವಕ್ಕಾಗಿ ಮಂಗಳವಾರ ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. [ಬೆಂಗಳೂರಲ್ಲಿ ನಾಲ್ವರು ಸುಪಾರಿ ಹಂತಕರ ಬಂಧನ]
ಮೂವರು ಮಕ್ಕಳನ್ನು ಕೊಂದ ಖಾನ್ : ಫಯೂಮ್ ಖಾನ್ ಮತ್ತು ನಾಜಿಯಾ ಬೇಗಂ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದ ನಾಜಿಯಾ ಪತಿ ಇಲಿಯಾಸ್ ಬೇಗ್ ಆರು ತಿಂಗಳ ಹಿಂದೆ ನಾಜಿಯಾಳನ್ನು ಬಿಟ್ಟು ಹೈದರಾಬಾದ್ಗೆ ತೆರಳಿದ್ದರು.
ಖಾನ್ ಪ್ರತಿದಿನ ನಾಜಿಯಾ ಮನೆಗೆ ಬಂದು ಹೋಗುತ್ತಿದ್ದ. ಆ.26ರಂದು ಆತ ನಾಜಿಯಾ ಮನಗೆ ಬಂದಿದ್ದ. ಆಗ ನಾಜಿಯಾ ಮತ್ತೊಬ್ಬ ವ್ಯಕ್ತಿಯ ಜೊತೆಗಿರುವುದನ್ನು ಆತ ನೋಡಿದ್ದ. ಇದರಿಂದ ಕೋಪಗೊಂಡ ಆತ ಮಕ್ಕಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಖಾನ್ ಆ.27ರಂದು ಶಾಲೆಯಿಂದ ಮಕ್ಕಳು ಮನೆಗೆ ಹೋಗುತ್ತಿದ್ದಾಗ ಅವರನ್ನು ಅಪಹರಣ ಮಾಡಿದ್ದ. ಕಾಡುಗೊಂಡನಹಳ್ಳಿ ವರ್ತುಲ ರಸ್ತೆಯಲ್ಲಿರುವ ಕಿರು ಅರಣ್ಯದ ಬಳಿ ಮಕ್ಕಳನ್ನು ಮ್ಯಾನ್ ಹೋಲ್ಗೆ ತಳ್ಳಿ ಕೊಲೆ ಮಾಡಿದ್ದ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.
ಸೋಮವಾರ ಸಂಜೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಕೊಲೆಯಾದ ಮಕ್ಕಳ ಶವಗಳು ಇನ್ನೂ ಸಿಕ್ಕಿಲ್ಲ. ಮಂಗಳವಾರ ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳಿಗಾಗಿ ಹುಡುಕಾಟ ನಡೆಸಲಿದ್ದಾರೆ.












Click it and Unblock the Notifications