ಕೆಂಪೇಗೌಡ ಏರ್ಪೋರ್ಟ್ ಸುತ್ತಮುತ್ತಲ ನಿವಾಸಿಗಳಿಗೆ ನಿತ್ಯ ನರಕ
ಬೆಂಗಳೂರು, ಮೇ 13: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಸ್ತರಿಸಲಾಗುತ್ತಿದ್ದು, ಇದರಿಂದ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ನಿತ್ಯ ನರಕವಾಗಿದೆ.
ಮನೆ, ರಸ್ತೆಗಳೆಲ್ಲವೂ ದೂಳು, ಮಣ್ಣಿನಿಂದ ತುಂಬಿ ಹೋಗಿದೆ, ಹೊರಗಡೆ ಹೊರಟರೆ ಸಾಕು ಉಸಿರುಗಟ್ಟಿಸುವ ದೂಳಿನಿಂದ ಬೇಸತ್ತಿದ್ದೇವೆ, ಇದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್(ಬಿಐಎಎಲ್) ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಆದರೆ ಹಳ್ಳಿ ಜನರು ಮಾತ್ರ ಮೂಗು ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಲನಹಳ್ಳಿ, ಬಿಕೆ ಹಳ್ಳಿ, ಬೇಗೂರು, ಚಿಕ್ಕನಹಳ್ಳಿ ನಿವಾಸಿಗಳು ಹೇಳುವ ಪ್ರಕಾರ ಅವರ ಮನೆ, ಜಮೀನು, ಬೆಳೆ, ಅಂಗಡಿಗಳು ಎಲ್ಲವೂ ದೂಳಿನಿಂದ ಆವೃತವಾಗಿದೆ. ಎರಡನೇ ರನ್ವೇ ನಿರ್ಮಾಣ ಕಾರ್ಯವನ್ನು 2017ರಲ್ಲೇ ಆರಂಭಿಸಲಾಗಿದ್ದರೂ ಇನ್ನೂ ಮುಗಿದಿಲ್ಲ.

ಒಂದು ಕಡೆಯಿಂದ ಮಣ್ಣನ್ನು ಅಗೆದು ಟ್ರಕ್ ಮೂಲಕ ಇನ್ನೊಂದು ಕಡೆಗೆ ಕೊಂಡೊಯ್ಯುತ್ತಾರೆ. ಗಾಳಿ ಬಂದಾಗ ಎಲ್ಲಾ ದೂಳು ಬೆಳೆಗಳು, ಮನೆಯ ಮೇಲೆ ಹೋಗಿ ತುಂಬಿಕೊಳ್ಳುತ್ತದೆ.
ಒಟ್ಟು 500ಕ್ಕಿಂತಲೂ ಹೆಚ್ಚಿನ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಮನೆಯಲ್ಲಿರುವ ಎಲ್ಲಾ ಪದಾರ್ಥಗಳು, ವಸ್ತುಗಳ ಮೇಲೆ ದೂಳು ಆವರಿಸಿಕೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.












Click it and Unblock the Notifications