ಇಲಾಖೆಯಲ್ಲಿ ಸಿಎಂ, ರೇವಣ್ಣ ಹಸ್ತಕ್ಷೇಪ: ಎಂಟಿಬಿ ನಾಗರಾಜ್ ಆಕ್ರೋಶ
ಬೆಂಗಳೂರು, ಜುಲೈ 13: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಸಿದ್ಧರಿರುವುದಾಗಿ ಹೇಳಿದ ಬೆನ್ನಲ್ಲೇ ಅತೃಪ್ತ ಶಾಸಕರನ್ನು ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮನವೊಲಿಕೆ ಮಾಡುವ ಪ್ರಯತ್ನ ದೋಸ್ತಿ ಪಾಳಯದಲ್ಲಿ ಜೋರಾಗಿದೆ.
ಮುಂಬೈನಲ್ಲಿ ಬೀಡುಬಿಟ್ಟಿರುವ ಶಾಸಕರನ್ನು ಹೇಗಾದರೂ ಮಾಡಿ ಸೋಮವಾರ ಬೆಳಿಗ್ಗೆಯ ಒಳಗೆ ಬೆಂಗಳೂರಿಗೆ ಕರೆತರಲೇಬೇಕು ಎಂದು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ಲ್ಯಾನ್ ರೂಪಿಸಲಾಗಿದೆ. ಅದಕ್ಕೂ ಮೊದಲು ಬೆಂಗಳೂರಿನಲ್ಲಿರುವ ಶಾಸಕರನ್ನು ಮನವೊಲಿಸಿ ರಾಜೀನಾಮೆ ಹಿಂಪಡೆಯುವಂತೆ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ.
ನಾನು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿಕೆ ನೀಡುತ್ತಲೇ ವಿಧಾನಸೌಧಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿರುವ ವಸತಿ ಸಚಿವ ಎಂಟಿಬಿ ನಾಗರಾಜ್ ಅವರನ್ನು ಮೊದಲು ಸಮಾಧಾನಗೊಳಿಸಿ ಅವರನ್ನು ಸರ್ಕಾರದಲ್ಲಿ ಕೈಜೋಡಿಸುವಂತೆ ಮಾಡುವುದಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಬೆಳಿಗಿನ ಜಾವ 5 ಗಂಟೆಗೇ ಡಿಕೆ ಶಿವಕುಮಾರ್ ಅವರು ಎಂಟಿಬಿ ನಾಗರಾಜ್ ಅವರ ನಿವಾಸಕ್ಕೆ ದೌಡಾಯಿಸಿದ್ದಾರೆ.
ನಿಮ್ಮ ಸಮಸ್ಯೆಗಳೇನೇ ಇದ್ದರೂ ಪರಿಹಾರ ಮಾಡುತ್ತೇವೆ. ಸರ್ಕಾರ ಬೀಳಲು ಬಿಡಬೇಡಿ. ರಾಜೀನಾಮೆ ವಾಪಸ್ ತೆಗೆದುಕೊಳ್ಳಿ ಎಂದು ಡಿಕೆ ಶಿವಕುಮಾರ್ ಅವರು ಎಂಟಿಬಿ ನಾಗರಾಜ್ ಅವರ ಕೋಪವನ್ನು ಶಮನಗೊಳಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರ ಮಾತುಗಳಿಗೆ ಕಿವಿಗೊಟ್ಟು ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಳ್ಳಲು ಎಂಟಿಬಿ ನಾಗರಾಜ್ ಸುತಾರಾಂ ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.

ನನಗೆ ತಿಳಿಯದಂತೆ ವರ್ಗಾವಣೆ
'ನನಗೆ ತಿಳಿಯದಂತೆ ನನ್ನ ಇಲಾಖೆಯಲ್ಲಿರುವ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ರಾಜೀವ್ ವಸತಿ ಯೋಜನೆ ಅರ್ಧಕ್ಕೆ ನಿಂತಿದೆ. ಸಾವಿರಾರು ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕಿತ್ತು. ಸಿಎಂ ಬಳಿ ಹೋಗಿ ಕೇಳಿದರೆ ಕ್ಯಾರೇ ಅಂದಿಲ್ಲ' ಎಂದು ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ನಾನು ಹೆಸರಿಗಷ್ಟೇ ಸಚಿವ
ಈ ಎಲ್ಲ ಬೆಳವಣಿಗೆಗಳಿಂದ ಸಾಕಾಗಿ, ಬೇಸೆತ್ತು ರಾಜೀನಾಮೆ ನೀಡಿದ್ದೇನೆ. ಅಧಿಕಾರ ಇಲ್ಲದೆ ಇದ್ದರೂ ಪರವಾಗಿಲ್ಲ. ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಯಾರೇ ಮನವಿ ಮಾಡಿದರೂ ಒಪ್ಪಿಕೊಳ್ಳುವುದಿಲ್ಲ. ನಿಮಗೆ, ದೇವೇಗೌಡರ ಕುಟುಂಬಕ್ಕೆ ಮತ್ತು ಪರಮೇಶ್ವರ್ ಅವರಿಗೆ ಮಾತ್ರ ಮೈತ್ರಿ ಸರ್ಕಾರ ಬೇಕಿರುವುದು. ನಾನಿಲ್ಲಿ ಹೆಸರಿಗಷ್ಟೇ ಸಚಿವ. ಇಲಾಖೆಯ ಎಲ್ಲ ವ್ಯವಹಾರಗಳಲ್ಲೂ ಸಿಎಂ ಮತ್ತು ರೇವಣ್ಣ ಅವರು ಹಸ್ತಕ್ಷೇಪ ಮಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಿದ್ದರಾಮಯ್ಯಗೆ ಕಿಮ್ಮತ್ತಿಲ್ಲ
ನಮ್ಮ ನಾಯಕ ಸಿದ್ದರಾಮಯ್ಯ ಅವರಿಗೆ ಮೈತ್ರಿ ಸರ್ಕಾರದಲ್ಲಿ ಕಿಮ್ಮತ್ತು ನೀಡಿಲ್ಲ. ಅದಕ್ಕೆ ನಮ್ಮ ದಾರಿ ನೋಡಿಕೊಂಡಿದ್ದೇವೆ. ನಮ್ಮನ್ನು ಬಿಟ್ಟುಬಿಡಿ. ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯಿಲ್ಲ. ಒಂದು ಬಾರಿ ಸಚಿವ ಆಗಬೇಕಿತ್ತು. ಆಗಿದ್ದೇನೆ, ಅಷ್ಟೆ. ನಾನು ಬಿಜೆಪಿಗೆ ಹೋಗುವವನಲ್ಲ ಎಂದು ಡಿಕೆ ಶಿವಕುಮಾರ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.

ಸಿಎಂ, ರೇವಣ್ಣ ಬಳಿ ನಾನು ಮಾತನಾಡುತ್ತೇನೆ
ಆದರೂ ಎಂಟಿಬಿ ಮನವೊಲಿಕೆಗೆ ಕಸರತ್ತು ಮುಂದುವರಿಸಿರುವ ಡಿಕೆ ಶಿವಕುಮಾರ್, ಸಿಎಂ ಮತ್ತು ರೇವಣ್ಣ ಅವರ ಬಳಿ ನಾನು ಮಾತನಾಡುತ್ತೇನೆ. ಒಂದು ಬಾರಿ ಒಪ್ಪಿಕೊಂಡು ರಾಜೀನಾಮೆ ನಿರ್ಧಾರ ಹಿಂದಕ್ಕೆ ತೆಗೆದುಕೊಳ್ಳಿ. ತೊಂದರೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅದಕ್ಕೆ ಅವರು ಒಪ್ಪಿಕೊಳ್ಳಲಿಲ್ಲ ಎಂದು ತಿಳಿದುಬಂದಿದೆ.












Click it and Unblock the Notifications