ಸೆ.8ಕ್ಕೆ ಕಾರ್ತಿಕ್ ಗೌಡ ಜಾಮೀನು ಅರ್ಜಿ ತೀರ್ಪು
ಬೆಂಗಳೂರು, ಸೆ.5: ಅತ್ಯಾಚಾರ, ವಂಚನೆ ಆರೋಪ ಹೊತ್ತು ಬಂಧನ ಭೀತಿಯಿಂದತಲೆ ಮರೆಸಿಕೊಂಡಿರುವ ಕಾರ್ತಿಕ್ ಗೌಡ ಅವರಿಗೆ ಸೆಷನ್ಸ್ ನ್ಯಾಯಾಲಯ ಶನಿವಾರ ನಿರೀಕ್ಷಣಾ ಜಾಮೀನು ಮಂಜೂರಾತಿ ಕುರಿತಂತೆ ತೀರ್ಪು ಪ್ರಕಟಿಸಿಲ್ಲ. ಕೇಂದ್ರ ರೈಲ್ವೆ ಸಚಿವ ಡಿ.ವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ವಿರುದ್ಧ ನಟಿ ನಟಿ ಮೈತ್ರಿಯಾ ಗೌಡ ಪ್ರಕರಣ ದಾಖಲಿಸಿದ್ದು, ಕೋರ್ಟಿನಲ್ಲಿ ಹಾಜರಿದ್ದರು.
ಈ ಪ್ರಕರಣದ ವಿಚಾರಣೆಗೆ ಇಲ್ಲಿವರೆಗೂ ಹಾಜರಾಗದೆ ಅರೆಸ್ಟ್ ವಾರೆಂಟ್ ಪಡೆದುಕೊಂಡಿದ್ದ ಕಾರ್ತಿಕ್ ಗೌಡ ಅವರು ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಹಾಕಿದ್ದರು. ಈ ಅರ್ಜಿ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ಶುಕ್ರವಾರ ಮುಕ್ತಾಯಗೊಂಡಿತ್ತು.
ಶುಕ್ರವಾರ ಕಾರ್ತಿಕ್ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಮತ್ತು ಸರಕಾರಿ ಅಭಿಯೋಜಕ ಹೊಸಮನಿ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಮುದಿಗೌಡರರ್ ಅವರು ತೀರ್ಪುನ್ನು ಶನಿವಾರಕ್ಕೆ ಕಾಯ್ದರಿಸಿದ್ದರು.ಶನಿವಾರ ನ್ಯಾ.ಮುದಿಗೌಡರ್ ಅವರು ತೀರ್ಪು ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, ಅಂತಿಮ ತೀರ್ಪು ಸೋಮವಾರ(ಸೆ.8)ದಂದು ಪ್ರಕಟಿಸಲಾಗುವುದು ಎಂದು ನ್ಯಾ. ಮುದಿಗೌಡರ್ ಹೇಳಿದರು.

ಕಾರ್ತಿಕ್ ಗೌಡ ತಮ್ಮನ್ನು ವಿವಾಹವಾಗಿದ್ದು, ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ನಟಿ ಮೈತ್ರಿಯಾ ಗೌಡ ಅವರು ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. [ಯಾವುದೇ ಕ್ಷಣದಲ್ಲಿ ಕಾರ್ತಿಕ್ ಗೌಡ ಬಂಧನ]
ಕಾರ್ತಿಕ್ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಆರ್.ಟಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಗೌಡ ಅವರಿಗೆ ಸೆಪ್ಟೆಂಬರ್ 1 ರಂದು ನೋಟೀಸ್ ನೀಡಿದ್ದರು. ಸೆಪ್ಟೆಂಬರ್ 3 ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದ್ದರು. ವಿಚಾರಣೆಗೆ ಹಾಜರಾಗದ ಕಾರ್ತಿಕ್ ಗೆ ಕೋರ್ಟ್ ಬಂಧನ ವಾರೆಂಟ್ ನೀಡಿತ್ತು. ನಂತರ ಮೂರು ವಿಶೇಷ ಪೊಲೀಸ್ ತಂಡ ರಚನೆ ಮಾಡಿ ಕೊಡಗು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಕಾರ್ತಿಕ್ ಗಾಗಿ ಹುಡುಕಾಟ ನಡೆಸಲಾಗಿದೆ.[ಮೈತ್ರಿಯಾ ಪ್ರಕರಣ: ಬಿಗ್ ಬಾಸ್ ಗಳಿಗೆ ಬಿಗ್ ಬಾಸ್]
ಬೆಂಗಳೂರಿನಲ್ಲಿ ಸದಾನಂದ ಗೌಡ ಅವರ ಪತ್ನಿ, ಕಾರ್ತಿಕ್ ತಾಯಿ ಡಾಟಿ ಅವರ ಹೇಳಿಕೆ ಪಡೆಯಲಾಗಿದೆ. ಮಂಗಳೂರಿನ ಮನೆ ತೆರಳಿ ಕಾರ್ತಿಕ್ ಆಪ್ತರು, ಗೆಳೆಯರು ಹಾಗೂ ಕಾರು ಚಾಲಕರ ಹೇಳಿಕೆ ಸಂಗ್ರಹಿಸಲಾಗಿದೆ. ಕಾರ್ತಿಕ್ ಗೆ ಸಂಬಂಧಿಸಿದ ಬಟ್ಟೆ ಬರೆ ಇನ್ನಿತರ ವಸ್ತುಗಳಲ್ಲಿ ಕೆಲವನ್ನು ಬೆಂಗಳೂರು, ಕೊಡಗು, ಮಂಗಳೂರಿನ ಮನೆಗಳಲ್ಲಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ತಿಕ್ ಫೋನ್ ಸದ್ಯಕ್ಕೆ ಸ್ವಿಚ್ ಆಫ್ ಆಗಿದೆ.












Click it and Unblock the Notifications