Bengaluru New Airport: ಈ ಕಾರಣಕ್ಕೆ ಬೆಂಗಳೂರಿಗೆ 2ನೇ ಏರ್ಪೋರ್ಟ್ ಬೇಡ ಅಂತಿದ್ದಾರೆ ಜನ
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಈಗಾಗಲೇ ಉತ್ತಮ ಸೇವೆ ಮೂಲಕ ಜಾಗತಿಕವಾಗಿ ಮನ್ನಣೆ ಗಳಿಸಿಕೊಂಡಿದೆ. ಈಗ ದಟ್ಟಣೆ ನಿಯಂತ್ರಿಸುವ ಸಲುವಾಗಿ ಬೆಂಗಳೂರಿಗೆ ಎರಡನೇ ಏರ್ಪೋರ್ಟ್ ನಿರ್ಮಿಸುವ ಬಗ್ಗೆ ಚರ್ಚೆಗಳು ಜೋರಾಗಿವೆ. ಈಗಾಗಲೇ ಇದಕ್ಕಾಗಿ ಹಲವೆಡೆ ಸ್ಥಳ ನಿಗದಿ ಕೂಡ ಆಗಿದ್ದು, ಜನರಿಂದ ವಿರೋಧವೂ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣಗಳಲ್ಲೂ ಜನ ತಿಳಿಸಿದ್ದಾರೆ.
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಇದನ್ನು ಕೆಲವರು ಸ್ವಾಗತಿಸುತ್ತಿದ್ದರೆ, ಕನ್ನಡಿಗರಿಂದ ಭಾರಿ ವಿರೋಧವೂ ವ್ಯಕ್ತವಾಗುತ್ತಿದೆ. ಎರಡನೇ ಏರ್ಪೋರ್ಟ್ನಿಂದ ರಾಜ್ಯದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಸರ್ಕಾರಗಳು ಹೆಜ್ಜೆ ಇಟ್ಟಿವೆ. ಆದರೆ, ಇದರಿಂದ ಕನ್ನಡಿಗರಿಗಂತೂ ಲಾಭ ಇಲ್ಲ. ಇನ್ಯಾರೋ ಲಾಭ ಪಡೆಯುವ ಎರಡನೇ ಏರ್ಪೋರ್ಟ್ ನಮಗೇಕೆ? ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.

"ಈಗಾಗಲೇ ದೇವನಹಳ್ಳಿ ಬಳಿ ನಿರ್ಮಾಣವಾಗಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಲವರಿಗೆ ಉದ್ಯೋಗಾವಕಾಶಗಳು ಸಿಕ್ಕಿದ್ದರೂ, ಇದರಲ್ಲಿ ಕನ್ನಡಿಗರಿಗೆ ಸಿಕ್ಕಿರುವ ಪಾಲು ಅಲ್ಪವಷ್ಟೇ. ಅಲ್ಲಿನ ಉದ್ಯೋಗಾವಕಾಶಗಳೆಲ್ಲ ಬೇರೆ ರಾಜ್ಯದವರ ಪಾಲಾಗಿದೆ. ಏರ್ಪೋರ್ಟ್ನಿಂದ ಅಲ್ಲಿನ ಜಮೀನುಗಳಿಗೆ ಬಂಗಾರದ ಬೆಲೆ ಬಂದಿದೆ. ಹಣದ ಆಸೆಗಾಗಿ ಈ ಹಲವು ವರ್ಷಗಳ ಹಿಂದೆಯೇ ಜಮೀನುಗಳನ್ನು ಕಳೆದುಕೊಂಡು ಜನ ಈಗ ಬೀದಿಗೆ ಬಂದಿದ್ದಾರೆ. ಎರಡನೇ ಏರ್ಪೋರ್ಟ್ ನಿರ್ಮಾಣವಾದರೂ ಇದೇ ಸ್ಥಿತಿ ಅಲ್ಲಿಯೂ ನಿರ್ಮಾಣವಾಗುತ್ತದೆ" ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
"ಕರ್ನಾಟಕದಲ್ಲಿ ಈಗಾಗಲೇ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಇನ್ನು ಬೆಂಗಳೂರಿನಲ್ಲಿ 2ನೇ ಏರ್ಪೋರ್ಟ್ ನಿರ್ಮಾಣವಾದರೆ ವಲಸಿಗರ ಸಂಖ್ಯೆ ಹೆಚ್ಚಾಗುತ್ತದೆಯೇ ಹೊರತು ಕನ್ನಡಿಗರಿಗೆ ಉಪಯೋಗವಿಲ್ಲ. ಇವುಗಳಿಂದ ಕೃಷಿ ಭೂಮಿ ಕಳೆದುಕೊಳ್ಳುವುದು ಕೂಡ ಕನ್ನಡಿಗ ರೈತರು, ಬೆಳೆಯುವುದು ಹೊರರಾಜ್ಯದ ಉದ್ಯಮಿಗಳು ಮಾತ್ರ. ರಾಜಕಾರಣಿಗಳು ಕೂಡ ತಮ್ಮ ಲಾಭಕ್ಕಾಗಿ ಎರಡನೇ ಏರ್ಪೋರ್ಟ್ ನಿರ್ಮಿಸಲು ಮುಂದಾಗಿದ್ದಾರೆ. ರಾಜಕಾರಣಿಗಳು, ರಿಯಲ್ ಎಸ್ಟೇಟ್ ಹಾಗೂ ವಲಸಿಗರಿಗೆ ವರದಾನವಾಗುವ ಇಂತಹ ಯೋಜನೆಗಳನ್ನು ವಿರೋಧಿಸಲೇಬೇಕು" ಎನ್ನುತ್ತಿದ್ದಾರೆ.

"ಇಂತಹ ಯೋಜನೆಗಳು ನಿಜಕ್ಕೂ ಕನ್ನಡಿಗರಿಗೆ ಮಾರಕ. ಇವರ ಪ್ರಕಾರ ವಲಸಿಗರಿಗೆ ಹಾಗೂ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವದೇ ಅಭಿವೃದ್ಧಿಯೇ? ಕರ್ನಾಟಕದಲ್ಲಿ ವಲಸಿಗರ ಜನಸಂಖ್ಯೆ ಹೆಚ್ಚಾಗಿರುವುದು ಸಾಕು. ಬೆಂಗಳೂರು ಬೆಳಿದಿರುವುದೂ ಸಾಕು! ಇನ್ನೂ ಬೆಳೆದರೆ ತುಂಬಿಕೊಳ್ಳೋದು ಹಿಂದಿ ವಲಸಿಗರು ಮಾತ್ರ. ಕನ್ನಡಿಗರಿಗೆ ಯಾವ ರೀತಿಯಲ್ಲೂ ಅನುಕೂಲವಾಗದ ಈ ಯೋಜನೆ ನಮಗೆ ಬೇಡವೇ ಬೇಡ" ಎಂದು ವಿರೋಧಿಸುತ್ತಿದ್ದಾರೆ.
ಬೆಂಗಳೂರು ಸಮೀಪ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಶೀಘ್ರದಲ್ಲೇ ಸ್ಥಳವನ್ನು ಘೋಷಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ. ವಿಮಾನ ನಿಲ್ದಾಣ ಸ್ಥಾಪನೆಗೆ ಈಗಾಗಲೇ ಹಲವು ಪ್ರದೇಶಗಳ ಪ್ರಸ್ತಾವ ಬಂದಿತ್ತು. ಅವುಗಳನ್ನು ಕೂಲಂಕಶವಾಗಿ ಪರಿಶೀಲಿಸಲಾಗಿದ್ದು, ಮುಂದಿನ ದಶಕಗಳಲ್ಲಿ ಆಗಲಿರುವ ಬೆಳವಣಿಗೆ, ಸಂಚಾರ ಮತ್ತು ವಿಮಾನ ಹಾರಾಟ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ಸ್ಥಳ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications