ಗೋಲಿಬಾರ್: ಯಡಿಯೂರಪ್ಪಗೆ ಕೇರಳ ಸಿಎಂ ಪತ್ರ
ಬೆಂಗಳೂರು, ಡಿ. 20: ಮಂಗಳೂರಿನಲ್ಲಿ ಕೇರಳ ಪತ್ರಕರ್ತರ ಬಂಧನಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಿನ್ನೆ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಮಾಡಿದ್ದ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟಿದ್ದರು. ಗೋಲಿಬಾರ್ ನಂತರ ವರದಿ ಮಾಡಲು ಕೇರಳದ ಪ್ರಮುಖ ಟಿವಿ ವಾಹಿನಿಗಳು, ಪತ್ರಿಕೆಗಳು ಹಾಗೂ ಡಿಜಿಟಲ್ ಪತ್ರಕರ್ತರ 50ಕ್ಕೂ ಹೆಚ್ಚು ಪ್ರತಿನಿಧಿಗಳ ತಂಡ ಮಂಗಳೂರಿಗೆ ಬಂದಿತ್ತು. ವರದಿ ಮಾಡುವ ಸಂದರ್ಭದಲ್ಲಿ ಇವತ್ತು ಏಕಾಏಕಿ ವರದಿಗಾರರು, ಕ್ಯಾಮರಾಮ್ಯಾನ್ ಹಾಗೂ ಪ್ರೆಸ್ ಫೋಟೊಗ್ರಾಫರ್ಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು, ವರದಿ ಮಾಡದಂತೆ ತಡೆ ಒಡ್ಡಿದ್ದರು.
ಮಂಗಳೂರು ಗಲಭೆ ಪೊಲೀಸರ ಪೂರ್ವ ನಿಯೋಜಿತ
ಮಾಧ್ಯಮ ಪ್ರತಿನಿಧಿಗಳು ವರದಿ ಮಾಡುವುದನ್ನು ತಡೆದಿರುವ ಕರ್ನಾಟಕ ಪೊಲೀಸರ ಕ್ರಮವನ್ನು ಪ್ರಸ್ತಾಪಿಸಿರುವ ಪಿಣರಾಯಿ ವಿಜಯನ್, ಮುಕ್ತ ವರದಿ ಮಾಡಲು ಅನುಕೂಲವಾಗುವಂತೆ ಸಿಎಂ ಯಡಿಯೂರಪ್ಪ ಮಧ್ಯೆ ಪ್ರವೇಶ ಮಾಡಿ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕು. ಮಾಧ್ಯಮ ಪ್ರತಿನಿಧಿಗಳು ಭಯವಿಲ್ಲದೆ ವರದಿ ಮಾಡುವುದಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು. ಪತ್ರಕರ್ತರ ಬಗ್ಗೆ ಕೇರಳ ಸರ್ಕಾರ ಅಪಾರ ಕಳಕಳಿ ಹೊಂದಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಫೈರಿಂಗ್ನಲ್ಲಿ ಮೃತಪಟ್ಟ ಯುವಕರ ಶವವನ್ನು ಇಟ್ಟಿದ್ದ ವೆನ್ಲಾಕ್ ಶವಾಗಾರಕ್ಕೆ ವರದಿಗೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಕೇರಳದ ಖಾಸಗಿ ವಾಹಿನಿ ವರದಿಗಾರರೊಬ್ಬರು ಟಿವಿ ಲೈವ್ ಕೊಡುತ್ತಿದ್ದ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಅವರು ತಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಮಂಗಳೂರು ಪೊಲೀಸರು ಕೇರಳ ಪತ್ರಕರ್ತರನ್ನು ಬಿಡುಗಡೆ ಮಾಡಿದ್ದಾರೆ.