ಬಿಬಿಎಂಪಿ ಕಡತದ ಬೆಂಕಿ ಪ್ರಕರಣದಲ್ಲಿ ಡಿಸಿಎಂ ನೀರು ಕುಡಿತೀರಾ: ಶ್ರೀಪಾದ ರೇಣು
ಬೆಂಗಳೂರು ಸೆಪ್ಟೆಂಬರ್ 05: "ಉಪ್ಪು ತಿಂದವರು ನೀರು ಕುಡಿಯಲೇ ಬೇಕು" ಎಂದು ಡಿ.ಕೆ ಶಿವಕುಮಾರ್ ವಿರುದ್ದ ಹೇಳಿಕೆ ನೀಡಿದ್ದ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ್ ಅವರ ವಿರುದ್ದ ಕಾಂಗ್ರೆಸ್ ವಕ್ತಾರರಾದ ಕೆಂಗಲ್ ಶ್ರೀಪಾದ ರೇಣು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. 2011 ರ ಬಿಬಿಎಂಪಿ ಕಡತದ ಬೆಂಕಿ ಪ್ರಕರಣದಲ್ಲಿ ಸದ್ಯದಲ್ಲೇ ಉಪ ಮುಖ್ಯಮಂತ್ರಿಗಳು ನೀರು ಕುಡಿಯಲಿದ್ದಾರೆ ಎಂದಿದ್ದಾರೆ.
ಆಪರೇಷನ್ ಕಮಲದ ಪ್ರಮುಖ ರೂವಾರಿ ಹಾಗೂ ಮುಂದಾಳಾಗಿದ್ದ ಈಗಿನ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ ಅವರು ತಾವೇ ಗಾಜಿನ ಮನೆಯಲ್ಲಿದ್ದು ಬೇರೆಯವರ ಮನೆಗೆ ಕಲ್ಲು ತೂರುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. 17 ಜನ ಅನರ್ಹ ಶಾಸಕರನ್ನು ಮುಂಬಯಿಯಲ್ಲಿ ಪಂಚತಾರಾ ಹೋಟೇಲ್ ನಲ್ಲಿ ತಿಂಗಳುಗಟ್ಟಲೆ ಇಡಲು ಹಾಗೂ ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಹಣ ಎಲ್ಲಿಂದ ಬಂತು. ಹಾಗೆಯೇ, ಇದಕ್ಕೆ ಆದ ಖರ್ಚುಗಳ ಬಗ್ಗೆ ದಾಖಲೆ ಯನ್ನು ನೀಡಿ ಎಂದು ಆಗ್ರಹಿಸಿದರು.
ನಿಧಿ ವರ್ಗಾವಣೆಯಿಂದ ಆರ್ ಬಿಐ ಸ್ವಾಯತ್ತತೆಗೆ ಧಕ್ಕೆ : ಕಾಂಗ್ರೆಸ್ ಆರ್ಥಿಕ ತಜ್ಞ ರೇಣು
ಕೇವಲ 8 ವರ್ಷಗಳ ಅವಧಿಯಲ್ಲಿ ತಮ್ಮ ಆಸ್ತಿಯನ್ನು ಇಷ್ಟು ಹೆಚ್ಚಳ ವಾಗಿರುವುದರ ಬಗ್ಗೆ ಸರಿಯಾದ ದಾಖಲೆಗಳನ್ನ ನೀಡಬೇಕು ಎಂದು ಆಗ್ರಹಿಸಿದ ಅವರು, ತಾವು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನಡೆದ ಕಡತಗಳಿಗೆ ಬೆಂಕಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನುವುದರ ಬಗ್ಗೆ ನೆನೆಪಿಸಿಕೊಳ್ಳಬೇಕು ಎಂದರು.
ಇಂತಹ ಹೇಳಿಕೆಗಳನ್ನು ನೀಡುವುದರ ಬದಲು ರಾಜ್ಯದ ಅಭಿವೃದ್ದಿಯತ್ತ ಗಮನ ನೀಡಿ. ಕೇಂದ್ರ ಬಿಜೆಪಿ ಕಾಂಗ್ರೆಸ್ ನಾಯಕರನ್ನು ತನ್ನ ಅಧಿಕಾರ ಬಳಸಿ ತುಳಿಯುತ್ತಿರುವುದು ಎಲ್ಲರ ಗಮನಕ್ಕೆ ಬಂದ ವಿಚಾರವಾಗಿದೆ. ಕಾಲ ಚಕ್ರ ತಿರುಗುತ್ತಲೇ ಇದ್ದು ಮೇಲೆ ಇದ್ದವರು ಕೆಳಗೆ ಬರಲೇ ಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎನ್ನುವ ನಿಮ್ಮ ಹೇಳಿಕೆ ನಿಮಗೂ ಮುಂಬರುವ ಕಾಲಘಟ್ಟದಲ್ಲಿ ಅನ್ವಯವಾಗಲಿದೆ ಎಂದು ಹೇಳಿದರು.